ಬಜೆಟ್ ಪೂರ್ವಭಾವಿ ಸಭೆ: ಅಧಿಕಾರಿಗಳಿಗೆ ಯಡಿಯೂರಪ್ಪ ಸೂಚನೆ
ಬೆಂಗಳೂರು, ಫೆಬ್ರವರಿ 03: ಮುಂದಿನ ತಿಂಗಳು (ಮಾರ್ಚ್) 5 ನೇ ತಾರೀಖಿನಂದು ರಾಜ್ಯ ಬಜೆಟ್ ನಡೆಯಲಿದ್ದು, ಸಿಎಂ ಯಡಿಯೂರಪ್ಪ ಅವರು ಇಂದು ಬಜೆಟ್ ಪೂರ್ವಭಾವಿಸಭೆಯಲ್ಲಿ ಭಾಗವಹಿಸಿದರು.
ಇಲಾಖಾವಾರು ಸಚಿವರು, ಅಧಿಕಾರಿಗಳು ಭಾಗವಹಿಸಿದ್ದ ಪೂರ್ವಭಾವಿ ಸಭೆಯಲ್ಲಿ ಯಡಿಯೂರಪ್ಪ ಅವರು ಅಧಿಕಾರಿಗಳಿಗೆ ಈ ಬಾರಿಯ ಬಜೆಟ್ನ ಉದ್ದೇಶ, ಮುಖ್ಯವಾಗಿ ತಲುಪಬೇಕಿರುವ ವರ್ಗದ ಬಗ್ಗೆ ಮಾಹಿತಿ ನೀಡಿದರು. ಜೊತೆಗೆ ಇಲಾಖಾವಾರು ಅಂಕಿ-ಅಂಶಗಳ ಮೇಲೂ ಕಣ್ಣಾಡಿಸಿದರು.
ಇಂದು ಬೆಳಗ್ಗೆ 11 ಗಂಟೆಯಿಂದ ಆರಂಭವಾದ ಪೂರ್ವಭಾವಿ ಸಭೆ ಸಂಜೆ 5 ಗಂಟೆವರೆಗೂ ನಡೆಯಿತು. ವಿವಿಧ ಇಲಾಖೆ ಅಧಿಕಾರಿಗಳಿಂದ, ಕಳೆದ ಬಜೆಟ್ನಲ್ಲಿ ಘೋಷಣೆ ಮಾಡಿರುವ ಅನುದಾನ, ಈವರೆಗೂ ಖರ್ಚಾಗಿರುವ ಹಣ, ಯಾವ ಯಾವ ಆಯವ್ಯಯದಲ್ಲಿ ಯಾವ ಯಾವ ಕಾರ್ಯಕ್ರಮಗಳನ್ನು ಘೋಷಣೆ ಮಾಡಲಾಗಿತ್ತು ಎಂಬುದರ ಮಾಹಿತಿ ಪಡೆದರು.
ಅನುಷ್ಠಾನಗೊಂಡಿರುವ ಕಾರ್ಯಕ್ರಮಗಳು, ಬಾಕಿ ಉಳಿದಿರುವ ಕಾರ್ಯಕ್ರಮಗಳು, ಇಲಾಖೆಗಳಿಗೆ ನೀಡಿದ ಅನುದಾನ, ಉಳಿಕೆ ಅನುದಾನ, ಖರ್ಚಾಗಿರುವ ಅನುದಾನ, ಒಟ್ಟು ಪ್ರಗತಿ ಇನ್ನಿತರೆ ಮಾಹಿತಿಗಳನ್ನೂ ಸಹ ಯಡಿಯೂರಪ್ಪ ಪಡೆದುಕೊಂಡರು.
ದಿಢೀರನೇ ಅಧಿಕಾರ ಹಿಡಿದ ಯಡಿಯೂರಪ್ಪ ಅವರು ಜನಪ್ರಿಯ ಬಜೆಟ್ ಘೋಷಿಸಿ ಜನರ ಚಿತ್ತವನ್ನು ರಾಜಕೀಯದಿಂದ ಅಭಿವೃದ್ಧಿ ಕಡೆಗೆ ತರುತ್ತಾರೆ ಎನ್ನಲಾಗುತ್ತಿದೆ. ಆದರೆ ಜನಪ್ರಿಯ ಘೋಷಣೆಗಳನ್ನು ಮಾಡಲು ಸರ್ಕಾರದ ಖಜಾನೆಯ ಸ್ಥಿತಿ ಅನುವು ಮಾಡಿಕೊಡುತ್ತದೆಯೇ ಎಂಬುದು ಕಾದು ನೋಡಬೇಕಿದೆ.