ಸಚಿವ ಸುರೇಶ್ ಕುಮಾರ್ ಹೇಳಿಕೆ ವಿರುದ್ಧ ಖಾಸಗಿ ಶಾಲಾ ಒಕ್ಕೂಟಗಳ ಆಕ್ರೋಶ !
ಬೆಂಗಳೂರು, ನವೆಂಬರ್ 24: ಖಾಸಗಿ ಶಾಲೆಗಳ ಶುಲ್ಕದ ಬಗ್ಗೆ ಸಚಿವ ಸುರೇಶ್ ಕುಮಾರ್ ಅವರು ನೀಡಿರುವ ಹೇಳಿಕೆ ವಿರುದ್ಧ ಖಾಸಗಿ ಶಾಲಾ ಆಡಳಿತ ಮಂಡಳಿ ಒಕ್ಕೂಟಗಳು ತಿರುಗಿಬಿದ್ದಿವೆ. ಮಾಧ್ಯಮಗಳ ಪ್ರಚಾರ ಪ್ರಿಯತೆಗಾಗಿ ಸಚಿವರು ನೀಡಿರುವ ಅವೈಜ್ಙಾನಿಕ ಹೇಳಿಕೆಯನ್ನು ಕೂಡಲೇ ವಾಪಸು ಪಡೆಯಬೇಕು. ಇಲ್ಲದಿದ್ದರೆ, ನವೆಂಬರ್ 30 ರಿಂದ ಆನ್ಲೈನ್ ಕ್ಲಾಸ್ ರದ್ದು ಪಡಿಸಿ ಹೋರಾಟಕ್ಕೆ ಇಳಿಯುತ್ತಿದ್ದೇವೆ. ಮನುಷ್ಯತ್ವ ಇಲ್ಲದೇ ಕೊಟ್ಟಿರುವ ಹೇಳಿಕೆ ಸಚಿವರು ವಾಪಸು ಪಡೆಯಬೇಕು ಎಂದು ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಕ್ಯಾಮ್ಸ್ ನ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ ಶಾಲೆಗಳನ್ನು ಆರಂಭಿಸುವ ಬಗ್ಗೆ ಸಭೆ ಕರೆದಿದ್ದ ಸಚಿವರು, ಖಾಸಗಿ ಶಾಲೆಗಳ ಶುಲ್ಕದ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದರು. ಒಂದನೇ ತರಗತಿಯಿಂದ ಒಂಭತ್ತನೇ ತರಗತಿ ವರೆಗೂ ಶಾಲಾ ಶುಲ್ಕ ಕಟ್ಟದಿದ್ದರೂ ಅವರನ್ನು ತೇರ್ಗಡೆ ಮಾಡಬೇಕು. ಅನುತ್ತೀರ್ಣ ಮಾಡುವಂತಿಲ್ಲ ಎಂಬ ಹೇಳಿಕೆ ನೀಡಿದ್ದು ಅದು ಶಿಕ್ಷಣ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಶೂನ್ಯ ಕಲಿಕಾ ವರ್ಷ; ಶಿಕ್ಷಣ ಸಚಿವರ ಸ್ಪಷ್ಟನೆ
ಸಚಿವರು ನೀಡಿರುವ ಹೇಳಿಕೆ ವಿರುದ್ಧ ಖಾಸಗಿ ಶಿಕ್ಷಣ ಸಂಸ್ಥೆಗಳು ತಿರುಗಿ ಬಿದ್ದಿವೆ. ಈ ಕುರಿತು ಸಚಿವರಿಗೆ ಪತ್ರ ಬರೆದಿರುವ ಖಾಸಗಿ ಶಾಲಾ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಕ್ಯಾಮ್ಸ್ , ಸಚಿವರು ಈ ರೀತಿಯ ಅರ್ಥ ರಹಿತ ಹೇಳಿಕೆ ನೀಡುವ ಮೂಲಕ ಶಿಕ್ಷಣ ವ್ಯವಸ್ಥೆ ಮುಗಿಸಲು ಹೊರಟಿದ್ದಾರೆ. ಖಾಸಗಿ ಶಾಲೆಗಳು ಈಗಾಗಲೇ ಸಂಕಷ್ಟದಲ್ಲಿವೆ. ಕಳೆದ ವರ್ಷದ ಶುಲ್ಕ ವಸೂಲಿಯಾಗಿಲ್ಲ.
ಈ ವರ್ಷ ಶೇ. 60 ರಷ್ಟು ಪೋಷಕರು ಇನ್ನೂ ಶುಲ್ಕ ಪಾವತಿಸಿಲ್ಲ. ಇಂತಹ ಸ್ಥಿತಿಯಲ್ಲಿ ಸಚಿವರು ನೀಡಿರುವ ಹೇಳಿಕೆ ಪಾಲಕರಲ್ಲಿ ಗೊಂದಲ ಉಂಟು ಮಾಡಿದೆ. ಶಿಕ್ಷಣ ಸಂಸ್ಥೆಗಳನ್ನು ಮುಚ್ಚಬೇಕೋ ಉಳಿಸಬೇಕಾ ? ನಿಮ್ಮ ಹೇಳಿಕೆ ವಾಪಸು ಪಡೆಯಬೇಕು. ನಿಮ್ಮ ದ್ವಂಧ ಹೇಳಿಕೆಯಿಂದ ಖಾಸಗಿ ಶಿಕ್ಷಕರು ಬೀದಿಗೆ ಬಂದಿದ್ದಾರೆ. ನಿಮ್ಮ ಹೇಳಿಕೆ ವಾಪಸು ಪಡೆಯದಿದ್ದರೆ ನ. 30ರ ನಂತರ ಉಗ್ರ ಹೋರಾಟ ನಡೆಸುತ್ತೇವೆ ಎಂದು ಕ್ಯಾಮ್ಸ್ ಎಚ್ಚರಿಕೆ ನೀಡಿದೆ.
ಹಗಲಿರುಳು ಶ್ರಮಿಸುತ್ತಿರುವ ಖಾಸಗಿ ಶಿಕ್ಷಕರಿಗೆ ವೇತನ ನೀವು ನೀಡುತ್ತೀರಾ.. ಶಾಲಾ ಶಿಕ್ಷಣ ಸಂಸ್ಥೆಗಳು ಶುಲ್ಕ ವಸೂಲಿ ಮಾಡಬಾರದು ಸರಿ, ಅದರಂತೆ ಬೆಸ್ಕಾಂ, ಕಂದಾಯ ಇಲಾಖೆ, ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಆದೇಶಿಸಿ ಯಾವುದೇ ಶುಲ್ಕವನ್ನು ವಸೂಲಿ ಮಾಡಬೇಡಿ. ಸರ್ಕಾರಿ ಶಾಲೆಗಳು ಕಾರ್ಯ ನಿರ್ವಹಿಸುತ್ತಿಲ್ಲ. ಹೀಗಾಗಿ ಶಿಕ್ಷಕರಿಗೆ ಯಾಕೆ ಸರ್ಕಾರಿ ಸಂಬಳ ಕೊಡುತ್ತಿದ್ದೀರಾ ? ವೇತನ ನಿಲ್ಲಿಸಿ, ಅದು ಕೂಡ ಸಾರ್ವಜನಿಕರ ಆಸ್ತಿ ಎಂದು ಒಕ್ಕೂಟ ಪ್ರಶ್ನೆ ಮಾಡಿದೆ.
ದ್ವಂಧ ನಿಲುವು: ಕರೋನಾ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಆನ್ ಲೈನ್ ಪಾಠಕ್ಕೆ ಸ್ವತಃ ಸಚಿವರೇ ಅವಕಾಶ ಕಲ್ಪಿಸಿ ಆದೇಶ ಹೊರಡಿಸಿದ್ದರು. ಆನ್ಲೈನ್ ಪಾಠದಿಂದ ವಿದ್ಯಾರ್ಥಿಗಳಿಗೆ ಸಮಸ್ಯೆ ಆಗುತ್ತಿದೆ ಎಂಬ ಮಾತು ಕೇಳಿ ಬರುತ್ತಿದ್ದಂತೆ ಅದನ್ನು ರದ್ದು ಮಾಡಿದ್ದರು. ಜತೆಗೆ ಖಾಸಗಿ ಶಿಕ್ಷಣ ಸಂಸ್ಥೆಗಳ ಶುಲ್ಕದ ಬಗ್ಗೆ ಮಧ್ಯ ಪ್ರವೇಶಿಸಿ ಹೇಳಿಕೆ ನೀಡಿದ್ದರು. ಸಚಿವರು ದಿನಕ್ಕೊಂದು ನೀಡುವ ಆದೇಶದ ಬಗ್ಗೆ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಶಿಕ್ಷಣ ಮೂಲಭೂತ ಹಕ್ಕು. ಸುಮ್ಮನೆ ಮೂಗು ತೂರಿಸಬೇಡಿ ಎಂದು ಸಚಿವರಿಗೆ ನ್ಯಾಯಾಲಯ ಎಚ್ಚರಿಕೆ ನೀಡಿತ್ತು. ನ್ಯಾಯಾಲಯದ ಆದೇಶದ ಬಳಿಕ ರಾಜ್ಯದಲ್ಲಿ ವೈಜ್ಙಾನಿಕ ಆನ್ಲೈನ್ ತರಗತಿಗಳು ನಡೆಯುತ್ತಿದ್ದವು. ಇದೀಗ ಶಾಲಾ ಶುಲ್ಕ ಕಟ್ಟದಿದ್ದರೂ, ಪಾಸ್ ಮಾಡಬೇಕು ಎಂದು ಸಚಿವರು ನೀಡಿರುವ ಹೇಳಿಕೆಯಿಂದ ಗೊಂದಲ ಉಂಟಾಗಿದ್ದು, ವಿವಾದ ಎಬ್ಬಿಸಿದೆ.