ಡಿಸಿಪಿ ಇಶಾ ಪಂತ್ ವರ್ಗಾವಣೆ, ರದ್ದು, ವರ್ಗಾವಣೆ: ಏನಿದರ ಮರ್ಮ?
ಬೆಂಗಳೂರು, ಮಾ. 02: ಬೆಂಗಳೂರಿನ ಆಗ್ನೇಯ ವಿಭಾಗದ ಡಿಸಿಪಿ, ಹಿರಿಯ ಐಪಿಎಸ್ ಅಧಿಕಾರಿ ಇಶಾ ಪಂತ್ ವರ್ಗಾವಣೆ, ವರ್ಗಾವಣೆ ರದ್ದು ಹಾಗೂ ಮತ್ತೆ ವರ್ಗಾವಣೆ. ಇದರ ಹಿಂದೆ ರಾಜಕೀಯ ಮೇಲಾಟವಿದೆ ಎನ್ನಲಾಗಿದೆ. ಕೇಂದ್ರದ ಪ್ರಭಾವಿ ಸಚಿವರು ಹಾಗೂ ರಾಜ್ಯ ಬಿಜೆಪಿಯ ಯುವ ಸಂಸದರ ಮಧ್ಯೆ ನಡೆದ ರಾಜಕೀಯ ಮೇಲಾಟವೇ ರಾಜ್ಯ ಸರ್ಕಾರದ ಅಪರೂಪದ ನಡೆಗೆ ಕಾರಣ ಎಂದು ಮೂಲಗಳು ಹೇಳಿವೆ.
ಹಿರಿಯ ಐಪಿಎಸ್ ಅಧಿಕಾರಿ ಇಶಾ ಪಂತ್ ಅವರನ್ನು ಬೆಂಗಳೂರಿನ ಆಗ್ನೇಯ ವಿಭಾಗದ ಡಿಸಿಪಿ ಹುದ್ದೆಯಿಂದ ಸಿಐಡಿ ಎಸ್ಪಿ ಆಗಿ ಫೆಬ್ರವರಿ 26ರಂದು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ನಂತರ ಫೆಬ್ರವರಿ 29ರಂದು ವರ್ಗಾವಣೆ ರದ್ದು ಮಾಡಿ ಆಗ್ನೇಯ ವಿಭಾಗದ ಡಿಸಿಪಿ ಆಗಿಯೇ ಮುಂದುವರೆಯುವಂತೆ ಸೂಚಿಸಲಾಗಿತ್ತು. ಮತ್ತೆ ಅಂದು ಸಂಜೆ ವೇಳೆಗೆ ಇಶಾ ಪಂತ್ ಅವರನ್ನು ಬೆಂಗಳೂರು ಸಿಟಿಯ ಕಮಾಂಡೋ ಸೆಂಟರ್ ಡಿಸಿಪಿಯಾಗಿ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಮಾಡಿದೆ.
ಎರಡೂ ಬಾರಿಯೂ ಇಶಾ ಪಂತ್ ಅವರ ಹುದ್ದಗೆ ವರ್ಗಾವಣೆ ಆಗಿದ್ದು ಮತ್ತೊಬ್ಬ ಐಪಿಎಸ್ ಅಧಿಕಾರಿ ಶ್ರೀನಾಥ್ ಜೋಶಿ ಎಂಬುದು ಗಮನಾರ್ಹ ವಿಚಾರ.
ಆಗ್ನೇಯ ವಿಭಾಗದ ಇಶಾ ಪಂತ್ ಹುದ್ದೆಗೆ ಶ್ರೀನಾಥ್ ಜೋಶಿ
ಕೇಂದ್ರ ಸರ್ಕಾರದ ಪ್ರಭಾವಿ ಸಚಿವರ ಶಿಫಾರಸ್ಸಿನಂತೆ ಪೊಸ್ಟಿಂಗ್ಗಾಗಿ ಕಾಯುತ್ತಿದ್ದ ಐಪಿಎಸ್ ಅಧಿಕಾರಿ ಶ್ರೀನಾಥ್ ಜೋಶಿ ಅವರನ್ನು ಬೆಂಗಳೂರಿನ ಆಗ್ನೇಯ ವಿಭಾಗದ ಡಿಸಿಪಿಯಾಗಿ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಮಾಡಿತ್ತು. ಇಶಾ ಪಂತ್ ಅವರನ್ನು ಸಿಐಡಿ ಎಸ್ಪಿ ಆಗಿ ವರ್ಗಾವಣೆ ಮಾಡಲಾಗಿತ್ತು. ಇದೇ ಸಂದರ್ಭದಲ್ಲಿ ಪ್ರವೇಶ ಮಾಡಿದ ಬೆಂಗಳೂರಿನ ಯುವ ಸಂಸದರೊಬ್ಬರು ನೇರವಾಗಿ ಕೇಂದ್ರ ಗೃಹಸಚಿವರನ್ನು ಸಂಪರ್ಕ ಮಾಡಿದ್ದರಂತೆ.
ಬಳಿಕ ಕೇಂದ್ರ ಗೃಹ ಸಚಿವರ ಕಚೇರಿಯಿಂದ ಮುಖ್ಯಮಂತ್ರಿಗಳ ಸಚಿವಾಲಯಕ್ಕೆ ಬಂದ ಆದೇಶದಂತೆ ಶ್ರೀನಾಥ್ ಜೋಶಿ ಅವರ ವರ್ಗಾವಣೆ ರದ್ದುಗೊಳಿಸಿ, ಇಶಾ ಪಂತ್ ಅವರು ಆಗ್ನೇಯ ವಿಭಾಗದ ಡಿಸಿಪಿಯಾಗಿಯೇ ಮುಂದುವರೆಯಲು ಆದೇಶ ಬಂದಿತ್ತು.
ಯುವ ಸಂಸದರನ್ನು ತರಾಟೆಗೆ ತೆಗೆದುಕೊಂಡ ಕೇಂದ್ರ ಸಚಿವರು
ಯಾವಾಗ ವಿಚಾರ ಕೇಂದ್ರ ಗೃಹಸಚಿವರ ಕಚೇರಿ ತಲುಪಿದೆ ಎಂಬುದು ಗೊತ್ತಾಯಿತೋ ಆಗ ಕೇಂದ್ರ ಸಚಿವರು ಯುವ ಸಂಸದರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಒಂದು ವರ್ಗಾವಣೆ ವಿಚಾರವನ್ನು ಇಷ್ಟೊಂದು ಮಟ್ಟಕ್ಕೆ ತೆಗೆದು ಕೊಂಡು ಹೋಗುವ ಅಗತ್ಯವಿತ್ತಾ? ಎಷ್ಟು ದಿನವಾಯ್ತು ನೀ ರಾಜಕೀಯಕ್ಕೆ ಬಂದು? ಎಂದು ನೇರವಾಗಿಯೇ ಕೇಂದ್ರದ ಸಚಿವರು ಯುವ ಸಂಸದರನ್ನು ತರಾಟೆಗೆ ತೆಗೆದು ಕೊಂಡಿದ್ದಾರಂತೆ.
ವರ್ಗಾವಣೆ ರದ್ದುಗೊಳಿಸಲಾಗುತ್ತದೆ. ಅದೇನೂ ಮಾಡುತ್ತಿಯೋ ಮಾಡು ಎಂದು ಸವಾಲು ಹಾಕಿ ಮತ್ತೆ ವರ್ಗಾವಣೆ ಮಾಡಿಸಿದ್ದಾರೆ.
ಸಿಎಂ ಕಚೇರಿಯನ್ನೂ ತರಾಟೆಗೆ ತೆಗೆದುಕೊಂಡ ಕೇಂದ್ರ ಸಚಿವರು
ಯುವ ಸಂಸದರನ್ನು ತರಾಟೆಗೆ ಬಳಿಕ ಕೇಂದ್ರ ಸಚಿವರು ಸಿಎಂ ಕಚೇರಿಗೆ ಸಂಪರ್ಕ ಮಾಡಿದ್ದಾರೆ. ಒಂದು ವರ್ಗಾವಣೆ ಮಾಡಿ, ಅದನ್ನು ಕ್ಯಾನ್ಸಲ್ ಮಾಡ್ತೀರಿ ಅಂದ್ರೆ ಇದೇನಾ ನೀವು ನಮಗೆ ಕೊಡುವ ಗೌರವ ಎಂದು ಕೇಂದ್ರದ ಪ್ರಭಾವಿ ಸಚವರು ತರಾಟೆಗೆ ತೆಗೆದು ಕೊಂಡಿದ್ದಾರೆ. ತಕ್ಷಣ ಎಚ್ಚೆತ್ತುಕೊಂಡ ಸಿಎಂ ಸಚಿವಾಲಯ ಮತ್ತೆ ಇಬ್ಬರೂ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಮಾಡಿದೆ.
ಯುವ ಸಂಸದರನ್ನು ತರಾಟೆಗೆ ತೆಗೆದುಕೊಂಡ ಸಿಎಂ?
ಇಷ್ಟಾದ ಬಳಿಕ ಸಂಫೂರ್ಣ ಬೆಳವಣಿಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಗಮನಕ್ಕೆ ಬಂದಿದೆ ಎನ್ನಲಾಗಿದೆ. ತಕ್ಷಣ ಯುವ ಸಂಸದರನ್ನು ಕರೆಸಿಕೊಂಡಿದ್ದ ಮುಖ್ಯಮಂತ್ರಿಗಳು ಇನ್ನೂ ಚಿಕ್ಕವಯಸ್ಸು ಈಗಾಗಲೇ ಇಷ್ಟೊಂದು ರಾಜಕೀಯ ಮಾಡೊದಕ್ಕೆ ಹೋಗಬೇಡಪ್ಪ. ಆಡಳಿತಾತ್ಮಕ ದೃಷ್ಟಿಯಿಂದ ತೆಗೆದುಕೊಳ್ಳುವ ನಿರ್ಧಾರಗಳಿಗೆ ಅಡ್ಡಿ ಮಾಡಬಾರದು. ಈ ರೀತಿ ಆಗದಂತೆ, ಸಣ್ಣ ವರ್ಗಾವಣೆ ವಿಚಾರಗಳನ್ನೂ ಕೇಂದ್ರದ ನಾಯಕರಿಗೆ ಹೇಳುವಂತಹ ಸಣ್ಣ ರಾಜಕೀಯ ಮಾಡಬೇಡ ಎಂದು ಬುದ್ದಿ ಹೇಳಿದ್ದಾರಂತೆ. ಕೊನೆಗೆ ವರ್ಗಾವಣೆ ಪ್ರಹಸನ ಅಂತ್ಯವಾಗಿದೆ.