ಬಂಧನ ಭೀತಿಯಿಂದ ಅಂಚೆ ನೌಕರ ಆತ್ಮಹತ್ಯೆ: ಡೆತ್ನೋಟ್ನಲ್ಲೇನಿತ್ತು?
ಬೆಂಗಳೂರು, ಮೇ 14: ಸರ್ಕಾರಕ್ಕೆ ತಲುಪಿಸಬೇಕಾಗಿದ್ದ ಒಂಬತ್ತು ಲಕ್ಷ ರೂಗಳಿಗೂ ಹೆಚ್ಚು ಹಣವನ್ನು ಸುಳ್ಳು ದಾಖಲೆ ಸೃಷ್ಟಿಸಿ ಖಾಸಗಿ ಖಾತೆಗಳಿಗೆ ಜಮಾ ಮಾಡಿಕೊಂಡ ಆರೋಪ ಎದುರಿಸುತ್ತಿದ್ದ ಪೋಸ್ಟಲ್ ಅಸಿಸ್ಟೆಂಟ್ ವೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆರ್ಟಿ ನಗರ ಮಿನಿರಾಯನಪಾಳ್ಯದ ನಿವಾಸಿ ಶ್ರೀನಿವಾಸ್ ರೆಡ್ಡಿ(29) ಆತ್ಮಹತ್ಯೆ ಮಾಡಿಕೊಂಡವರು. ಶ್ರೀನಿವಾಸ್ ಅವರು ವಂಚನೆ ಎಸಗಿದ್ದಾರೆ ಎಂದು ಆರೋಪಿಸಿ ಅಂಚೆ ಕಾರ್ಯಾಲಯದ ಸಹಾಯಕ ಅಧೀಕ್ಷಕ ಬಿಜಿ ತಿಮ್ಮೋರಾವ್, ವಿಧಾನಸೌಧ ಠಾಣೆಗೆ ದೂರು ದಾಖಲಿಸಿದ್ದರು. ಈ ಬೆನ್ನಲ್ಲೇ ಶ್ರೀನಿವಾಸ್ ಆತ್ಮಹತ್ಯೆ ಮಾಡಿಕೊಂಡಿದ್ದು, ಬಂಧನದ ಭೀತಿಯಿಂದ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಗಳಿವೆ, ಶ್ರೀನಿವಾಸ್ ಮೂಲತಃ ಆಂಧ್ರಪ್ರದೇಶದವರು ಕುಟುಂಬ ಸಮೇತ ಮುನಿರಾಯನಪಾಳ್ಯದಲ್ಲಿ ವಾಸವಿದ್ದರು.
ಬೆಂಗಳೂರಲ್ಲಿ ಮಹಿಳಾ ಟೆಕ್ಕಿ ಆತ್ಮಹತ್ಯೆ, ಹಿಂದಿದೆ ಈ ಕಾರಣಗಳು
ಆರೋಪ ಏನು? ಸಾಮಾಜಿಕ ಭದ್ರತೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಹಣ ಇಎಂಒ ಮೂಲಕ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಹಣ ಕಳುಹಿಸುವುದು ಫಲಾನುಭವಿಗಳಿಗೆ ಪಾವತಿಯಾಗದೆ ವಾಪಸ್ ಬಂದ ಹಣವನ್ನು ಪುನಃ ರಾಜ್ಯ ಸರ್ಕಾರದ ಖಜೆನೆಗೆ ಜಮೆ ಮಾಡುವ ಕೆಲಸಕ್ಕೆ ಶ್ರೀನಿವಾಸ್ ಅವರನ್ನು ನಿಯೋಜಿಸಲಾಗಿತ್ತು.
ಆದರೆ ಶ್ರೀನಿವಾಸ್ ಮೇ 6 ರಂದು 9.16 ಲಕ್ಷ ರೂ ಮೊತ್ತದ ಚೆಕ್ನ್ನು ಸರ್ಕಾರಿ ಖಜಾನೆಗೆ ಜಮಾ ಮಾಡದೆ ಫಲಾನುಭವಿಗಳೆಂಬ ಸುಳ್ಳು ದಾಖಲೆ ಸೃಷ್ಟಿಸಿ 9 ವಿವಿಧ ಖಾಸಗಿ ಖಾತೆಗಳಿಗೆ ಹಣ ಹಾಕಿಕೊಂಡು ಸರ್ಕಾರಕ್ಕೆ ನಷ್ಟ ಉಂಟು ಮಾಡಿದ್ದರು.
ತಾನು ಬೆಟ್ಟಿಂಗ್ ದಂದೆಯಲ್ಲಿ ಸಾಕಷ್ಟು ಹಣ ಹಾಕಿ ಲಕ್ಷಾಂತರ ರೂಪಾಯಿಯಷ್ಟು ನಷ್ಟವಾಗಿತ್ತು. ಹಣ ಕಳೆದುಕೊಂಡಿದ್ದರಿಂದ ನೊಂದಿದ್ದೇನೆ ನನ್ನ ಸಾವಿಗೆ ನಾನೇ ಕಾರಣ ಎಂದು ಡೆತ್ನೋಟ್ನಲ್ಲಿ ಬರೆದಿಟ್ಟಿದ್ದರು.