ನನ್ನ ಅತಿ ಹೆಚ್ಚು ಟೀಕಿಸಿದವರಿಗೆ ಪ್ರಧಾನಿ ಬಹುಮಾನ ಕೊಡ್ತಾರಾ?: ಸಿದ್ದರಾಮಯ್ಯ
ಬೆಂಗಳೂರು, ನವೆಂಬರ್ 22: ನನ್ನ ಅತಿ ಹೆಚ್ಚು ಟೀಕಿಸಿದವರಿಗೆ ಪ್ರಧಾನಿ ನರೇಂದ್ರ ಮೋದಿ ಏನಾದರೂ ಬಹುಮಾನ ಕೊಡುತ್ತೀನಿ ಎಂದು ಹೇಳಿದ್ದಾರಾ ಎಂದು ವಿರೋಧಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಎಂಟಿಬಿ ನಾಗರಾಜ್, ಯಡಿಯೂರಪ್ಪ ಅವರಿಂದ ಹಿಡಿದು ಇದೀಗ ಕೇಂದ್ರ ಸಚಿವ ಸದಾನಂದಗೌಡ ಅವರೂ ಕೂಡ ಸಿದ್ದರಾಮಯ್ಯ ವಿರುದ್ಧ ಹೇಳಿಕೆ ನೀಡುತ್ತಿರುವುದು ಸಿದ್ದರಾಮಯ್ಯ ಅವರ ಈ ಪ್ರಶ್ನೆಗೆ ಕಾರಣವಾಗಿದೆ.
ಸಿದ್ದರಾಮಯ್ಯ ಮಾನಸಿಕ ಸ್ಥಿಮಿತ ಕಳೆದುಕೊಳ್ಳುತ್ತಿದ್ದಾರೆ: ಸದಾನಂದಗೌಡ
ರಾಜ್ಯದ ಬಿಜೆಪಿ ನಾಯಕರೆಲ್ಲರೂ ನನ್ನ ಮೇಲೆಯೇ ಮುಗಿಬೀಳುತ್ತಿರುವುದು ನೋಡಿದರೆ , ನನ್ನನ್ನು ಅತಿಹೆಚ್ಚು ಟೀಕಿಸಿದವರಿಗೆ ಏನೋ ಬಹುಮಾನ ಕೊಡುತ್ತೇನೆ ಎಂದು ನರೇಂದ್ರ ಮೋದಿ, ಅಮಿತ್ ಶಾ ಭರವಸೆ ನೀಡಿದ ಹಾಗೆ ಕಾಣುತ್ತದೆ ಎಂದು ಹೇಳಿದ್ದಾರೆ.
|
ಸದಾನಂದಗೌಡರು ಪಕ್ಷದಲ್ಲಿ ಏಕಾಂಗಿ
ಏಕಾಂಗಿಯಾಗಿ ಹೋಗಿರುವ ಅವರನ್ನು ಬಿಜೆಪಿಯಲ್ಲಿ ಯಾರೂ ಕೂಡ ಗಂಭೀರವಾಗಿ ಸ್ವೀಕರಿಸುತ್ತಿಲ್ಲ. ಇದಕ್ಕಾಗಿ ಅವರು ತಮ್ಮ ಜೋಕುಗಳಿಗೆ ತಾವೇ ನಕ್ಕು ರಾಜ್ಯದ ಜನರಿಗೆ ಮನರಂಜನೆ ನೀಡುತ್ತಾ ಬಂದಿದ್ದಾರೆ ಎಂದು ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದಾರೆ.
|
ಪಕ್ಷದಲ್ಲಿ ಗೊಬ್ಬರವಾಗಿರುವ ಸದಾನಂದಗೌಡರು
ನನ್ನ ಮಾನಸಿಕ ಸ್ಥಿತಿ ಬಗ್ಗೆ ಬಡಬಡಿಸುತ್ತಿರುವ ಡಿವಿ ಸದಾನಂದಗೌಡ ಅವರ ಬಗ್ಗೆ ಅನುಕಂಪ ಇದೆ. ಮೊದಲು ಮುಖ್ಯಮಂತ್ರಿ ಸ್ಥಾನದಿಂದ ನಂತರ ರೈಲ್ವೆ, ಕಾನೂನು, ಅಂಕಿ ಅಂಶ ಹೀಗೆ ಎಲ್ಲ ಕಡೆಗಳಲ್ಲಿಯೂ ತಿರಸ್ಕೃತಗೊಂಡ ಗೌಡರು ಈಗ ಪಕ್ಷದಲ್ಲಿ 'ಗೊಬ್ಬರ'ವಾಗಿ ಹೋಗಿದ್ದಾರೆ. ಈ ಹತಾಶೆ ಅವರಿಂದ ಇಂತಹ ಹೇಳಿಕೆಗಳನ್ನು ಹೊರಡಿಸುತ್ತಿದೆ ಎಂದರು.
|
ಮೋದಿ, ಶಾ ನನ್ನನ್ನು ಟೀಕಿಸಿದವರಿಗೆ ಬಹುಮಾನ ಕೊಡ್ತಾರಾ?
ರಾಜ್ಯದ ಬಿಜೆಪಿ ನಾಯಕರೆಲ್ಲರೂ ನನ್ನ ಮೇಲೆಯೇ ಮುಗಿಬೀಳುತ್ತಿರುವುದು ನೋಡಿದರೆ, ನನ್ನನ್ನು ಅತಿಹೆಚ್ಚು ಟೀಕಿಸಿದವರಿಗೆ ಏನೋ ಬಹುಮಾನ ಕೊಡ್ತೇವೆ ಎಂದು ಅಮಿತ್ ಶಾ, ನರೇಂದ್ರ ಮೋದಿ ಹೇಳಿರುವಂತೆ ಕಾಣುತ್ತದೆ. ನಾನು ಏಕಾಂಗಿಯಾಗಿದ್ದರೆ ಇವರಿಗ್ಯಾಕೆ ನನ್ನ ಬಗ್ಗೆ ಭಯ? ಎಂದು ಪ್ರಶ್ನಿಸಿದ್ದಾರೆ.
ಸದಾನಂದಗೌಡ ಅವರು ಮಾಡಿರುವ ಟೀಕೆ ಏನು?
ಸಿದ್ದರಾಮಯ್ಯ ದಿನದಿಂದ ದಿನಕ್ಕೆ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ವ್ಯಂಗ್ಯವಾಡಿದ್ದಾರೆ. ಈ ಹಿಂದೆ ವಾಮಮಾರ್ಗದಲ್ಲಿ ಯಾರು ಚುನಾವಣೆ ಮಾಡಿದ್ದಾರೆ ಎಂದು ಗೊತ್ತಿದೆ,ಸಿದ್ದರಾಮಯ್ಯ ಈಗ ಏಕಾಂಗಿಯಾಗಿದ್ದಾರೆ.ಅವ್ರ ಹಿಂದೆ ಯಾವೊಬ್ಬ ನಾಯಕರೂ ಇಲ್ಲ.ಹತಾಶರಾಗಿ ಈ ರೀತಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದರು.