ಪವರ್ ಬ್ಯಾಂಕ್ ಆಪ್ನಲ್ಲಿ ಹೂಡಿಕೆ ಮಾಡಿದ್ರೆ ನಿಮ್ಮ ಹಣ ಗೋವಿಂದ!
ಬೆಂಗಳೂರು, ಜೂ. 11: ಕೇವಲ, 1500 ರೂ. ಹೂಡಿಕೆ ಮಾಡಿದ್ರೆ, ಒಂದು ತಾಸಿಗೆ 3 ರೂ. ಆದಾಯ ಗಳಿಸಬಹುದು. ಒಂದು ದಿನಕ್ಕೆ 72 ರೂಪಾಯಿ ಆದಾಯ. ಅದೇ 15 ಸಾವಿರ ಹೂಡಿಕೆ ಮಾಡಿಬಿಟ್ಟರೆ, ಒಂದು ತಾಸಿಗೆ 30 ರೂ. ಒಂದು ದಿನಕ್ಕೆ ಸರಾಸರಿ 720 ರೂ. ಯಾವನಿಗೆ ಬೇಕು ಕೆಲಸ ! ಮೊಬೈಲ್ ಕೈಯಲ್ಲಿದ್ರೆ ಸಾಕು ! ಇಂಥದ್ದೊಂದು ಬೋಗಸ್ ಸ್ಕೀಮ್ ನಂಬಿ ಸಾವಿರಾರು ಕೋಟಿ ರೂಪಾಯಿ ಹೂಡಿಕೆ ಮಾಡಿ ಲಕ್ಷಾಂತರ ಮಂದಿ ಬೀದಿಗೆ ಬಿದ್ದಿದ್ದಾರೆ. ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದಂತೆ ವಂಚನೆ ಬಳಿಕ ರಾಜ್ಯದ ಸಿಐಡಿ ಸೈಬರ್ ಘಟಕದ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ.
ಏನಿದು ಪವರ್ ಬ್ಯಾಂಕ್ ಸ್ಕೀಮ್: ಆನ್ಲೈನ್ ಆಪ್ ಮೂಲಕ ಹಣ ಹೂಡಿಕೆ ಮಾಡಿ ಆದಾಯ ಗಳಿಸುವ ಬಗ್ಗೆ ಹಲವು ಬ್ಲೇಡ್ ಸ್ಕೀಮ್ಗಳನ್ನು ಡಬ್ಲೂಪಿ ರಮ್ಮಿ ಎಂಬ ಬೆಂಗಳೂರು ಮೂಲದ ಕಂಪನಿ ಪರಿಚಯಿಸಿತ್ತು. ಕಳೆದ ಎರಡು ತಿಂಗಳಿನಿಂದ ಪವರ್ ಬ್ಯಾಂಕ್ ಆಪ್ ಗೂಗಲ್ ಪ್ಲೇ ಸ್ಟೋರ್ನಲ್ಲಿ ಟ್ರೆಂಡಿಂಗ್ನಲ್ಲಿತ್ತು. ಕೊರೊನಾ ಸಂಕಷ್ಟ ಕಾಲದಲ್ಲಿ ಸುಲಭವಾಗಿ ಹಣ ಕಳಿಸುವ ಆಸೆಗೆ ಬಿದ್ದ ಜನರು ಪವರ್ ಬ್ಯಾಂಕ್ ಬೋಗಸ್ ಸ್ಕೀಮ್ಗಳನ್ನು ನಂಬಿ ಹಣ ಹೂಡಿಕೆ ಮಾಡಿದ್ದಾರೆ.
ಉತ್ತರಾಖಂಡ, ಗುಜರಾತ್, ದೆಹಲಿ, ಕರ್ನಾಟಕ ಜನ ಪವರ್ ಆಪ್ನಲ್ಲಿ ಹೂಡಿಕೆ ಮಾಡಿದ್ದಾರೆ. ಗಂಟೆಗಳ ಆಧಾರದ ಮೇಲೆ ಆದಾಯ ಗಳಿಸಬಹುದೆಂಬ ಬಿಡಿಗಾಸಿನ ಆಸೆಗೆ ಬಿದ್ದವರು ಲಕ್ಷ ಲಕ್ಷ ಹಣವನ್ನು ಪವರ್ ಬ್ಯಾಂಕ್ ಆಪ್ನಲ್ಲಿ ಹೂಡಿಕೆ ಮಾಡಿದ್ದಾರೆ. ಆದರೆ, ಚೀನಾ ಮೂಲದ ವಂಚಕರು ಸಾವಿರಾರು ಕೋಟಿ ಸಂಗ್ರಹವಾದ ಬಳಿಕ ಕೈ ಎತ್ತಿದ್ದಾರೆ. ಇದೀಗ ಪವರ್ ಬ್ಯಾಂಕ್ ಆಪ್ ಮತ್ತಿತರ ವಂಚಕ ಸುಮಾರು ಹದಿನೈದು ಆಪ್ ವಿರುದ್ಧ ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ. ಚೀನಾ ಮೂಲದ ವಂಚಕಿ ಕ್ಸಿಯೋಲಿನ್ ಎಂಬಾಕೆ ಬೆಂಗಳೂರಿನಲ್ಲಿದ್ದುಕೊಂಡೇ ಈ ವಂಚನೆ ಎಸಗಿರುವುದು ಪ್ರಾಥಮಿಕ ತನಿಖೆ ವೇಳೆ ಬೆಳಕಿಗೆ ಬಂದಿದೆ.
ಬೆಂಗಳೂರು ಸೈಬರ್ ಪೊಲೀಸರಿಗೆ ದೂರು
ಆನ್ಲೈನ್ ಹೂಡಿಕೆ ಹೆಸರಿನಲ್ಲಿ" ಪವರ್ ಬ್ಯಾಂಕ್" ಆಪ್ ದೇಶದಲ್ಲಿಮ ಲಕ್ಷಾಂತರ ಮಂದಿಯಿಂದ ಸಾವಿರಾರು ಕೋಟಿ ಹೂಡಿಕೆ ಮಾಡಿಸಿಕೊಂಡು ವಂಚನೆ ಮಾಡಿದೆ. ಈ ಪವರ್ ಬ್ಯಾಂಕ್ ಆಪ್, EZ ಪ್ಲಾನ್ ಆಪ್ಗಳು ಮೂಲ ಚೀನಾದ್ದಾಗಿದ್ದರೂ, ಹುಟ್ಟಿ ಕೊಂಡಿರುವುದು ಬೆಂಗಳೂರಿನಲ್ಲಿ! ಗಂಟೆಗಳ ಆಧಾರದ ಮೇಲೆ ಆದಾಯ ಗಳಿಸುವ ಆಸೆ ತೋರಿಸಿ ಸುಮಾರು 500 ಕೋಟಿ ರೂ. ವಂಚನೆ ಮಾಡಿರುವ ಪವರ್ ಬ್ಯಾಂಕ್ ವಿರುದ್ಧ ಸಿಐಡಿ ಸೈಬರ್ ಘಟಕದಲ್ಲಿ ದೂರು ದಾಖಲಾಗಿದೆ. ದಿನ ಹಾಗೂ ವಾರದ ಲಾಭಾಂಶ ಅಮಿಷೆ ತೋರಿಸಿ ಲಕ್ಷಾಂತರ ಮಂದಿಯಿಂದ ಹೂಡಿಕೆ ಮಾಡಿಸಿಕೊಂಡು ಮೋಸ ಮಾಡಿರುವ ಬಗ್ಗೆ ಹದಿಮೂರು ಕಂಪನಿಗಳ ವಿರುದ್ಧ "ರೇಜೋರ್ ಪೇ" ವಿಭಾಗದ ಕಾನೂನು ಸಲಹೆಗಾರ ಅಭಿಷೇಕ್ ಅಭಿನವ್ ಆನಂದ್ ಎಂಬುವರು ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಸುಮಾರು ಹದಿಮೂರು ಮಂದಿಯ ವಿರುದ್ಧ ಎಫ್ಐಆರ್ ದಾಖಲಿಸಿದ್ದು, ಈ ವಂಚಕ ಜಾಲದ ಕಿಂಗ್ ಪಿನ್ ಚೀನಾ ಮೂಲದ ಕ್ಸಿಯೋಲಿನ್ ಹಾಗೂ ಅಸನ್ ಅಹಮದ್ಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ರೋಜೋರ್ ಪೇ ಪಾತ್ರ ಏನು ?
ಲಾಭಾಂಶ ಗಳಿಕೆ ಬೋಗಸ್ ಸ್ಕೀಮ್ ಪರಿಚಯಿಸಿದ 13 ಕಂಪನಿ ಹಾಗೂ ಗ್ರಾಹಕರ ನಡುವಿನ ಹಣ ವರ್ಗಾವಣೆ ಮಧ್ಯವರ್ತಿಯಾಗಿ "ರೇಜೋರ್ ಪೇ" ಕಂಪನಿ ಕೆಲಸ ಮಾಡಿದ್ದು, ಇದು ನೀಡಿದ ದೂರಿನ ಆಧಾರದ ಮೇಲೆಯೇ ವಂಚನೆ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಇದರ ನಡುವೆ, ಪ್ರಕರಣದ ಪ್ರಮುಖ ಕಿಂಗ್ ಪಿನ್ ಹುಕ್ಸಿಯೋಲಿನ್ ಹಾಗೂ ಅಸನ್ ಅಹಮದ್ ನಿರೀಕ್ಷಣಾ ಜಾಮೀನು ಕೋರಿ ಸೆಷನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಗೆ ಸಿಐಡಿ ಪೊಲೀಸರು ಆಕ್ಷೇಪಣೆ ಸಲ್ಲಿಸಿದ್ದು ಅರ್ಜಿಯ ವಿಚಾರಣೆ ಜೂ. 15 ರಂದು ನಡೆಯಲಿದೆ. ಸಿಐಡಿ ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ ರಾಜ್ಯದಲ್ಲೂ ಲಕ್ಷಾಂತರ ಮಂದಿ ಹೂಡಿಕೆ ಮಾಡಿದ್ದು, ಆರಂಭದಲ್ಲಿ ಹಣ ಗಳಿಸಿದ್ದಾರೆ. ಆನಂತರ ಹೂಡಿಕೆ ಮಾಡಿದ ಹಣವೂ ಬಂದಿಲ್ಲ. ಲಾಭಾಂಶವೂ ಕಳೆದುಕೊಂಟು ಕೋಟ್ಯಂತರ ರೂಪಾಯಿ ಕಳೆದುಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಕಂಪನಿಗಳ ಕಾರ್ಯಾಚರಣೆ
ಚೀನಾ ಮೂಲದ ಕ್ಸಿಯೋಲಿನ್ ಬೆಂಗಳೂರಿನಲ್ಲಿ ಡಬ್ಲೂಪಿ ಪ್ಲೇ ರಮ್ಮಿ ಹೆಸರಿನ ಕಂಪನಿಯನ್ನು ಅಸನ್ ಅಹಮದ್ ಮೂಲಕ ತೆರೆಸಿದ್ದಾಳೆ. ಆನಂತರ ಪ್ಲೇ ರಮ್ಮಿ ಗೇಮ್ ಜಾಲ ತಾಣ ತೆರೆದು ಇದರ ಅಡಿಯಲ್ಲಿಯೇ ಪವರ್ ಬ್ಯಾಂಕ್ ಇಜೆಡ್ ಅರ್ನಿಂಗ್ ಎಂಬ ಆಪ್ ಗಳನ್ನು ತೆರೆದು ವಂಚನೆ ಮಾಡಲಾಗಿದೆ. ಉತ್ತರ ಭಾರತದಲ್ಲಿ ತನ್ನ ಸಹಚರರನ್ನು ನೇಮಿಸಿಕೊಂಡು ವಂಚನೆ ಮಾಡಿದ್ದಾಳೆ. ಇದೀಗ ಅಸನ್ ಅಹ್ಮದ್ ಹಾಗೂ ಕ್ಸಿಯೋಲಿನ್ ಸಹಚರರ ಸರಣಿ ಬಂಧನ ಕಾರ್ಯ ಉತ್ತರಖಾಂಡ್ ಹಾಗೂ ದೆಹಲಿಯಲ್ಲಿ ಮುಂದುವರೆದಿದೆ. ಸುಮಾರು 300 ಕೋಟಿ ರೂ.ಗೂ ಅಧಿಕ ಹಣ ವಂಚನೆ ಮಾಡಿರುವುದು ಗೊತ್ತಾಗಿದ್ದು, ಇದು 500 ಕೋಟಿ ರೂ. ತಲುಪುವ ಸಾಧ್ಯತೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿರುವ ಚೀನಾ ಕಿಂಗ್ ಪಿನ್
ಪವರ್ ಬ್ಯಾಂಕ್ ಈಜಿ ಅರ್ನಿಂಗ್ ಎಂಬ ಆಪ್ಗಳನ್ನು ರಚನೆ ಮಾಡಿದ್ದು ಇದರ ಸ್ಟಾರ್ಟ್ ಆಪ್ ಕಂಪನಿ ಬೆಂಗಳೂರಿನ ಆರ್ಓಸಿಯಲ್ಲಿಯೇ ನೋಂದಣಿ ಮಾಡಲಾಗಿದೆ. ಅಸನ್ ಅಹಮದ್ ಹಾಗೂ ಕ್ಸಿಯೋಲಿನ್ ಜನರಿಂದ ಹೂಡಿಕೆ ಮಾಡಿಸಿಕೊಂಡು ಮೋಸ ಮಾಡುವ ಉದ್ದೇಶದಿಂದ ಸ್ಟಾರ್ಟ್ ಪ್ ಕಂಪನಿ ಹೆಸರಿನಲ್ಲಿ ಹದಿನೈದು ಆಪ್ ಗಳನ್ನು ರಚನೆ ಮಾಡಿದ್ದಾರೆ. ಲಾಭಾಂಶದ ಅಮಿಷ ಹಾಗೂ ರೆಫರಲ್ ಕಮೀಷನ್ ಆಸೆ ಹುಟ್ಟಿಸಿ ಪ್ರಚಾರ ಪಡಿಸಿದ್ದಾರೆ. ಆರಂಭದಲ್ಲಿ ಹೂಡಿಕೆ ಮಾಡಿದವರಿಗೆ ಹಣ ಕೂಡ ನೀಡಿದ್ದಾರೆ. ಇದನ್ನೇ ನಂಬಿ ಭಾರತದಲ್ಲಿ ಗುಜರಾತ್, ಉತ್ತರಕಾಂಡ, ಕರ್ನಾಟಕ ತಮಿಳುನಾಡು, ಎಲ್ಲಾ ಕಡೆ ಹೂಡಿಕೆ ಮಾಡಿದ್ದಾರೆ. ಇದೀಗ ಸರಣಿ ಪ್ರಕರಣಗಳು ಈ ಕಂಪನಿಗಳ ವಿರುದ್ಧ ದಾಖಲಾಗಿವೆ.
Recommended Video
ದೆಹಲಿಯಲ್ಲಿ ಹನ್ನೊಂದು ಮಂದಿ ಸೆರೆ
ಪವರ್ ಬ್ಯಾಂಕ್ ಆಪ್ನ್ನು ಪ್ರಚುರ ಪಡಿಸಿ ಜನರನ್ನು ವಂಚಕ ಸ್ಕೀಮ್ಗೆ ತಳ್ಳುತ್ತಿದ್ದ ಹನ್ನೊಂದು ಆರೋಪಿಗಳನ್ನು ದೆಹಲಿ ಸೈಬರ್ ಪೊಲೀಸರು ಇತ್ತೀಚೆಗೆ ಬಂಧಿಸಿದ್ದಾರೆ. ಸುಮಾರು 250 ಕೋಟಿ ರೂ.ಗೂ ಅಧಿಕ ಹಣ ವಂಚನೆ ಅಗಿರುವ ಸಂಬಂಧ ದಾಖಲೆಗಳನ್ನು ಸಂಗ್ರಹಿಸಿದ್ದು ಐದು ಲಕ್ಷ ಮಂದಿ ಮೋಸಕ್ಕೆ ಒಳಗಾಗಿದ್ದಾರೆ ಎಂದು ಅಲ್ಲಿನ ಪೊಲೀಸರು ಸ್ಷ್ಟಪಡಿಸಿದ್ದಾರೆ. ಉತ್ತರಾಖಂಡ ಹಾಗೂ ದೆಹಲಿಯಲ್ಲಿ 350 ಕೋಟಿ ವಂಚನೆಯಾಗಿದ್ದು, ಇದೀಗ ಸರಣಿ ದೂರುಗಳು ದಾಖಲಾಗುತ್ತಿವೆ. ಉತ್ತರಾಖಂಡ ಹಾಗೂ ದೆಹಲಿ ಪೊಲೀಸರು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು,ಇದೀಗ ಕರ್ನಾಟಕದ ಸಿಐಡಿ ಪೊಲೀಸರು ಪ್ರಕರಣದ ಬೆನ್ನತ್ತಿದ್ದಾರೆ.