ಗಂಡ ಉಸಿರು ಬಿಟ್ಟ ಬೆನ್ನಲ್ಲೇ ಗರ್ಭಿಣಿ ಪತ್ನಿ ಆತ್ಮಹತ್ಯೆ!
ಬೆಂಗಳೂರು, ಮೇ. 20 : ಇನ್ನೆರಡು ತಿಂಗಳು ಕಳೆದಿದ್ದರೆ ಆ ಪುಟ್ಟ ಕಂದಮ್ಮನ ಪಾದ ಸ್ಪರ್ಶ ಈ ಭೂಮಿಗೆ ತಾಗುತ್ತಿತ್ತು! ಶಿಶು ಕಂದಮ್ಮ ಕಣ್ಣು ತೆರೆಯುವ ಮೊದಲೇ ತಾಯಿ ತೆಗೆದುಕೊಂಡ ಆತುರದ ಕೆಟ್ಟ ತೀರ್ಮಾನದಿಂದ ಹೊಟ್ಟೆಯಲ್ಲಿಯೇ ಸಮಾಧಿಯಾಗಿದೆ. ಇಂತದ್ದೊಂದು ಧಾರುಣ ಘಟನೆ ಕನಕಪುರದಲ್ಲಿ ನಡೆದಿದೆ.
ಪುಟ್ಟ ಲೋಕವಯ್ಯ
ಆಕೆ ಹೆಸರು ನಂದಿನಿ. ವಯಸ್ಸು ಇನ್ನೂ 28 ವರ್ಷ. ಅಪ್ಪನ ಸಾವಿನಿಂದ ಅನುಕಂಪದ ಆಧಾರದ ಮೇಲೆ ಕೆಲಸ ಪಡೆದಿದ್ದ ನಂದಿನಿ ಬೆಸ್ಕಾಂನಲ್ಲಿ ಕೆಲಸ ಮಾಡುತ್ತಿದ್ದಳು. ಉದ್ಯಮಿ ಸತೀಶ್ ಎಂಬುವರನ್ನು ಪ್ರೀತಿಸಿ ಮದುವೆಯಾಗಿದ್ದರು. ಪುಟ್ಟ ಸಂಸಾರ, ನೆಮ್ಮದಿ ಜೀವನ. ಇನ್ನೇನು ದಂಪತಿಯ ಕನಸಿನ ಕೂಸು ಕೆಲವೇ ತಿಂಗಳಲ್ಲಿ ಭೂ ಸ್ಪರ್ಶ ಮಾಡುವ ಖುಷಿಯಲ್ಲಿ ತೇಲಾಡುತ್ತಿದ್ದರು. ಎಲ್ಲರ ಜೀವದ ಜತೆಗೆ ಕಣ್ಣು ತೆರೆಯದ ಕಂದಮ್ಮನನ್ನು ಬಲಿ ಪಡೆದಿದೆ.
ಕೊರೊನಾ ಸಾವಿನ ಕೇಕೆ
ಕೆಲವು ದಿನಗಳ ಹಿಂದೆ ಸತೀಶ್ ಅವರ ತಾಯಿ ಕೊರೊನಾ ಸೋಂಕಿಗೆ ಬಲಿಯಾಗಿದ್ದರು. ತಾಯಿಗೆ ಹಾರೈಕೆ ಮಾಡಿ ಕೊರೊನಾ ಸೋಂಕಿಗೆ ಒಗಗಾಗಿದ್ದ ಸತೀಶ್ ಕೂಡ ಮೂರು ದಿನದ ಹಿಂದೆ ಸತೀಶ್ ಕೂಡ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಇಬ್ಬರ ಸಾವಿನ ಹಿನ್ನೆಲೆಯಲ್ಲಿ ಗರ್ಭಿಣಿ ನಂದಿನಿ ತನ್ನ ತವರು ಮನೆಗೆ ಹೋಗಿದ್ದರು. ಆದರೆ, ಗಂಡನ ಅಗಲಿಕೆಯ ನೋವಿನಿಂದ ತವರು ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಡೀ ಕುಟುಂಬವೇ ಕೊರೊನಾ ಗೆ ಬಲಿಯಾಗಿದೆ.
ಆತ್ಮಹತ್ಯೆ ಪರಿಹಾರ ಅಲ್ಲವೇ ಅಲ್ಲ
ಇನ್ನು ತನ್ನ ಹೊಟ್ಟೆಯಲ್ಲಿರುವ ಪುಟ್ಟ ಕೂಸಿನ ಬಗ್ಗೆ ಒಂದು ಕ್ಷಣ ಆಲೋಚನೆ ಮಾಡಿದ್ದಿದ್ದರೆ ನಂದಿನಿ ಜೀವ ಉಳಿಯಬಹುದಿತ್ತು. ಆ ಪುಟ್ಟ ಕಂದಮ್ಮನಲ್ಲೇ ಕಳೆದುಕೊಂಡ ಗಂಡನನ್ನು ನೋಡಬಹುದಿತ್ತು. ನಂದಿನಿ ತೆಗೆದುಕೊಂಡಿದ್ದು ತಪ್ಪು ತೀರ್ಮಾನ. ತನ್ನದಲ್ಲದ ತಪ್ಪಿಗೆ ಪುಟ್ಟ ಕಂದಮ್ಮ ಆಕೆಯ ಗರ್ಭದಲ್ಲಿಯೇ ಮಣ್ಣು ಆಗಿದ್ದು ಪಾಪದ ಕೆಲಸ.
ಮಾನಸಿಕ ಒತ್ತಡಕ್ಕೆ ಒಳಗಾಗಬೇಡಿ
ಕೊರೊನಾ ಸಾವುಗಳಿಂದ ಜನ ಸಾಮಾನ್ಯರು ಖಿನ್ನತೆಗೆ ಒಗಗಾಗುತ್ತಿದ್ದಾರೆ. ತನ್ನ ನೆಚ್ಚಿನವರನ್ನು ಕಳೆದುಕೊಂಡ ಕಷ್ಟದಲ್ಲಿ ಅವರೂ ಆತ್ಮಹತ್ಯೆ, ಜೀವನಕ್ಕೆ ಹಾನಿ ಮಾಡಿಕೊಳ್ಳುವ ವಾತಾವರಣ ನಿರ್ಮಾಣವಾಗಿದೆ. ಕೊರೊನಾದಿಂದ ಎದುರಾಗಿರುವ ಮಾನಸಿಕ ಭೀತಿಯನ್ನು ಜಪಾನ್ ಮಾದರಿಯಲ್ಲಿ ಹೋಗಲಾಡಿಲು ಜನರಿಗೆ ವೈಧ್ಯರ ಸಲಹೆ ಅಗತ್ಯವಿದೆ. ಸರ್ಕಾರ ಈ ನಿಟ್ಟಿನಲ್ಲಿ ಗಂಭೀರ ಚಿಂತನೆ ಮಾಡಬೇಕಿದೆ. ಖಿನ್ನತೆಗೆ ಒಳಗಾಗುವರಿಗೆ ಸಾಂತ್ವನ ಜತೆಗೆ ಅವರಿಗೆ ಭರವಸೆಯ ನಾಳೆಗಳು ನೆಮ್ಮದಿಯಾಗಿರುವಂತ ವಾತಾವರಣ ನಿರ್ಮಿಸಿಲು ಸರ್ಕಾರ ತುರ್ತಾಗಿ ಚಿಂತನೆ ನಡೆಸಬೇಕಿದೆ ಎಂದು ಮನೊವೈದ್ಯ ಡಾ. ಶ್ರೀಧರ್ ಸಲಹೆ ಮಾಡಿದ್ದಾರೆ.
ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇಂತಿದೆ: 080 - 25497777