'ವೀರ ಸಾವರ್ಕರ್ ಬಗ್ಗೆ ಮೊದಲು ಅರಿತು ತಿಳಿದು ನಂತರ ಮಾತನಾಡಿ'
ಬೆಂಗಳೂರು, ಮೇ 27: ವೀರ ಸಾವರ್ಕರ್ ಬಗ್ಗೆ ಮೊದಲು ಅರಿತು ತಿಳಿದು ನಂತರ ಮಾತನಾಡಿ. ತುಷ್ಟೀಕರಣ ಮತಬ್ಯಾಂಕ್ ಗುಂಗಿನಿಂದ ಹೊರಗೆ ಬನ್ನಿ ನಾಮದಾರ್ ಸಿದ್ದರಾಮಯ್ಯನವರೇ ಎಂದು ಕೇಂದ್ರ ಕಾನೂನು ಸಚಿವ ಪ್ರಲ್ಹಾದ್ ಜೋಶಿ ಟ್ವೀಟ್ ಮಾಡಿದ್ದಾರೆ.
ಬೆಂಗಳೂರಿನ ಯಲಹಂಕದ ನೂತನ ಮೇಲ್ಸೇತುವೆಗೆ ಸಾವರ್ಕರ್ ಹೆಸರಿಟ್ಟು ಲೋಕಾರ್ಪಣೆ ಮಾಡಲಿರುವ ರಾಜ್ಯ ಸರ್ಕಾರದ ನಡೆ ಶ್ಲಾಘನೀಯ ಎಂದು ಸಚಿವ ಜೋಶಿ ಸಮರ್ಥಿಸಿಕೊಂಡಿದ್ದಾರೆ.
ಸ್ವಾತಂತ್ರ್ಯವೀರ ಸಾವರ್ಕರ್ ಅವರಿಗೆ ವಿರೋಧ ಮಾಡುವುದು ಈ ಮಣ್ಣಿನ ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಡುವ ಅವಮಾನ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪ್ರಬುದ್ಧ ಆಡಳಿತಗಾರರು. ಜನರೇ ಅವರ ಸೂತ್ರಧಾರರು. ದೇಶದ ವಿವಿಧೆಡೆ ವೃತ್ತ, ಕಟ್ಟಡ ಸಂಸ್ಥೆಗಳಿಗೆ ನೆಹರೂ, ನಕಲಿ ಗಾಂಧಿಗಳ ನಾಮಕರಣವೇ ಸ್ವಾತಂತ್ರ್ಯ ಹೋರಾಟಗಾರರಿಗೆ ನಾಮದಾರ್ ಪಾರ್ಟಿ ಸಲ್ಲಿಸಿದ ಕೊಡುಗೆ.
ನಿಮ್ಮ ಪಕ್ಷ ಎಷ್ಟು ಕಡೆ ನೆಹರೂ, ನಕಲಿ ಗಾಂಧಿಗಳ ನಾಮಕರಣ ಮಾಡಿದೆ ಎಂದು ನಿಮಗೆ ವಿವರ ಕೊಡಬಲ್ಲೆ. ಎಷ್ಟು ಕಡೆ ಸರ್ದಾರ ಪಟೇಲ್, ತಿಲಕ್, ಬೋಸ್, ಭಗತಸಿಂಗ್, ಆಜಾದ್ ಮೊದಲಾದವರ ನಾಮಕರಣ ನಿಮ್ಮ ಪಕ್ಷ ಮಾಡಿದೆ ಎಂದು ವಿವರ ಕೊಡಿ ಎಂದು ವಿರೋಧ ಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸವಾಲು ಹಾಕಿದ್ದಾರೆ.