ಎತ್ತುವಳಿ ಪ್ರಕರಣದಲ್ಲಿ ಖಾಸಗಿ ಸುದ್ದಿ ವಾಹಿನಿ ಸಿಬ್ಬಂದಿ ಬಂಧನ
ಬೆಂಗಳೂರು, ಜ. 07: ಮರಳು ಮಾಫಿಯಾ ಹೆಸರಿನಲ್ಲಿ ಸುದ್ದಿ ಬಿತ್ತರಿಸುವುದಾಗಿ ಹೆದರಿಸಿ ಲಕ್ಷಾಂತರ ರೂಪಾಯಿ ಎತ್ತುವಳಿ ಮಾಡಿದ ಪ್ರಕರಣದಲ್ಲಿ ಖಾಸಗಿ ಸುದ್ದಿ ವಾಹಿನಿಯ ಸಿಬ್ಬಂದಿಯೊಬ್ಬನನ್ನು ಹೆಣ್ಣೂರು ಪೊಲೀಸರು ಬಂಧಿಸಿದ್ದಾರೆ.
ತೀರ್ಥಪ್ರಸಾದ್ ಬಂಧಿತ ಆರೋಪಿ. ಈತ ಕಳೆದ ಒಂದು ದಶಕದಿಂದ ಕರ್ನಾಟಕದ ಹಲವು ಸುದ್ದಿವಾಹಿನಗಳಲ್ಲಿ ವೀಡಿಯೊ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದ. ಈತನನ್ನು ಪೊಲೀಸ್ ಕಸ್ಟಡಿಗೆ ಪಡೆಯಲು ಹೆಣ್ಣೂರು ಪೊಲೀಸರು ನ್ಯಾಯಾಲಯಕ್ಕೆ ರಿಮ್ಯಾಂಡ್ ಅರ್ಜಿಯನ್ನು ಸಲ್ಲಿಸಿದ್ದಾರೆ. ಈ ಪ್ರಕರಣ ಸಂಬಂಧ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ 05/2022 ಮೊಕದ್ದಮೆ ದಾಖಲಾಗಿದೆ. ಎಫ್ಐಆರ್ನಲ್ಲಿ ತೀರ್ಥಪ್ರಸಾದ್ ಮತ್ತು ಇತರರನ್ನು ಆರೋಪಿಗಳನ್ನಾಗಿ ಮಾಡಿದ್ದು, ಐಪಿಸಿ ಸೆಕ್ಷನ್ 384, 504, 506, ಅಡಿ ಹೆಣ್ಣೂರು ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ ಎನ್ನಲಾಗಿದೆ.
ಬಂಧಿತ ತೀರ್ಥಪ್ರಸಾದ್ನನ್ನು ಪೊಲೀಸ್ ಕಸ್ಟಡಿಗೆ ಪಡೆಯಲು ನ್ಯಾಯಾಲಯಕ್ಕೆ ಸಲ್ಲಿಸಿರುವ ರಿಮ್ಯಾಂಡ್ ಅರ್ಜಿಯಲ್ಲಿ ಇತರೆ ಆರೋಪಿಗಳ ಹೆಸರುಗಳನ್ನು ಉಲ್ಲೇಖಿಸಿದ್ದು, ಕುಮಾರ್, ಶಿವಸ್ವಾಮಿ, ರಮೇಶ್ ಗೌಡ ಹಾಗೂ ಶ್ರೀಧರ್ ಎಂಬುವರನ್ನು ಆರೋಪಿಗಳನ್ನಾಗಿ ಹೆಸರಿಸಲಾಗಿದೆ. ದೊಡ್ಡಗುಬ್ಬಿ ನಿವಾಸಿ ಅನಿಲ್ ಕುಮಾರ್ ಬಿನ್ ಸೊಣ್ಣಪ್ಪ ಎಂಬುವರು ನೀಡಿದ ದೂರಿನಡಿ ಈ ಪ್ರಕರಣ ದಾಖಲಾಗಿದೆ.
ದೂರುದಾರರ ಹೇಳಿಕೆಯ ವಿವರ:
ನನ್ನ ಅತ್ತಿಗೆ ರೂಪಾ ಅವರಿಗೆ ಬಿಟಿವಿಯ ಸಿಬ್ಬಂದಿ ಎಂದು ಹೇಳಿಕೊಂಡು ತೀರ್ಥಪ್ರಸಾದ್ ಜ. 5 ರಂದು ಕರೆ ಮಾಡಿ, ನಿಮ್ಮ ಕುಟುಂಬಕ್ಕೆ ಸಂಬಂಧಿಸಿದ ಸುದ್ದಿ ನಮ್ಮ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ನಿಮ್ಮ ಕುಟುಂಬ ಮಾತನಾಡಿ ಸೆಟ್ಲ್ಮೆಂಟ್ ಮಾಡಿಕೊಳ್ಳಲು ತಯಾರು ಇದೆಯಾ ಎಂದು ಕೇಳಿದರು. ನನ್ನ ಅತ್ತಿಗೆ ರೂಪಾ ಅವರು ದೂರುದಾರನಾದ ನನ್ನ ಮೊಬೈಲ್ ನಂಬರ್ ನೀಡಿ ಕರೆ ಕಡಿತಗೊಳಿಸಿದ್ದಾರೆ. ಇದಾದ ಬಳಿಕ ನಾನೇ ತೀರ್ಥ ಪ್ರಸಾದ್ ಅವರಿಗೆ ಕರೆ ಮಾಡಿದ್ದು, ನಮ್ಮ ಬಿಟಿವಿಯಲ್ಲಿ ನಿಮ್ಮ ಕುಟುಂಬದ ಬಗ್ಗೆ 420 ಸೊಣ್ಣಪ್ಪ ಅಂಡ್ ಸನ್ಸ್ ಮರಳು ಮಾಫಿಯಾ ಡಾನ್ ಗಳು ಎಂಬ ಶೀರ್ಷಿಕೆಯಡಿ ಸುದ್ದಿ ಪ್ರಸಾರವಾಗುತ್ತಿದೆ. ಮಾನಹಾನಿಕರ ವರದಿ ಪ್ರಸಾರವಾಗುತ್ತಿದ್ದು, ಇದರ ಬಗ್ಗೆ ನಿಮ್ಮ ಬಳಿ ಮಾತನಾಡಬೇಕಿದೆ ಎಂದು ಸೂಚಿಸಿದರು. ನಾನು ಮಾತನಾಡಲು ಒಪ್ಪಿ ಭೇಟಿ ಮಾಡಿದಾಗ, ಪ್ರಸಾರವಾಗುತ್ತಿರುವ ಕಾರ್ಯಕ್ರಮ ನಿಲ್ಲಿಸಲು 25 ಲಕ್ಷ ರೂ. ಕೊಡಬೇಕೆಂದು ಬ್ಲಾಕ್ ಮೇಲ್ ಮಾಡಿದರು ಎಂದು ದೂರುದಾರ ಅನಿಲ್ ಕುಮಾರ್ ಪೊಲೀಸರ ಮುಂದೆ ನೀಡಿರುವ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ. ಸದ್ಯ ದೂರುದಾರ ಅನಿಲ್ ನೀಡಿರುವ ಹೇಳಿಕೆ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿದೆ.
ಹಣ ಕೊಡುವಂತೆ ಒತ್ತಾಯ
ಇದಾದ ಬಳಿಕ ನಮ್ಮನ್ನು ಅಮೃತಹಳ್ಳಿಯ ಉಡುಪಿ ಉಪಹಾರ್ ಹೋಟೆಲ್ ಬಳಿ ಕರೆಸಿಕೊಂಡು, 25 ಲಕ್ಷ ರೂ. ಕೊಡುವಂತೆ ಬ್ಲಾಕ್ ಮೇಲ್ ಮಾಡಿದರು. ಪುನಃ ನಾನೇ ತೀರ್ಥಪ್ರಸಾದ್ಗೆ ಕರೆ ಮಾಡಿದಾಗ ತಿಂಡ್ಲು ಬಳಿ ಇರುವ ಸಿದ್ದಲಿಂಗೇಶ್ವರ ಲೇಔಟ್ ಬಳಿ ಬರಲು ಲೊಕೇಷನ್ ಕಳುಹಿಸಿದ್ದು, ಅಲ್ಲಿಗೆ ಹೋದಾಗ ರಾತ್ರಿ 11.30 ರ ಸುಮಾರಿನಲ್ಲಿ ತೀರ್ಥ ಪ್ರಸಾದ್ ಅವರು ಕಚೇರಿಗೆ ಕರೆಸಿಕೊಂಡು, ಬಿಟಿವಿ ಸಿಇಓ ಶಿವಸ್ವಾಮಿ, ಜೆಡಿಎಸ್ ಎಂಎಲ್ಸಿ ರಮೇಶ್ ಗೌಡ, ಕುಮಾರ್ ಜಿ.ಎಂ. ಹಾಗೂ ದೇವನಹಳ್ಳಿ ವರದಿಗಾರ ಶ್ರೀಧರ್ ಜತೆಯಲ್ಲಿ ಮೊಬೈಲ್ ಕಾನ್ಫರೆನ್ಸ್ ಕಾಲ್ ನಲ್ಲಿ ಮಾತನಾಡಿರುತ್ತಾರೆ. ಈ ವೇಳೆ ನನಗೆ ನಾನಾ ರೀತಿಯಲ್ಲಿ ಬೆದರಿಕೆ ಹಾಕಿದರು. ಆನಂತರ ನಾನು ತೀರ್ಥ ಪ್ರಸಾದ್ಗೆ ಎಂಟು ಲಕ್ಷ ರೂ. ಹಣ ನೀಡಿದ್ದು, ಇದನ್ನು ವಿಡಿಯೋ ರೆಕಾರ್ಡಿಂಗ್ ಮಾಡಿಕೊಂಡಿರುತ್ತೇನೆ. ಅಲ್ಲದೇ ಈ ಕುರಿತ ಎಲ್ಲಾ ಅಡಿಯೋ , ವಾಟ್ಸಪ್ ಚಾಟ್ ಗಳನ್ನು ದೂರಿನೊಂದಿಗೆ ಲಗತ್ತಿಸಿದ್ದೇನೆ. ನನ್ನ ಕುಟುಂಬದ ವಿರುದ್ಧ ಒಳಸಂಚು ಮಾಡಿ ಮಾನಹಾನಿಕರ ಸುದ್ದಿ ಪ್ರಸಾರ ಹೆಸರಿನಲ್ಲಿ ಸುಲಿಗೆ ಮಾಡಿ ಬೆದರಿಕೆ ಹಾಕಿದ್ದಾರೆ ಎಂದು ದೂರುದಾರ ಅನಿಲ್ ಕುಮಾರ್ ಮೂರು ಪುಟಗಳ ಹೇಳಿಕೆಯನ್ನು ಪೊಲೀಸರ ಮುಂದೆ ನೀಡಿದ್ದಾರೆ.
ಠಾಣೆ ಮುಂದೆ ಪ್ರತಿಭಟನೆ
ಇನ್ನು ತೀರ್ಥಪ್ರಸಾದ್ ಸೇರಿದಂತೆ ಇತರರ ವಿರುದ್ಧ ಎಫ್ಐಆರ್ ದಾಖಲಿಸಲು ಮೊದಲು ಹಿಂದೇಟು ಹಾಕಿದ ಹೆಣ್ಣೂರು ಪೊಲೀಸರ ಕ್ರಮ ಖಂಡಿಸಿ ಠಾಣೆ ಮುಂದೆ ಪ್ರತಿಭಟನೆ ನಡೆಸಿದ್ದು, ಆ ವಿಡಿಯೋ ಕೂಡ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿದೆ.
Recommended Video
ವಾಹಿನಿ ಹೆಸರು ದುರ್ಬಳಕೆ: ದೂರು
ಇದೇ ವಿಚಾರವಾಗಿ ಬಿಟಿವಿ ಖಾಸಗಿ ಸುದ್ದಿ ವಾಹಿನಿನಲ್ಲಿ ಸುದ್ದಿ ಪ್ರಸಾರವಾಗಿದ್ದು, ನಮ್ಮ ಸುದ್ದಿ ವಾಹಿನಿ ಹೆಸರು ದುರ್ಬಳಕೆ ಮಾಡಿಕೊಂಡು ಬಿಟಿವಿ ಹೆಸರಿನಲ್ಲಿ ಸುಲಿಗೆ ಮಾಡಿದ ತೀರ್ಥಪ್ರಸಾದ್ ವಿರುದ್ಧ ಬಿಟಿವಿ ಸಂಪಾದಕರು ದೂರು ನೀಡಿದ್ದಾರೆ ಎಂದು ಹೇಳಲಾಗಿದೆ. ಆದರೆ, ದೂರು ಯಾವ ಠಾಣೆಯಲ್ಲಿ ದಾಖಲಾಗಿದೆ ಎಂಬುದರ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ.