'ಅಪಾರ್ಟ್ ಮೆಂಟ್ ನಿವಾಸಿಗಳ ಮೇಲಿನ ಸರ್ಕಾರದ ತಾರತಮ್ಯ ನಿಲ್ಲಲಿ'
ಬೆಂಗಳೂರು, ಏಪ್ರಿಲ್ 23: ಅಪಾರ್ಟ್ ಮೆಂಟ್ ನಿವಾಸಿಗಳ ಮೇಲಾಗುತ್ತಿರುವ ನೀರು, ಒಳಚರಂಡಿ,ಎಸ್ ಟಿ ಪಿ ಘಟಕ ,ತ್ಯಾಜ್ಯ ಸಂಗ್ರಹಣೆ ಹಾಗೂ ಇನ್ನೂ ಅನೇಕ ಮೂಲ ಸೌಕರ್ಯ ವಿಷಯಗಳಲ್ಲಿ ವಿಧಿಸುತ್ತಿರುವ ತೆರಿಗೆ ,ಸೆಸ್ ಗಳಲ್ಲಿ ಸಾಕಷ್ಟು ತಾರತಮ್ಯ ಧೋರಣೆ ಅನುಸರಿಸಿ ಹೆಚ್ಚಿನ ದರ ವಿಧಿಸುತ್ತಿರುವುದು ಬೇಸರದ ಸಂಗತಿ ಎಂದು ಆಮ್ ಆದ್ಮಿ ಪಾರ್ಟಿ ಸಂಚಾಲಕ ಪೃಥ್ವಿರೆಡ್ಡಿ ಅಭಿಪ್ರಾಯ ವ್ಯಕ್ತಪಡಿಸಿದರು.
ಬೆಂಗಳೂರು ಅಪಾರ್ಟ್ ಮೆಂಟ್ ಫೆಡರೇಶನ್ ಚೌಡಯ್ಯ ಮೆಮೋರಿಯಲ್ ಹಾಲ್ ನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ತ್ಯಾಜ್ಯ ನೀರು ಶುದ್ದೀಕರಣ ಘಟಕಗಳ ನಿರ್ಮಾಣ ಸಂಪೂರ್ಣವಾಗಿ ಸರ್ಕಾರದ ಕರ್ತವ್ಯವಾಗಿದ್ದು ನಾಗರೀಕರ ಮೇಲೆ ಲಕ್ಷಾಂತರ ರೂ. ಗಳ ಹೊರೆ ವಿಧಿಸುತ್ತಿರುವುದು ಅನ್ಯಾಯವೆಂದು ತಿಳಿಸಿದರು.
ಅಪಾರ್ಟ್ ಮೆಂಟ್ಗಳಲ್ಲಿ ಮೂಲ ಸೌಕರ್ಯ, ನಾಗರಿಕ ಸ್ನೇಹಿ ನಿಯಮ ಅಗತ್ಯ
ದೆಹಲಿ ಆಮ್ ಆದ್ಮಿ ಸರಕಾರದ ರೀತಿ ರಾಜ್ಯದಲ್ಲಿಯೂ ಉಚಿತ ನೀರು ಪೂರೈಸಬೇಕಿರುವುದು ಸರಕಾರದ ಕರ್ತವ್ಯ , ಕಾನೂನು ಉಲ್ಲಂಘನೆ ಮಾಡುತ್ತಿರುವ ಅಧಿಕಾರಿಗಳು ,ಜನಪ್ರತಿನಿಧಿಗಳ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ತಿಳಿಸಿದರು. ಬೆಂಗಳೂರಿನಲ್ಲಿ ಲ್ಯಾಂಡ್ ಮಾಫಿಯಾ,ಮರಳು ಮಾಫಿಯಾ ಗಾರ್ಬೇಜ್ ಮಾಫಿಯಾ ಗಳು ತಲೆಯೆತ್ತಿವೆಯೆಂದು ತಿಳಿಸಿದರು.
ಅಪಾರ್ಟ್ ಮೆಂಟ್ ನಿವಾಸಿಗಳು ಹೆಚ್ಚಿನ ವೋಟ್ ಬ್ಯಾಂಕನ್ನು ಹೊಂದಿರುವುದರಿಂದ ರಾಜಕೀಯ ಕ್ಷೇತ್ರಕ್ಕೆ ಆಗಮಿಸಿ ವ್ಯವಸ್ಥೆ ಬದಲಾವಣೆಗಾಗಿ ಶ್ರಮಿಸಲು ಒತ್ತಾಯಿಸಿದರು. ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ,ಬಿ ಜೆ ಪಿ ಪಕ್ಷದಿಂದ ಮಲ್ಲೇಶ್ವರಂ ಹಾಲಿ ಶಾಸಕ ಸಿ .ಎನ್ .ಅಶ್ವಥನಾರಾಯಣ ಹಾಗೂ ಜೆ ಡಿ ಎಸ್ ಪಕ್ಷದ ವಕ್ತಾರ ತನ್ವೀರ್ ಅಹಮದ್ ಭಾಗವಹಿಸಿದ್ದರು.