ಕವಿ ಡಾ. ಸಿದ್ದಲಿಂಗಯ್ಯ ನಿಧನಕ್ಕೆ ಸಿಎಂ ಯಡಿಯೂರಪ್ಪ ಸೇರಿ ಹಲವು ಗಣ್ಯರ ಸಂತಾಪ
ಬೆಂಗಳೂರು, ಜೂನ್ 11: ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ದಲಿತ ಕವಿ, ಬಂಡಾಯ ಸಾಹಿತಿ ಡಾ. ಸಿದ್ದಲಿಂಗಯ್ಯ ಅವರು ಇಂದು ನಿಧನರಾಗದ್ದು, ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
ಸಿದ್ದಲಿಂಗಯ್ಯ ಅವರಿಗೆ ಕಳೆದ ತಿಂಗಳು ಕೆಮ್ಮು ಮತ್ತು ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು, ಮೇ 2ರಂದು ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಇಲ್ಲಿನ ರಂಗದೊರೈ ಆಸ್ಪತ್ರೆಗೆ ದಾಖಲಾಗಿದ್ದ ಅವರನ್ನುಮೇ 5ರಂದು ಮಣಿಪಾಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಅಲ್ಲಿ ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು, ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
Breaking: ದಲಿತ ಕವಿ ಡಾ. ಸಿದ್ದಲಿಂಗಯ್ಯ ನಿಧನ
ಮುಖ್ಯಮಂತ್ರಿ ಯಡಿಯೂರಪ್ಪ ಸಂತಾಪ: ದಲಿತರ ನೋವನ್ನು ಸಮರ್ಥವಾಗಿ ಅಕ್ಷರ ರೂಪಕ್ಕಿಳಿಸಿ, ಅವರನ್ನು ಜಾಗೃತಗೊಳಿಸಿದವರು ಡಾ. ಸಿದ್ದಲಿಂಗಯ್ಯ ನೋವಿನ ಕೆಂಡವನ್ನೇ ಒಡಲೊಳಗಿರಿಸಿಕೊಂಡ ಅವರ ಕವನಗಳು ದಲಿತ ಚಳವಳಿಗೆ ಕಾವು ನೀಡಿತ್ತು. ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾಗಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಅವರು ನಾಡು-ನುಡಿಗೆ ಸಲ್ಲಿಸಿದ ಸೇವೆ ಅನನ್ಯ ಅವರ ನಿಧನದಿಂದ ಸಾಮಾಜಿಕ ಕಳಕಳಿಯ ಅಪೂರ್ವ ಸಾಹಿತಿಯನ್ನು ಕಳೆದುಕೊಂಡಂತಾಗಿದೆ ಎಂದು ಸಂತಾಪ ಸೂಚಿಸಿದ್ದಾರೆ.
ಕೆಎಸ್ ಈಶ್ವರಪ್ಪ ಸಂತಾಪ: ನಿಧನ ಈ ನಾಡಿಗೆ ಬಹುದೊಡ್ಡ ಆಘಾತ. ದಲಿತ ಪರ ಹೋರಾಟದ ಮೂಲಕವೇ ಶ್ರಮಿಕರ ನೋವಿಗೆ ದನಿಯಾಗಿದ್ದ ಸಿದ್ದಲಿಂಗಯ್ಯ ಧೀಮಂತ ನಾಯಕರಾಗಿದ್ದರು, ಮೃತರಿಗೆ ಚಿರಶಾಂತಿ ಸಿಗಲಿ ಎಂದು ಹೇಳಿದ್ದಾರೆ.
ಕವಿ ಸಿದ್ದಲಿಂಗಯ್ಯ ಅವರ ನಿಧನಕ್ಕೆ ಸಚಿವ ಸಿ.ಪಿ. ಯೋಗೇಶ್ವರ ಸಂತಾಪ: ಸಿದ್ದಲಿಂಗಯ್ಯ ಅವರ ನಿಧನದಿಂದ ಈ ನಾಡಿಗೆ ಬಹುದೊಡ್ಡ ನಷ್ಟವಾಗಿದೆ, ದಲಿತ ಪರ ಹೋರಾಟದ ಮೂಲಕವೇ ಶ್ರಮಿಕರ ನೋವಿಗೆ ದನಿಯಾಗಿದ್ದ ಸಿದ್ದಲಿಂಗಯ್ಯ ಅವರ ಕುಟುಂಬಕ್ಕೆ ನೋವನ್ನು ಭರಿಸುವ ಶಕ್ತಿ ಭಗವಂತ ನೀಡಲಿ.
ಖ್ಯಾತ ಕವಿ ಡಾ. ಸಿದ್ದಲಿಂಗಯ್ಯ ಅವರ ನಿಧನಕ್ಕೆ ಡಿ.ಕೆ. ಶಿವಕುಮಾರ್ ಸಂತಾಪ: 'ಸಿದ್ದಲಿಂಗಯ್ಯ ಅವರ ಅಗಲಿಕೆ ಸುದ್ದಿ ಬಹಳ ನೋವು ತಂದಿದೆ, ದಲಿತ ಹೋರಾಟ, ಸಾಮಾಜಿಕ ಸಮಾನತೆಗಾಗಿ ಸಾಹಿತ್ಯದ ಮೂಲಕ ಹೋರಾಟ ಆರಂಭಿಸಿದ ಮಹಾನ್ ಸಾಹಿತಿ ಸಿದ್ದಲಿಂಗಯ್ಯ , ಕಾವ್ಯ, ನಾಟಕ, ಪ್ರಬಂಧ, ವಿಮರ್ಶೆ, ಆತ್ಮಕಥನ, ಸಂಶೋಧನೆ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದ್ದರು. ಸಿದ್ದಲಿಂಗಯ್ಯ ಅಗಲಿಕೆ ದಲಿತ ಹೋರಾಟ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟ.
ಸಿದ್ದರಾಮಯ್ಯ ಸಂತಾಪ: ಕಾವ್ಯವನ್ನೇ ಖಡ್ಗವನ್ನಾಗಿಸಿ ಸಾಮಾಜಿಕ ಸಮಾನತೆಯ ಹೋರಾಟವನ್ನು ಮುನ್ನಡೆಸಿದ್ದ ದಲಿತ ಕವಿ, ವಿಧಾನಪರಿಷತ್ನ ಮಾಜಿ ಸದಸ್ಯ ಮತ್ತು ನನ್ನ ಆತ್ಮೀಯ ಮಿತ್ರ ಸಿದ್ದಲಿಂಗಯ್ಯನವರ ಸಾವಿನಿಂದ ಆಘಾತಕ್ಕೀಡಾಗಿದ್ದೇನೆ. ಸಾವನ್ನು ಮೀರಿದ ಸಾಹಿತ್ಯದ ಮೂಲಕ ಅವರು ಅಜರಾಮರ. ಅವರ ಕುಟುಂಬದ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ.
ಖ್ಯಾತ ಕವಿ ಡಾ. ಸಿದ್ದಲಿಂಗಯ್ಯ ಅವರ ನಿಧನಕ್ಕೆ ಆರೆಸ್ಸೆಸ್ ಸರಕಾರ್ಯವಾಹರಾದ ಶ್ರೀ ದತ್ತಾತ್ರೇಯ ಹೊಸಬಾಳೆಯವರ ಸಂದೇಶ ಇಲ್ಲಿದೆ.
ಕನ್ನಡದ ಖ್ಯಾತ ಕವಿ ಹಾಗೂ ನನ್ನ ಗೆಳೆಯ ಸಿದ್ದಲಿಂಗಯ್ಯ ಇನ್ನಿಲ್ಲ ಎಂದು ತಿಳಿದು ಮಾತೇ ನಿಂತಂತಾಗಿದೆ. ಅವರ ನಿಧನ ಕನ್ನಡ ನಾಡು-ನುಡಿಗಳಿಗಾದ ಅಪಾರ ನಷ್ಟ; ವೈಯಕ್ತಿಕವಾಗಿ ನನಗೆ ಅತೀವ ಆಘಾತ. ಕೋವಿಡ್ ಮಹಾಮಾರಿಗೆ ಅವರು ಬಲಿಯಾದುದು ಮನವನ್ನು ಕಲಕುತ್ತಿದೆ.
ಎಲ್ಲ ವಿಧದ ನೋವನ್ನುಂಡ ಸಮುದಾಯದ ಗಟ್ಟಿ ದನಿಯಾಗಿ, ಹೋರಾಟದ ಕಹಳೆಯೂದಿದ ಅವರು ಕನ್ನಡ ಭಾಷೆಯ ಬರಹ-ಮಾತುಗಳಲ್ಲಿ ನೋವಿನ ಅಭಿವ್ಯಕ್ತಿಯ ಹೊಸ ಛಾಪನ್ನೇ ಮೂಡಿಸಿದರು.
ಕವಿ, ಸಾಹಿತಿ, ಅಧ್ಯಾಪಕ, ಶಾಸಕ, ಆಡಳಿತಗಾರ ಮುಂತಾಗಿ ಹಲವು ಆಯಾಮಗಳಲ್ಲಿ ಪರಿಚಿತರಾದ ಡಾ। ಸಿದ್ದಲಿಂಗಯ್ಯ ಎಲ್ಲವನ್ನೂ ಮೀರಿ ಶ್ರೇಷ್ಠ ಮಾನವರಾಗಿದ್ದರು. ಸಂವೇದನೆಯಿದ್ದ ಒಬ್ಬ ಸಾಮಾಜಿಕ-ಸಾಹಿತ್ಯಕ ನೇತಾರನಾಗಿ ಅವರು ಸದಾಕಾಲ ನೆನಪಿರುತ್ತಾರೆ.
ವೈಚಾರಿಕ ಮತಭೇದವಿದ್ದೂ ಸಹಚಿಂತನಕ್ಕೆ ಹಾಗೂ ಸಹಮತಿ ಇರುವಲ್ಲಿ ಅದನ್ನು ವ್ಯಕ್ತಪಡಿಸಲು ಅವರು ಹಿಂಜರಿಯಲಿಲ್ಲ. ಸಿದ್ದಲಿಂಗಯ್ಯನವರ ಕುಟುಂಬಕ್ಕೂ ಅವರ ಎಲ್ಲ ಅಭಿಮಾನಿಗಳಿಗೂ ನನ್ನ ತೀವ್ರ ಸಂತಾಪಗಳು. ಅವರ ಆತ್ಮಕ್ಕೆ ಸದ್ಗತಿ ಸಿಗಲಿ.