ಬೆಂಗಳೂರಿನಲ್ಲಿ ಲೈಂಗಿಕ ಅಲ್ಪಸಂಖ್ಯಾತರ 'ಪ್ರೈಡ್ ಮಾರ್ಚ್'
ಬೆಂಗಳೂರು, ನ. 22: ಲೈಂಗಿಕ ಕಾರ್ಯಕರ್ತೆಯರು ಹಾಗೂ ಲೈಂಗಿಕ ಅಲ್ಪಸಂಖ್ಯಾತರ ಒಕ್ಕೂಟದ ವತಿಯಿಂದ ಭಾನುವಾರ ಬೆಂಗಳೂರು ನಗರದಲ್ಲಿ 'ಪ್ರೈಡ್ ಮಾರ್ಚ್' ಮತ್ತು 'ಕರ್ನಾಟಕ ಕೀರ್ ಹಬ್ಬ-2014' ಕಾರ್ಯಕ್ರಮವನ್ನು ಏರ್ಪಡಿಸಿದೆ.
ಈ ಕುರಿತು ಪತ್ರಕರ್ತರಿಗೆ ವಿವರಣೆ ನೀಡಿದ ಒಕ್ಕೂಟದ ಸದಸ್ಯೆ ಅರ್ಚನಾ ಶೆಟ್ಟಿ, ನಗರ ರೈಲ್ವೆ ನಿಲ್ದಾಣದಿಂದ ಮಲ್ಲೇಶ್ವರಂನಲ್ಲಿರುವ ಚಂದ್ರಶೇಖರ್ ಆಜಾದ್ ಮೈದಾನದವರೆಗೆ ಪ್ರೈಡ್ ಮಾರ್ಚ್ ನಡೆಸಲಾಗುವುದು. ಲಿಂಗ ಆಧಾರಿತ ಹಿಂಸೆ ಹಾಗೂ ದೌರ್ಜನ್ಯ ವಿರೋಧಿಸಿ ಈ ಜಾಥಾ ಆಯೋಜಿಸಲಾಗಿದೆ. "ನಾವು ಸಮಾಜದ ಪ್ರಮುಖ ಅಂಗವಾಗಿದ್ದೇವೆ. ಆದ್ದರಿಂದ ನಮ್ಮ ಧ್ವನಿ ಏರಿಸಲು ನಾವು ಇಚ್ಛಿಸುತ್ತೇವೆ" ಎಂದು ತಿಳಿಸಿದರು. [ಇತಿಹಾಸ ಬರೆದ ಮಂಗಳಮುಖಿಯರು]
ಪ್ರೈಡ್ ಮಾರ್ಚ್ ನಗರ ರೈಲ್ವೆ ನಿಲ್ದಾಣದಿಂದ ಮಧ್ಯಾಹ್ನ 2 ಗಂಟೆಗೆ ಆರಂಭವಾಗುವುದು. ಮಲ್ಲೇಶ್ವರಂನ ಚಂದ್ರಶೇಖರ್ ಆಜಾದ್ ಮೈದಾನದ ವರೆಗೂ ಮೆರವಣಿಗೆ ನಡೆಸಿ, ಸಭೆ ನಡೆಸಲಾಗುವುದು. ಸಭೆಯಲ್ಲಿ ದ್ವಿಲಿಂಗಿಗಳ ಕಲ್ಯಾಣ ಮಂಡಳಿ ಆರಂಭಿಸುವುದು, 377ನೇ ವಿಧಿಗೆ ತಿದ್ದುಪಡಿ ತರುವುದು, ದ್ವಿಲಿಂಗಗಳ ಹಕ್ಕುಗಳ ಅನುಷ್ಠಾನಕ್ಕೆ ಶೀಘ್ರ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ಒಕ್ಕೂಟದ ಸದಸ್ಯೆ ಅಕ್ಕಾಯಿ ಪದ್ಮಶಾಲಿ ಹೇಳಿದರು.