ಈ ಶಾಲೆಯಲ್ಲಿ ಮಕ್ಕಳು ಕನ್ನಡ ಮಾತಾಡಿದರೆ ದಂಡ
ಬೆಂಗಳೂರು, ಫೆಬ್ರವರಿ 3: 'ನೀವಿಲ್ಲ ಕನ್ನಡದಲ್ಲಿ ಮಾತನಾಡುವಂತಿಲ್ಲ. ಹಾಗೆ ಅಪ್ಪಿ ತಪ್ಪಿ ಕನ್ನಡದಲ್ಲಿ ಮಾತನಾಡಿದರೆ 50 ರೂ. ದಂಡ ಕಟ್ಟಬೇಕು. ಮತ್ತೊಮ್ಮೆ ಅದೇ 'ತಪ್ಪನ್ನು' ಪುನರಾವರ್ತಸಿದರೆ ಎರಡನೆಯ ಬಾರಿ 100 ರೂ. ದಂಡ ತೆರಬೇಕು. ಹೀಗಾಗಿ ಮಕ್ಕಳು ಒಂದಕ್ಷರ ಕನ್ನಡ ಬಳಸದಂತೆ ಪೋಷಕರು ಎಚ್ಚರವಹಿಸಬೇಕು! - ಇದು ಬೇರೆ ಯಾವುದೋ ರಾಜ್ಯದ ಸ್ಥಿತಿಯಲ್ಲ. ಬೇಕಾದಷ್ಟು ಸೌಲಭ್ಯಗಳನ್ನು ನೀಡಿ, ಶಿಕ್ಷಣದ ಹೆಸರಿನಲ್ಲಿ ಭಾಷಾ ದೌರ್ಜನ್ಯಕ್ಕೆ ಒಳಗಾಗಿರುವ ಕರ್ನಾಟಕದ ಸ್ಥಿತಿ.
ರಾಜ್ಯದಲ್ಲಿ ಕನ್ನಡ ಭಾಷೆಯ ಬಳಕೆ ಮತ್ತು ಅಸ್ತಿತ್ವ ಹಾಗೂ ಮಾತೃಭಾಷೆ ಮಾಧ್ಯಮ ಶಿಕ್ಷಣಕ್ಕಾಗಿ ಹೋರಾಟಗಳು ನಡೆಯುತ್ತಿರುವ ನಡುವೆಯೇ ಖಾಸಗಿ ಶಾಲೆಗಳು ಕನ್ನಡದ ವಿಚಾರದಲ್ಲಿ ಭಂಡತನ ಮೆರೆಯುವುದು ಮುಂದುವರಿದಿದೆ.
ಈ ರೀತಿ ಕನ್ನಡ ಮಾತನಾಡಿದರೆ ದಂಡ ಕಟ್ಟಬೇಕು ಎಂಬ ಉದ್ಧಟತನದ ನಿಯಮ ಹೇರಿದ್ದ ಖಾಸಗಿ ಶಾಲೆ ಮೇಲೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ (ಕೆಡಿಎ) ಸೋಮವಾರ ದಾಳಿ ನಡೆಸಿದೆ.
ಕನ್ನಡ ಮಾತಾಡಿದರೆ ದಂಡ ಕಟ್ಟಬೇಕು
ಬೆಂಗಳೂರಿನ ಹೊರಮಾವುದಲ್ಲಿರುವ ಎಸ್ಎಲ್ಎಸ್ ಇಂಟರ್ನ್ಯಾಷನಲ್ ಗುರುಕುಲ ಎಂಬ ಶಾಲೆಗೆ ತಮ್ಮ ಮಕ್ಕಳನ್ನು ಕಳುಹಿಸುತ್ತಿರುವ ಪೋಷಕರು ನೀಡಿದ ದೂರಿನ ಅನ್ವಯ ಪ್ರಾಧಿಕಾರ ಈ ದಾಳಿ ನಡೆಸಿದೆ. ಶಾಲೆಯಲ್ಲಿ ಮಕ್ಕಳು ಕನ್ನಡ ಮಾತನಾಡಿದರೆ ಮೊದಲ ಸಲ 50 ರೂ. ದಂಡ ಕಟ್ಟಬೇಕು, ಎರಡನೆಯ ಸಲವೂ ಕನ್ನಡ ಬಳಸಿದರೆ 100 ರೂ. ದಂಡ ತೆರಬೇಕು ಎಂದು ಸುತ್ತೋಲೆಯನ್ನು ಶಾಲೆ ಹೊರಡಿಸಿತ್ತು. ಈ ಬಗ್ಗೆ ಮಾಹಿತಿ ಪಡೆದ ಕೆಡಿಎ ಅಧ್ಯಕ್ಷ ಟಿ.ಎಸ್. ನಾಗಾಭರಣ ಮತ್ತು ಇತರೆ ಸದಸ್ಯರು ಶಾಲೆಗೆ ಭೇಟಿ ನೀಡಿದರು.
ಇದು ನಮ್ಮ ತಪ್ಪು ಎಂದ ಶಾಲೆ
ಭೇಟಿಯ ವೇಳೆ ಶಾಲಾ ಆಡಳಿತಮಂಡಳಿ ತಮ್ಮ ತಪ್ಪನ್ನು ಒಪ್ಪಿಕೊಂಡಿತು. 'ಇದು ನಮ್ಮ ತಪ್ಪು' ಎಂದು ಕೆಡಿಎ ಮುಂದೆ ಹೇಳಿಕೊಂಡರು. ಈ ರೀತಿ ಸುತ್ತೋಲೆ ಹೊರಡಿಸಿದ್ದಕ್ಕೆ ಶಾಲಾ ಆಡಳಿತ ಮಂಡಳಿ ಕ್ಷಮೆ ಕೋರಿದೆ. ಹಾಗೆಯೇ ಭವಿಷ್ಯದಲ್ಲಿ ಈ ರೀತಿಯ ತಪ್ಪನ್ನು ಪುನರಾವರ್ತಿಸುವುದಿಲ್ಲ ಎಂದು ಭರವಸೆ ನೀಡಿದೆ.
ಆದರೆ, ಈ ಶಾಲೆಯಲ್ಲಿ ಸೂಕ್ತ ವಿದ್ಯಾರ್ಹತೆಯುಳ್ಳ ಶಿಕ್ಷಕರಿಲ್ಲ ಎಂಬ ಕಾರಣಕ್ಕೆ ಅಧ್ಯಕ್ಷ ಟಿ.ಎಸ್. ನಾಗಾಭರಣ ಅವರು ಶಾಲೆಯನ್ನು ಮಾನ್ಯತೆಯನ್ನು ರದ್ದುಗೊಳಿಸುವಂತೆ ಶಿಫಾರಸು ಮಾಡಲು ನಿರ್ಧರಿಸಿದ್ದಾರೆ' ಎಂದು ಪ್ರಾಧಿಕಾರದ ಸದಸ್ಯರೊಬ್ಬರು ತಿಳಿಸಿದ್ದಾರೆ.
ಸುತ್ತೋಲೆಯಲ್ಲಿ ಇದ್ದಿದ್ದು ಏನು?
'ಶಾಲಾ ಆವರಣದಲ್ಲಿ ಕನ್ನಡದಲ್ಲಿ ಸಂವಹಿಸುವ ಮಕ್ಕಳಿಗೆ ಮೊದಲ ಸಲ 50 ರೂ. ದಂಡ ವಿಧಿಸಲಾಗುತ್ತದೆ. ಅದು ಮುಂದುವರಿದರೆ ಎರಡನೇ ಬಾರಿ 100 ರೂ. ದಂಡ ವಿಧಿಸಲಾಗುತ್ತದೆ. ಇದು 2020ರ ಜನವರಿ 30ರಿಂದ ಜಾರಿಗೆ ಬರಲಿದೆ' ಎಂದು ಶಾಲಾ ಆಡಳಿತ ಮಂಡಳಿಯ ಸುತ್ತೋಲೆ ಹೇಳಿತ್ತು.
ಮಿಲಿಟರಿ ಹೇರ್ಕಟ್ ಮಾಡಿಸಿ
ಆಸಕ್ತಿಕರವೆಂದರೆ ಇದೇ ರೀತಿಯ ಮತ್ತೊಂದು ಸುತ್ತೋಲೆಯನ್ನು ಕೂಡ ಹೊರಡಿಸಲಾಗಿತ್ತು. '2020ರ ಫೆ. 1ರ ಒಳಗೆ ಬಾಲಕರಿಗೆ ಮಿಲಿಟರಿ ಹೇರ್ಕಟ್ ಮಾಡುವುದು ಕಡ್ಡಾಯವಾಗಿದೆ. ವಿದ್ಯಾರ್ಥಿಗಳ ಅಂದಚೆಂದ ನೋಡಿಕೊಳ್ಳುವಂತೆ ಪೋಷಕರಿಗೆ ಮನವಿ ಮಾಡಲಾಗಿದೆ. ಸ್ವಚ್ಛತೆ ಕಾಪಾಡಿಕೊಳ್ಳದ ವಿದ್ಯಾರ್ಥಿಗಳನ್ನು ಜ. 30ರಿಂದ ಮನೆಗೆ ಕಳುಹಿಸಲಾಗುತ್ತದೆ' ಎಂದೂ ಹೇಳಲಾಗಿದೆ.
ಪ್ರಾಂಶುಪಾಲರು ಹೇಳಿದ್ದೇನು?
ಈ ಸುತ್ತೋಲೆಯನ್ನು ತಮ್ಮ ಗೈರು ಹಾಜರಿಯಲ್ಲಿ ಹೊರಡಿಸಲಾಗಿದೆ. ಮಂಗಳವಾರದಿಂದಲೇ ಸುತ್ತೋಲೆಯನ್ನು ಹಿಂದಕ್ಕೆ ಪಡೆದುಕೊಳ್ಳಲಾಗುತ್ತದೆ ಎಂದು ಶಾಲೆಯ ಪ್ರಾಂಶುಪಾಲರಾದ ಹೇಮಾವತಿ ಹರೀಶ್ ಕುಮಾರ್ ತಿಳಿಸಿದ್ದಾರೆ.
'ಸುತ್ತೋಲೆಯನ್ನು ನನ್ನ ಗೈರುಹಾಜರಿಯಲ್ಲಿ ಸಂವಹನದ ಸಮಸ್ಯೆಯಿಂದ ಹೊರಡಿಸಲಾಗಿದೆ. ನಮ್ಮ ಶಾಲೆಯಲ್ಲಿ ನರ್ಸರಿಯಿಂದಲೂ ಕನ್ನಡ ಕಲಿಸುತ್ತಿದ್ದು, ಕನ್ನಡ ಭಾಷೆಯ ಭೋದನೆ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ನಾವು ಸುತ್ತೋಲೆಯನ್ನು ಹಿಂಪಡೆದುಕೊಳ್ಳುತ್ತಿದ್ದು, ಹೊಸ ಸುತ್ತೋಲೆ ಹೊರಡಿಸಲಿದ್ದೇವೆ' ಎಂದು ಹೇಳಿದರು.