ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಗೆ ಅಧ್ಯಕ್ಷ, ಸದಸ್ಯರ ನೇಮಕ
ಬೆಂಗಳೂರು, ಏಪ್ರಿಲ್ 28: ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಂಗ ಸಂಸ್ಥೆಯಾದ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಗೆ ನೂತನ ಅಧ್ಯಕ್ಷರು ಮತ್ತು ಸದಸ್ಯರುಗಳನ್ನು ಆಯ್ಕೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಮಣಿಪುರ ಕೇಂದ್ರೀಯ ಕೃಷಿ ವಿಶ್ವವಿದ್ಯಾಲಯ ಕುಲಾಧಿಪತಿ, ಖ್ಯಾತ ಶಿಕ್ಷಣ ತಜ್ಞ ಎಸ್.ಅಯ್ಯಪ್ಪನ್ ಅವರ ಅಧ್ಯಕ್ಷತೆಯಲ್ಲಿ 3 ವರ್ಷದ ಅವಧಿಗೆ ನಾಮ ನಿರ್ದೇಶನ ಮಾಡಿ ಸಮಿತಿಯನ್ನು ಪುನರ್ ರಚಿಸಲಾಗಿದೆ.
Life after corona: ಕೊರೊನಾ ಕೊಟ್ಟ ಹೊಡೆತ ಮರೆಯುವಂತಿಲ್ಲ
ವಿದ್ಯುನ್ಮಾನ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಕರ್ನಾಟಕ ಸರ್ಕಾರದ ಆರ್ಥಿಕ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಉನ್ನತ ಶಿಕ್ಷಣ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಬೆಂಗಳೂರು ವಿವಿ ವಿಶ್ರಾಂತ ಉಪಕುಲಪತಿಗಳಾದ ಹೆಚ್.ಎ.ರಂಗನಾಥ್, ಗುಲ್ಬರ್ಗ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಬಿ.ಜಿ.ಮೂಲಿಮನಿ, ತುಮಕೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಎ.ಹೆಚ್.ರಾಜಾಸಾಬ್, ಸಿಐಎಫ್ಎ ನಿವೃತ್ತ ನಿರ್ದೇಶಕರಾದ ಎ.ಏಕನಾಥ್, ರೇವಾ ವಿಶ್ವವಿದ್ಯಾಲಯದ ವಿಶ್ರಾಂತ ಉಪ ಕುಲಪತಿಗಳಾದ ವಿ.ಜಿ.ತಳವಾರ್, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ವಿಶ್ರಾಂತ ಉಪಕುಲಪತಿಗಳಾದ ಕೆ.ಬಲವೀರ ರೆಡ್ಡಿ ಅವರುಗಳನ್ನು ಸದಸ್ಯರನ್ನಾಗಿ ಮಾಡಲಾಗಿದೆ.
ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕರಾಗಿರುವ ಹೆಚ್.ಹೊನ್ನೇಗೌಡ ಅವರನ್ನು ಸದಸ್ಯ ಕಾರ್ಯದರ್ಶಿಯಾಗಿದ್ದಾರೆ. ಈ ಸಮಿತಿಯು 13 ಸದಸ್ಯರುಗಳನ್ನು ಒಳಗೊಂಡಿದ್ದು, ಖ್ಯಾತ ಶಿಕ್ಷಣ ತಜ್ಞರು, ಹೆಸರಾಂತ ವಿಜ್ಞಾನಿಗಳು ಮತ್ತು ಸರ್ಕಾರದ ಹಿರಿಯ ಆಡಳಿತಗಾರರು ಸದಸ್ಯರಾಗಿದ್ದಾರೆ.
ಅಕಾಡೆಮಿಯು ಕಳೆದ ಸುಮಾರು 15 ವರ್ಷಗಳಿಂದ ವಿಜ್ಞಾನ ಶಿಕ್ಷಣವನ್ನು ವಿವಿಧ ಸ್ಥರಗಳಲ್ಲಿ ಸದೃಢಗೊಳಿಸಲು, ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಲು ಹಾಗೂ ಜನಸಾಮಾನ್ಯರಲ್ಲಿ ವೈಜ್ಞಾನಿಕ ಅರಿವನ್ನು ಮೂಡಿಸಲು ಪೂರಕವಾಗುವ ಕಾರ್ಯಕ್ರಮಗಳನ್ನು ರಾಜ್ಯಾದ್ಯಂತ ಯಶಸ್ವಿಯಾಗಿ ಆಯೋಜಿಸಿಕೊಂಡು ಬರುತ್ತಿದೆ ಎಂದು ಸರ್ಕಾರದ ಅಧೀನ ಕಾರ್ಯದರ್ಶಿ ಸುಮಾ.ಬಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.