ಸುಳ್ಳು ಸುದ್ದಿ ಹಬ್ಬಿದ ಆರೋಪ: ಪೋಸ್ಟ್ ಕಾರ್ಡ್ ನ್ಯೂಸ್ ಮಹೇಶ್ ಹೆಗಡೆ ಬಂಧನ
ಬೆಂಗಳೂರು, ಏಪ್ರಿಲ್ 25: ಪೋಸ್ಟ್ ಕಾರ್ಡ್ ನ್ಯೂಸ್ ಆನ್ ಲೈನ್ ಪೋರ್ಟಲ್ ನ ಸಹ ಸಂಸ್ಥಾಪಕ ಮಹೇಶ್ ವಿಕ್ರಮ್ ಹೆಗಡೆಯನ್ನು ಬಂಧಿಸಲಾಗಿದೆ. ಸುಳ್ಳು ಸುದ್ದಿ ಹರಡಿದ ಆರೋಪದಲ್ಲಿ ಪೊಲೀಸರು ಬುಧವಾರ ಬಂಧಿಸಿದ್ದಾರೆ. ನಕಲಿ ಪತ್ರವೊಂದನ್ನು ಹೆಗಡೆ ಪ್ರಚಾರ ಮಾಡುತ್ತಿರುವ ಬಗ್ಗೆ ಗೃಹ ಸಚಿವ ಎಂ.ಬಿ.ಪಾಟೀಲ ಅವರು ದೂರು ದಾಖಲಿಸಿದ್ದರು.
ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಎಂ.ಬಿ.ಪಾಟೀಲ ಬರೆದಿದ್ದಾರೆ ಎಂದು ಆರೋಪಿಸಲಾದ ಪತ್ರ ಅದು. ಸ್ವಾಮಿಯೊಬ್ಬರ ಸಹಾಯ ಪಡೆದು, ಲಿಂಗಾಯತರಿಗೆ ಪ್ರತ್ಯೇಕ ಧರ್ಮದ ಸ್ಥಾನ ನೀಡಿದರೆ ಅದು ಹೇಗೆ ಸಮುದಾಯವನ್ನು ಒಡೆಯಬಹುದು ಎಂದು ವಿವರಿಸಿದ್ದ ಪತ್ರ ಅದು.
ಪೋಸ್ಟ್ ಕಾರ್ಡ್ ಕನ್ನಡ ವೆಬ್ ಸೈಟ್ ವಿರುದ್ಧ ಪ್ರಕಾಶ್ ರೈ ದೂರು
ಸಿಐಡಿ ಪೊಲೀಸರಿಂದ ಕೊಡಗಿನಲ್ಲಿ ಮಹೇಶ್ ವಿಕ್ರಮ್ ಹೆಗಡೆಯ ಬಂಧನವಾಗಿದೆ. ಎರಡು ವರ್ಷದ ಹಿಂದೆ ಕರ್ನಾಟಕ ವಿಧಾನಸಭಾ ಚುನಾವಣೆಗೂ ಮುನ್ನ ಈ ಪತ್ರ ಹರಿದಾಡಿತ್ತು. ಇದೀಗ ದೇಶದಾದ್ಯಂತ ಲೋಕಸಭಾ ಚುನಾವಣೆ ನಡೆಯುವ ವೇಳೆ ಮತ್ತೊಮ್ಮೆ ಹರಿದಾಡಿದೆ.
ಕಳೆದ ವರ್ಷ ಕೂಡ ಹೆಗಡೆಯನ್ನು ಬಂಧಿಸಲಾಗಿತ್ತು. ಸುಳ್ಳು ಹಾಗೂ ಕೋಮು ಸೂಕ್ಷ್ಮ ಸುದ್ದಿ ಹರಡಿದ ಆರೋಪ ಆತನ ಮೇಲಿತ್ತು. ಕೋಮು ದ್ವೇಷ ಹಾಗೂ ಪಿತೂರಿ ಆರೋಪದಲ್ಲಿ ಸೈಬರ್ ಕ್ರೈಂ ಕಾನೂನಿನ ಅಡಿಯಲ್ಲಿ ದೂರು ದಾಖಲಿಸಲಾಗಿತ್ತು. ಈ ಬಂಧನವನ್ನು ವಿರೋಧಿಸಿ ಕರ್ನಾಟಕ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದರು.
ಪೋಸ್ಟ್ ಕಾರ್ಡ್ ನ್ಯೂಸ್ ಪೇಜ್ ಕಿತ್ತು ಹಾಕಿದ ಫೇಸ್ ಬುಕ್
ಪಕ್ಷದ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ, ಇದು 'ದ್ವೇಷ ರಾಜಕಾರಣ'. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ರಾಜ್ಯದಲ್ಲಿ ನಿಜವಾದ ತುರ್ತು ಪರಿಸ್ಥಿತಿ ಹೇರುತ್ತಿದೆ ಎಂದಿದ್ದಾರೆ. ಪೋಸ್ಟ್ ಕಾರ್ಡ್ ನ್ಯೂಸ್ ವಿವಾದಕ್ಕೆ ಗುರಿ ಆಗುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಕೂಡ ಕೋಮು ದ್ವೇಷ ಬಿತ್ತುವ ಸುದ್ದಿಯನ್ನು ಪ್ರಕಟಿಸಿದೆ. ಮಹೇಶ್ ವಿಕ್ರಮ್ ಹೆಗಡೆಗೆ ಟ್ವಿಟ್ಟರ್ ನಲ್ಲಿ ಫಾಲೋವರ್ ಗಳ ಸಂಖ್ಯೆ ದೊಡ್ಡದಿದ್ದು, ಅದರಲ್ಲಿ ಪ್ರಧಾನಿ ನರೇಂದ್ರ ಮೋದಿ ಸಹ ಇದ್ದಾರೆ.