ಖಾಸಗಿ ಶಾಲಾ ಶಿಕ್ಷಕರ ಬೇಡಿಕೆ ಈಡೇರಿಸಲು ಸರ್ಕಾರಕ್ಕೆ ಡೆಡ್ ಲೈನ್ !
ಬೆಂಗಳೂರು, ಫೆಬ್ರವರಿ 23 : ಖಾಸಗಿ ಶಾಲೆಗಳ ಬೋಧನಾ ಶುಲ್ಕ ಶೇ. 30 ಕಡಿಮೆ ಮಾಡಿದ ಸರ್ಕಾರದ ಆದೇಶ ವಿರೋಧ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಖಾಸಗಿ ಶಾಲೆ ಶಿಕ್ಷಕರು ಮತ್ತು ಆಡಳಿತ ಮಂಡಳಿ ಸದಸ್ಯರು ವಿವಿಧ ಒಕ್ಕೂಟಗಳ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ನಗರದ ರೈಲ್ವೇ ನಿಲ್ದಾಣದ ಬಳಿ ಜಮಾಯಿಸಿದ ಸಾವಿರಾರು ಶಿಕ್ಷಕರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಖಾಸಗಿ ಶಾಲೆಗಳನ್ನು ಕನಿಷ್ಠವಾಗಿ ಸರ್ಕಾರ ನಡೆಸಿಕೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ಖಾಸಗಿ ಶಾಲೆ ಶಿಕ್ಷಕರ ಸಂಘಟನೆ ಹಾಗೂ ಆಡಳಿತ ಮಂಡಳಿಗಳ ಸುಮಾರು ಹತ್ತಕ್ಕೂ ಹೆಚ್ಚು ಸಂಘಟನೆಗಳು ಪ್ರತಿಭಟನೆ ನೇತೃತ್ವ ವಹಿಸಿದ್ದು ಸ್ವಾತಂತ್ರ್ಯ ಉದ್ಯಾನವನದಲ್ಲಿ ಜಮಾಯಿಸಿ ಶಿಕ್ಷಣ ಇಲಾಖೆ ಸಚಿವರ ತೀರ್ಮಾನದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ನೋಂದಾಯಿತ ಖಾಸಗಿ ಶಾಲಾ ಆಡಳಿತ ಮಂಡಳಿ ಒಕ್ಕೂಟ ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್, ಕರೋನಾದಿಂದ ಖಾಸಗಿ ಶಾಲೆಗಳು ಸಂಕಷ್ಟದಲ್ಲಿವೆ. ಖಾಸಗಿ ಶಾಲಾ ಶಿಕ್ಷಕರು ವೇತನ ವಿಲ್ಲದೇ ಪರದಾಡುತ್ತಿದ್ದಾರೆ. ಶಾಲೆಗಳು ಆರ್ಥಿಕ ಸಂಷ್ಟಕ್ಕೆ ಸಿಲುಕಿ ನಲಗುತ್ತಿವೆ. ಇಂತಹ ಸ್ಥಿತಿಯಲ್ಲಿ ವಾಸ್ತವಾಂಶ ತಿಳಿಯದೇ ಬೋಧನಾ ಶುಲ್ಕದಲ್ಲಿ ಶೇ. 30 ರಷ್ಟು ಕಡಿಮೆ ಮಾಡಿ ಶಿಕ್ಷಣ ಸಚಿವರು ಆದೇಶ ಮಾಡಿದ್ದಾರೆ. ಇದರಿಂದ ಆರ್ಥಿಕ ಸಂಕಷ್ಟಕ್ಕೀಡಾಗಿ ಬಹುತೇಕ ಶಾಲೆಗಳು ಬಂದ್ ಆಗಲಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಕ್ಕಳ ಭವಿಷ್ಯ ಕಟ್ಟಿಡುವುದು ಶಿಕ್ಷಕರು. ಸರ್ಕಾರದ ನೀತಿಗಳಿಂದ ಖಾಸಗಿ ಶಾಲಾ ಶಿಕ್ಷಕರು ಬೀದಿಗೆ ಬಂದು ನಿಲ್ಲುವಂತಾಗಿದೆ. ಅನೇಕ ಶಿಕ್ಷಕರು ಶಿಕ್ಷಕ ವೃತ್ತಿ ಬಿಟ್ಟು ಬೇರೆ ಕೆಲಸಗಳಿಗೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಕರೋನಾ ಕಷ್ಟ ಕಾಲದಲ್ಲಿ ಶಿಕ್ಷಕರಿಗೆ ಸರ್ಕಾರ ಐದು ಪೈಸೆ ಸಹಾಯ ಮಾಡಿಲ್ಲ. ಇದರ ನಡುವೆ ಖಾಸಗಿ ಶಾಲೆಗಳ ನೋಂದಣಿ ಮರು ನವೀಕರಣಕ್ಕೆ ಹೊಸ ನಿಯಮಗಳನ್ನು ಹೇರಿ ಖಾಸಗಿ ಶಿಕ್ಷಣ ಸಂಸ್ಥೆಗಳ ಪರಿ ಸಮಾಪ್ತಿಗೆ ಶಿಕ್ಷಣ ಇಲಾಖೆ ನಾಂದಿ ಹಾಡಿದೆ. ಶಿಕ್ಷಕರು ದೇಶದ ಭವಿಷ್ಯ ಕಟ್ಟುವರು. ಇಂತಹ ಶಿಕ್ಷಕ ಸಮುದಾಯವನ್ನು ಕೀಳಾಗಿ ನಡೆಸಿಕೊಳ್ಳುತ್ತಿದೆ ಎಂದು ಶಶಿಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
Recommended Video
ಖಾಸಗಿ ಶಾಲೆಗಳ ಬೋಧನಾ ಶುಲ್ಕ ಶೇ. 30 ರಷ್ಟು ಕಡಿಮೆ ಮಾಡಬೇಕೆಂಬ ಆದೇಶವನ್ನು ಸರ್ಕಾರ ಹಿಂಪಡೆಯಬೇಕು. ಖಾಸಗಿ ಶಾಲೆಗಳ ಮರು ನೋಂದಣಿ ಪ್ರಮಾಣ ಪತ್ರಕ್ಕೆ ವಿಧಿಸಿರುವ ಅವೈಜ್ಞಾನಿಕ ನಿಯಮಗಳನ್ನು ರದ್ದು ಮಾಡಬೇಕು. ಈ ಕುರಿತು ಸರ್ಕಾರ ತನ್ನ ನಿಲುವು ಪ್ರಕಟಿಸಬೇಕು. ಇಲ್ಲದಿದ್ದರೆ, ಅನಿರ್ಧಿಷ್ಟ ಮುಷ್ಕರ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಇನ್ನು ಖಾಸಗಿ ಶಾಲೆಗಳ ವಿವಿಧ ಬೇಡಿಕೆಗಳ ಮನವಿಯನ್ನು ಸಹ ಇದೇ ವೇಳೆ ಸಲ್ಲಿಸಲಾಯಿತು.