ರಾಜ್ಯದ 8 ಜೈಲುಗಳಲ್ಲಿ ಕೈದಿಗಳಿಗೆ ದೂರವಾಣಿ ಸೌಲಭ್ಯ ವಿಸ್ತರಣೆ
ಬೆಂಗಳೂರು, ಏಪ್ರಿಲ್ 24: ಕೈದಿಗಳ ಮನಸ್ಸು ಪರಿವರ್ತನೆಯಾಗಬಹುದು ಎನ್ನುವ ಕಾಳಜಿ ಹಾಗೂ ಕೈದಿಗಳ ಹಿತದೃಷ್ಟಿಯಿಂದ ರಾಜ್ಯದ ಎಲ್ಲ ಕೇಂದ್ರ ಕಾರಾಗೃಹಗಳಲ್ಲಿ ದೂರವಾಣಿ ಕರೆಗಳ ಸೌಲಭ್ಯ ಕಲ್ಪಿಸಲಾಗುತ್ತಿದೆ.
ಸಜಾ ಕೈದಿಗಳ ಅನುಕೂಲಕ್ಕಾಗಿ ರಾಜ್ಯದ ಎಲ್ಲ ಕೇಂದ್ರ ಕಾರಾಗೃಹಗಳಲ್ಲಿ ದೂರವಾಣಿ ಕರೆಗಳ ಸೌಲಭ್ಯ ಕಲ್ಪಿಸಲಾಗುತ್ತಿದೆ. ಪ್ರಸ್ತುತ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ 8 ದೂರವಾಣಿ ಸಂಪರ್ಕ ನೀಡಲಾಗಿದೆ.
ಇದೇ ಮಾದರಿಯಲ್ಲಿ ಉಳಿದ ಎಂಟು ಕೇಂದ್ರ ಕಾರಾಗೃಹಗಳಿಗೆ ದೂರವಾಣಿ ಸೌಲಭ್ಯ ನೀಡಲು ಈಗಾಗಲೇ ರಾಜ್ಯ ಸರ್ಕಾರ ತೀರ್ಮಾನಿಸಿದ್ದು ಶೀಘ್ರದಲ್ಲೇ ಅಳವಡಿಸಲಾಗುತ್ತದೆ ಎಂದು ಬಂದಿಖಾನೆ ಇಲಾಖೆ ಮುಖ್ಯಸ್ಥ ಎಡಿಜಿಪಿ ಎನ್.ಎಸ್. ಮೇಘರಿಕ್ ತಿಳಿಸಿದ್ದಾರೆ.
ಸಜಾ ಕೈದಿಗಳು ಬಂಧಿಯಾಗಿರುವ ಕೇಂದ್ರ ಕಾರಾಗೃಹದಲ್ಲಿ ಮಾತ್ರ ದೂರವಾಣಿ ಸೌಲಭ್ಯ ನೀಡಲಾಗುತ್ತದೆ. ಆ ನಂತರ ಎಲ್ಲ ಜೈಲುಗಳಿಗೆ ವಿಸ್ತರಿಸುವ ಚಿಂತನೆ ನಡೆಸಲಾಗುತ್ತದೆ. ಕೈದಿಗಳು ಕುಟುಂಬ ಸದಸ್ಯರ, ಸ್ನೇಹಿತರ ಮತ್ತು ವಕೀಲರ ಜತೆ ಸಂಭಾಷಣೆ ನಡೆಸಬಹುದು.
ಇದು ಅಲ್ಪಮಟ್ಟಿಗೆ ಮನ ಪರಿವರ್ತನೆಗೆ ಸಹಕಾರಿಯಾಗಲಿದೆ. ಅಕ್ರಮವಾಗಿ ಜೈಲಿನ ಒಳಗೆ ಮೊಬೈಲ್, ಸಿಮ್ ಕಾರ್ಡ್ ತರಿಸಿಕೊಂಡು ಕರೆ ಮಾಡುವ ದಂಧೆಗೆ ಕಡಿವಾಣ ಬೀಳಲಿದೆ. ಮೊಬೈಲ್ ಸಿಮ್ ಕಾರ್ಡ್ ಬಳಸಿ ಮಾತನಾಡುವ ಕೈದಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ. ಒಬ್ಬ ಕೈದಿ ದಿನಕ್ಕೆ 2 ಬಾರಿ ಕಾಲ್ ಮಾಡಲು ಅವಕಾಶ ನೀಡಲಾಗಿದೆ. ತಿಂಗಳಿಗೆ ಒಟ್ಟು 60 ಕರೆಗಳು, ಇದಕ್ಕೆ ಕೈದಿ 100 ರೂ. ಶುಲ್ಕ ಪಾವತಿಸಬೇಕು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.