ಖಾಸಗಿ ಶಾಲೆಗಳ ಶುಲ್ಕ ವಿವಾದ: ಜುಲೈ 22ಕ್ಕೆ ಆದೇಶ ಕಾಯ್ದಿರಿಸಿದ ಹೈಕೋರ್ಟ್
ಬೆಂಗಳೂರು, ಜೂ. 29: ಖಾಸಗಿ ಶಾಲಾ ಶುಲ್ಕ ವಿವಾದ ಸಂಬಂಧ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಿತಿ ರಚನೆ ಪ್ರಸ್ತಾಪ ಸಂಬಂಧ ವಾದ ಮತ್ತು ಪ್ರತಿವಾದ ಆಲಿಸಿರುವ ಹೈಕೋರ್ಟ್ ಏಕ ಸದಸ್ಯ ಪೀಠ ಮಧ್ಯಂತರ ಅರ್ಜಿಯ ಆದೇಶವನ್ನು ಕಾಯ್ದಿರಿಸಿದೆ. ಶಾಲಾ ಶುಲ್ಕ ಪಾವತಿ ಮಾಡದ ಕಾರಣಕ್ಕೆ ಆನ್ಲೈನ್ ಕ್ಲಾಸ್ ರದ್ದು ಮಾಡಿರುವ ಶಾಲೆಗಳ ವಿರುದ್ಧ ಹೈಕೋರ್ಟ್ ಗರಂ ಆಗಿದೆ. ಖಾಸಗಿ ಶಾಲಾ ಶುಲ್ಕ ವಿವಾದ ಕುರಿತು ನಡೆದ ವಾದ ವಿವಾದ ಸಂಪೂರ್ಣ ವಿವರ ಇಲ್ಲಿದೆ ನೋಡಿ. ಅರ್ಜಿಯ ವಿಚಾರಣೆ ಜುಲೈ 22ಕ್ಕೆ ಮುಂದೂಡಲಾಗಿದೆ.
ಮಧ್ಯಂತರ ಅರ್ಜಿ ವಿಚಾರಣೆ: ಖಾಸಗಿ ಶಾಲೆಗಳ ಶುಲ್ಕ ನಿಗದಿ ಸಂಬಂಧ ರಾಜ್ಯ ಸರ್ಕಾರ ಸಲ್ಲಿಸಿರುವ ಮಧ್ಯಂತರ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಮಂಗಳವಾರ ಕೈತ್ತಿಕೊಂಡಿತು. ಸರ್ಕಾರ ಶೇ. 70 ರಷ್ಟು ಶುಲ್ಕ ಮಾತ್ರ ಸ್ವೀಕರಿಸುವಂತೆ ಸೂಚಿಸಿತ್ತು. ಇದನ್ನು ಪಾಲಿಸಲು ಖಾಸಗಿ ಶಾಲೆಗಳಿಗೆ ನಿರ್ದೇಶನ ನೀಡಿತ್ತು. ಪೋಷಕರು ಮತ್ತು ಖಾಸಗಿ ಶಾಲಾ ಆಡಳಿತ ಮಂಡಳಿ ನಡುವೆ ಚರ್ಚಿಸಿ ಈ ಆದೇಶ ಹೊರಡಿಸಿತ್ತು. ಖಾಸಗಿ ಶಾಲೆಗಳ ಒಕ್ಕೂಟ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ ನಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಿದ್ದವು.
ಹೈಕೋರ್ಟ್ ಮಧ್ಯಂತರ ಆದೇಶ ನೀಡಿತ್ತು
ಬಲವಂತದ ಕ್ರಮ ಕೈಗೊಳ್ಳದಂತೆ ಸರ್ಕಾರಕ್ಕೆ ಹೈಕೋರ್ಟ್ ಮಧ್ಯಂತರ ಆದೇಶ ನೀಡಿತ್ತು. ಶಾಲೆಗಳು ಸಹ ಪೋಷಕರ ಅಹವಾಲು ಸ್ವೀಕರಿಸಬೇಕು ಎಂದು ನ್ಯಾಯಾಲಯ ಸೂಚಿಸಿತ್ತು. ಹೀಗಾಗಿ ಮತ್ತೆ ರಾಜ್ಯದಲ್ಲಿ ಖಾಸಗಿ ಶಾಲಾ ಶುಲ್ಕದ ಗೊಂದಲ ಏರ್ಪಟ್ಟಿತ್ತು. ಖಾಸಗಿ ಶಾಲಾ ಶುಲ್ಕ ವಿವಾದ ಇತ್ಯರ್ಥ ಪಡಿಸಲು ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಸಮಿತಿ ರಚನೆ ಮಾಡುವುದಾಗಿ ಸರ್ಕಾರ ಪ್ರಸ್ತಾಪಿಸಿ ಹೈಕೋರ್ಟ್ ನಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಿತ್ತು.
ಸಂಕಷ್ಟ ಸಮಯ ಎಂದ ಎಜೆ
ಖಾಸಗಿ ಶಾಲಾ ಶುಲ್ಕ ವಿವಾದ ಸಂಬಂಧ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಸಮಿತಿ ರಚನೆ ಮಾಡುವ ಸಂಬಂಧ ಸರ್ಕಾರ ಸಲ್ಲಿಸಿರುವ ಮಧ್ಯಂತರ ಅರ್ಜಿ ವಿಚಾರಣೆ ನಡೆಯಿತು. ಸರ್ಕಾರದ ಪರ ವಾದ ಮಂಡಿಸಿದ ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವದಗಿ, ಕೋವಿಡ್ ಸಂಕಷ್ಟ ಕಾಲದಲ್ಲಿ ಮಕ್ಕಳು ಮತ್ತು ಪೋಷಕರ ಹಿತ ಮುಖ್ಯವಾಗಿದೆ ಎಂದರು. ಇದು ಸರ್ಕಾರ ಹಾಗೂ ಖಾಸಗಿ ಶಾಲೆಗಳ ನಡುವಿನ ಜಗಳವಲ್ಲ. ಪೋಷಕರ ಹಿತ ಮುಖ್ಯವಾದುದು. ಹೀಗಾಗಿ ರಾಜ್ಯದಲ್ಲಿ ಮೂಡಿರುವ ಗೊಂದಲ ನಿವಾರಣೆ ಮಾಡುವ ನಿಟ್ಟಿನಲ್ಲಿ ಸರ್ಕಾರ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲು ಸರ್ಕಾರ ಚಿಂತಿಸಿದೆ. ಈ ಸಮಿತಿಯಲ್ಲಿ ಖಾಸಗಿ ಶಾಲೆ ಹಾಗೂ ಪೋಷಕ ಪ್ರತಿನಿಧಿಗಳು ಇರಲಿದ್ದಾರೆ. ಈ ಸಮಿತಿ ನಿಗದಿತ ಸಮಯಕ್ಕೆ ಮಾತ್ರ ಅನ್ವಯವಾಗಲಿದೆ ಎಂದು ವಾದ ಮಂಡಿಸಿದರು.
ಖಾಸಗಿ ಶಾಲೆಗಳ ಒಕ್ಕೂಟ ಆಕ್ಷೇಪ
ಕೋವಿಡ್ ನಿಂದಾಗಿ ಖಾಸಗಿ ಶಾಲೆಗಳು ಕೂಡ ಸಂಕಷ್ಟಕ್ಕೆ ಒಳಗಾಗಿವೆ. ಶಿಕ್ಷಕರಿಗೆ ವೇತನ ಪಾವತಿ ಮಾಡಲಾಗುತ್ತಿದೆ. ಮೂರು ವರ್ಷದಿಂದ ಶಾಲಾ ಶುಲ್ಕ ಬಾಕಿ ಉಳಿಸಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದ ಶಾಲೆಗಳಿಗೆ ಪೋಷಕರು ಸಂಪೂರ್ಣ ಶುಲ್ಕ ಪಾವತಿ ಮಾಡಿದ್ದಾರೆ. ರಾಜ್ಯದಲ್ಲಿ ಎಲ್ಲಾ ರೀತಿಯ ಶುಲ್ಕ ರದ್ದು ಮಾಡಿ ಶಾಲಾ ಶುಲ್ಕದಲ್ಲಿ ಶೇ. 30 ರಷ್ಟು ಕಡಿತ ಮಾಡುವುದು ಅವೈಜ್ಞಾನಿಕ. ಇಂತಹ ಆದೇಶ ಮುಂದಿಟ್ಟುಕೊಂಡು ಸಮಿತಿ ರಚನೆ ಮಾಡುವುದು ಬೇಡ. ಮಾನವೀಯ ನೆಲೆಯಲ್ಲಿ ಬಹುತೇಕ ಶಾಲೆಗಳು ಶುಲ್ಕ ಹೆಚ್ಚಳ ಮಡಿಲ್ಲ. ಕಳೆದ ವರ್ಷ ಸುಮಾರು ಮಕ್ಕಳು ದಾಖಲಾತಿಯೇ ಆಗಿಲ್ಲ. ಹೀಗಾಗಿ ಶಾಲೆಗಳು ಸಂಕಷ್ಟಕ್ಕೆ ಎದುರಾಗಿವೆ. ನಮ್ಮ ಕಷ್ಟವನ್ನು ನ್ಯಾಯಾಲಯವೂ ಪರಿಗಣಿಸಬೇಕು ಎಂದು ಖಾಸಗಿ ಶಾಲೆಗಳು ಸಮಿತಿ ರಚನೆ ಪ್ರಸ್ತಾಪಕ್ಕೆ ವಿರೋಧ ವ್ಯಕ್ತಪಡಿಸಿವೆ.
ಜುಲೈ 22 ಕ್ಕೆ ವಿಚಾರಣೆ ಮುಂದೂಡಿಕೆ
ಪೋಷಕರು ಸಂಪೂರ್ಣ ಶಾಲಾ ಶುಲ್ಕ ಕೊಡುವ ಸ್ಥಿತಿಯಲ್ಲಿಲ್ಲ. ಖಾಸಗಿ ಶಾಲೆಗಳು ಒಪ್ಪಿದರೆ ಸಮಸ್ಯೆ ಇಲ್ಲ. ಕೋವಿಡ್ ನಿಂದಾಗಿ ಪೋಷಕರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಹೀಗಾಗಿ ನಿವೃತ್ತ ನ್ಯಾಯಮೂರ್ತಿ ರಚನೆ ಪ್ರಸ್ತಾಪಿಸಲಾಗಿದೆ. ಶುಲ್ಕ ಕಟ್ಟುವ ಸಾಮರ್ಥ್ಯ ಇರುವವರು ಇರಬಹುದು. ಶಾಲಾ ಶುಲ್ಕ ಕಟ್ಟಲಾಗದವರು ಇದ್ದಾರೆ. ಹೈಕೋರ್ಟ್ ಆದೇಶ ಉಲ್ಲಂಘನೆ ಮಾಡಿದ ಶಾಲೆಗಳ ಪಟ್ಟಿಯನ್ನು ನೀಡಿ. ಪೋಷಕರ ಅಹವಾಲು ಸ್ವೀಕರಿಸದ ಶಾಲೆಗಳ ವಿವರ ವಿದ್ದರೆ ಕೊಡಿ ಎಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿತು. ಇನ್ನು ಶಾಲಾ ಶುಲ್ಕ ಪಾವತಿ ಮಾಡಿಲ್ಲ ಎಂದು ಆನ್ಲೈನ್ ತರಗತಿ ಕಡಿತ ಮಾಡಿದರೆ ಪೋಷಕರು ಹೈಕೋರ್ಟ್ ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಅರ್ಜಿಯನ್ನು ಜುಲೈ 22 ಕ್ಕೆ ಮುಂದೂಡಿದೆ.