ಚಿತಾಗಾರ ತಲುಪಿದ ಕಾರ್ನಾಡರ ಪಾರ್ಥಿವ ಶರೀರ
ಬೆಂಗಳೂರು, ಜೂನ್ 10: ಇಂದು ಬೆಳಿಗ್ಗೆ ನಿಧನರಾದ ಹಿರಿಯ ಸಾಹಿತಿ, ರಂಗಕರ್ಮಿ ಗಿರೀಶ್ ಕಾರ್ನಾಡ್ ಅವರ ಅಂತ್ಯಕ್ರಿಯೆಯು ಇಂದು ಸಂಜೆ ಬೈಯಪ್ಪನಹಳ್ಳಿಯಲ್ಲಿನ ಕಲ್ಪಳ್ಳಿ ಚಿತಾಗಾರದಲ್ಲಿ ನಡೆಯಲಿದ್ದು, ಇದಕ್ಕೆ ಕಲ್ಪಳ್ಳಿಯಲ್ಲಿ ಸಿದ್ಧತೆಯನ್ನು ಮಾಡಿಕೊಳ್ಳಲಾಗುತ್ತಿದೆ. ಕಾರ್ನಾಡ್ ಅವರ ಪಾರ್ಥಿವ ಶರೀರ ಹೊತ್ತ ಆಂಬುಲೆನ್ಸ್ ಚಿತಾಗಾರ ತಲುಪಿದ್ದು, ಅಂತಿಮ ದರ್ಶನ ಪಡೆಯಲು ಚಿತಾಗಾರದಲ್ಲೇ ವ್ಯವಸ್ಥೆಯನ್ನು ಮಾಡಲಾಗಿದೆ.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡ್ ವಿಧಿವಶ
ಮಧ್ಯಾಹ್ನ ಎರಡು ಗಂಟೆಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಅಂತ್ಯಸಂಸ್ಕಾರವನ್ನು ಯಾವುದೇ ಧಾರ್ಮಿಕ ವಿಧಿ ವಿಧಾನವಿಲ್ಲದೇ ವಿದ್ಯುತ್ ಚಿತಾಗಾರದಲ್ಲೇ ನಡೆಯಬೇಕೆಂಬುದು ಕಾರ್ನಾಡರ ಅಪೇಕ್ಷೆಯಾಗಿದ್ದು, ಅದರಂತೆ ಅಂತಿಮ ಸಂಸ್ಕಾರಕ್ಕೆ ಸಿದ್ಧತೆ ನಡೆಯುತ್ತಿದೆ. ಅಂತ್ಯಸಂಸ್ಕಾರಕ್ಕೆ ಹೂಗುಚ್ಛ, ಹಾರಗಳನ್ನು ತೆಗೆದುಕೊಂಡು ಹೋಗುವಂತಿಲ್ಲ ಎಂದೂ ಕುಟುಂಬ ಮೂಲಗಳು ತಿಳಿಸಿವೆ.
ಕಾರ್ನಾಡರ ಅಂತಿಮ ದರ್ಶನ ಪಡೆಯಲು ಕುಟುಂಬಸ್ಥರು, ಗಣ್ಯರು ಚಿತಾಗಾರಕ್ಕೆ ಭೇಟಿ ನೀಡುತ್ತಿದ್ದಾರೆ.