ಸಭಿಕರ ಮೆಚ್ಚುಗೆಗೆ ಪಾತ್ರವಾದ ಪ್ರಣವಾಂಜಲಿ ನೃತ್ಯ ಕಾರ್ಯಕ್ರಮ
ಬೆಂಗಳೂರು, ಜೂನ್ 30: ಪ್ರಣವಾಂಜಲಿ ಅಕಾಡೆಮಿ ಫಾರ್ ಪರ್ಫಾಮಿಂಗ್ ಆರ್ಟ್ಸ್ ಸಂಸ್ಥೆ ಆಯೋಜಿದ್ದ ನೃತ್ಯ ಕಾರ್ಯಕ್ರಮ ಸಭಿಕರ ಮೆಚ್ಚುಗೆಗೆ ಪಾತ್ರವಾಗಿದೆ. ನಗರದ ದಕ್ಷಿಣ ಭಾಗದಲ್ಲಿರುವ ಅಚ್ಯುತ್ ಪಾರ್ಟಿ ಹಾಲ್ ನಲ್ಲಿ, ಜೂನ್ 30ರ ಸಂಜೆ ಏಳು ಗಂಟೆಗೆ ಈ ಕಾರ್ಯಕ್ರಮವನ್ನು ಸಂಸ್ಥೆ ಆಯೋಜಿಸಿತ್ತು.
ಭರತನಾಟ್ಯ ಪ್ರತಿಭಾ ಅನಾವರಣದ ಜೂನ್ ತಿಂಗಳ ಭಾಗವಾಗಿ ಈ ನೃತ್ಯ ಸಂಜೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಪವಿತ್ರ ಅವರ ನೇತೃತ್ವದಲ್ಲಿ ಈ ಸಂಸ್ಥೆ ಈಗಾಗಲೇ ಹಲವಾರು ಪ್ರತಿಭೆಗಳನ್ನು ಪರಿಚಯಿಸಿದೆ.
ಪ್ರಣವಾಂಜಲಿ ಸಂಸ್ಥೆಯ ವತಿಯಿಂದ ಆಯೋಜಿಸಲಾಗಿದ್ದ ಈ ನೃತ್ಯ ಕಾರ್ಯಕ್ರಮ, ಕುಮಾರಿ ಸಾಯಿಯ ಗಣೇಶನ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಗಂ ಗಣಪತಿ ಎನ್ನುವ ಗಣಪತಿ ಕೌತ್ವಂ ಮೂಲಕ ಕುಮಾರಿ ಸಾಯಿಯ ಉತ್ತಮ ಪ್ರರ್ದಶನಕ್ಕೆ ಸಭಿಕರು ಸಾಕ್ಷಿಯಾದರು.
ಶಿವ ತಾಂಡವ ನೃತ್ಯವನ್ನು ವರ್ಣಿಸುವ 'ಆನಂದ ನಟನವಾಡಿದ' ಎನ್ನುವ ಕೃತಿಗೆ ಕುಮಾರಿ ಸಾರಿಕ ಉತ್ತಮ ನೃತ್ಯ ಪ್ರದರ್ಶನ ನೀಡುವ ಮೂಲಕ, ಸಭಿಕರ ಚಪ್ಪಾಳೆಯನ್ನು ಗಿಟ್ಟಿಸಿಕೊಂಡರು.
ಕಾರ್ಯಕ್ರಮದ ನಿರೂಪಣೆಯನ್ನು ಕುಮಾರಿಯರಾದ ತೇಜಸ್ವಿನಿ ಹಾಗು ಸುಮೇದಾ ಅಚ್ಚುಕಟ್ಟಾಗಿ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಿದ ಮಕ್ಕಳಿಗೆ ಸಂಸ್ಥೆಯ ಅಧ್ಯಕ್ಷರಾಗಿರುವ ಮಂಜುನಾಥ್ ಅವರು ಪ್ರಮಾಣಪತ್ರವನ್ನು ನೀಡಿ ಸನ್ಮಾನಿಸಿದರು.
ಶಾಸ್ತ್ರೀಯ ನೃತ್ಯ ಮತ್ತು ಸಂಸ್ಕೃತಿಗೆ ಗೌರವ ಸೂಚಿಸಲು ಪ್ರಣವಾಂಜಲಿ ಅಕಾಡೆಮಿ ಇಂತಹ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದು, ಹಲವು ಯುವ ಪ್ರತಿಭೆಗಳನ್ನು ನೃತ್ಯಲೋಕಕ್ಕೆ ಪರಿಚಯಿಸಿದ ಕೀರ್ತಿಯನ್ನು ಈಗಾಗಲೇ ಹೊಂದಿದೆ.
Recommended Video