ದೊರೆಸ್ವಾಮಿ ನಿಧನ: ಎಚ್ಡಿ ದೇವೇಗೌಡರ ಸಹಿತ ರಾಜಕೀಯ ಮುಖಂಡರ ಸಂತಾಪ
ಬೆಂಗಳೂರು, ಮೇ 26: ಸ್ವಾತಂತ್ರ್ಯ ಹೋರಾಟಗಾರ, ಹಿರಿ ವಯಸ್ಸಿನಲ್ಲಿಯೂ ಹೋರಾಟ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಶತಾಯುಷಿ ದೊರೆಸ್ವಾಮಿ ಬುಧವಾರ ಮಧ್ಯಾಹ್ನ ನಿಧನರಾಗಿದ್ದಾರೆ. ಕೊರೊನಾ ವೈರಸ್ ಸೋಂಕಿಗೆ ತುತ್ತಾಗಿದ್ದ ದೊರೆಸ್ವಾಮಿಯವರು ಅದರಿಂದ ಸಂಪೂರ್ಣ ಚೇತರಿಕೆ ಕಂಡು ಆಸ್ಪತ್ರೆಯಿಂದ ಮನೆಗೆ ವಾಪಾಸಾಗಿದ್ದರು. ಆದರೆ ಬುಧವಾರ ಹೃದಯಾಘಾತದಿಂದ ಅವರು ವಿಧಿವಶರಾಗಿದ್ದಾರೆ. ಈ ಸಂದರ್ಭದಲ್ಲಿ ಸಾಕಷ್ಟು ಗಣ್ಯರು ದೊರೆಸ್ವಾಮಿಯವರ ಹೋರಾಟದ ಹಾದಿಯನ್ನು ಸ್ಮರಿಸಿದ್ದಾರೆ.
ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರು ತಮ್ಮ ಸಂತಾಪವನ್ನು ಸೂಚಿಸಿದರು. "ಸ್ವಾತಂತ್ರ್ಯ ಹೋರಾಟಗಾರರು, ಪತ್ರಕರ್ತರು, ಶತಾಯುಷಿಗಳಾದ ಹೆಚ್. ಎಸ್. ದೊರೆಸ್ವಾಮಿಯವರು ನಿಧನರಾದ ಸುದ್ದಿ ತಿಳಿದು ಮನಸ್ಸಿಗೆ ತೀವ್ರ ನೋವುಂಟಾಯಿತು. ತಮ್ಮ ಜೀವನದುದ್ದಕ್ಕೂ ಸಮಾಜದ ಏಳಿಗೆಗೆ ದುಡಿದ ಒಬ್ಬ ಮಹಾನ್ ಸಾಮಾಜಿಕ ಹೋರಾಟಗಾರರನ್ನು ಕಳೆದುಕೊಂಡು ನಮ್ಮ ರಾಜ್ಯ ಇಂದು ಬಡವಾಗಿದೆ" ಎಂದು ದೇವೇಗೌಡರು ಹೇಳಿದ್ದಾರೆ.
ವ್ಯಕ್ತಿಚಿತ್ರ: ದಶಕಗಳ ಕಾಲ ರಾಜ್ಯದ ಹೋರಾಟಗಳಿಗೆ ಧ್ವನಿಯಾಗಿದ್ದ ಎಚ್ಎಸ್ ದೊರೆಸ್ವಾಮಿ
ವಿಧಾನಸಭೆಯ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರತಿಕ್ರಿಯಿಸಿದ್ದು ಶ್ರೀಯುತರ ನಿಧನದಿಂದ ನಮ್ಮ ನಾಡಿನ ಅತ್ಯಂತ ಹಿರಿಯರಾಗಿ ಸದಾ ಸಮಾಜದ ಬಗ್ಗೆ ಕಾಳಜಿಯನ್ನು ಹೊಂದಿದ್ದ ಮಾರ್ಗದರ್ಶಕರೊಬ್ಬರನ್ನು ಕಳೆದುಕೊಂಡಂತಾಗಿದೆ. ಶ್ರೀಯುತರ ಅಗಲಿಕೆಯಿಂದಾದ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತನು ಅವರ ಕುಟುಂಬದವರಿಗೆ ಹಾಗೂ ರಾಜ್ಯದ ಜನತೆಗೆ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.
ರಾಜ್ಯದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಕೂಡ ತಮ್ಮ ಸಂತಾಪವನ್ನು ತಿಳಿಸಿದ್ದಾರೆ. "ಶ್ರೀ ದೊರೆಸ್ವಾಮಿ ಅವರ ನಿಧನದ ಸುದ್ದಿ ಆಘಾತಕಾರಿಯಾಗಿದ್ದು, ದಿಗ್ಬಾಂತನಾಗಿದ್ದೇನೆ. ಅವರು ಇಳಿ ವಯಸ್ಸಿನಲ್ಲೂ ಉತ್ಸಾಹಿಯಾಗಿ, ಸಕ್ರಿಯವಾಗಿ ಹೋರಾಟಗಳಲ್ಲಿ ನೇತೃತ್ವ ವಹಿಸುತ್ತಿದ್ದರು. ಅವರ ಅಗಲಿಕೆಯಿಂದ ರಾಜ್ಯಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಭಗವಂತ ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ. ಅವರ ಕುಟುಂಬ ವರ್ಗದವರಿಗೆ ಹಾಗೂ ಅಭಿಮಾನಿ ಬಳಗಕ್ಕೆ ದುಃಖವನ್ನು ಭರಿಸುವ ಶಕ್ತಿ ನೀಡಲಿ" ಎಂದು ಪ್ರಾರ್ಥಿಸಿದ್ದಾರೆ.
ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ "ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಗಾಂಧೀವಾದಿ, ಶತಾಯುಷಿ ಪ್ರಗತಿಪರ ಚಿಂತಕರಾದ ಶ್ರೀ ಹೆಚ್.ಎಸ್.ದೊರೆಸ್ವಾಮಿ ರವರು ನಿಧನರಾದರೆಂದು ತಿಳಿದು ಅತೀವ ದುಃಖವಾಗಿದೆ. ಸದಾ ಸಮಾಜದ ಪರ ಮಿಡಿಯುತ್ತಿದ್ದ, ಹಿರಿಯ ಮುತ್ಸದ್ದಿಗಳು ಮತ್ತು ತಮ್ಮ ಇಳಿ ವಯಸ್ಸಿನಲ್ಲೂ ಜನಪರ ಮತ್ತು ಶೋಷಿತರ ಪರವಾದ ಅವರ ಹೋರಾಟ ಎಲ್ಲರಿಗೂ ಮಾದರಿ. ಶ್ರೀಯುತರಿಗೆ ಸದ್ಗತಿ ದೊರೆಯಲಿ ಮತ್ತು ಇವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗದವರಿಗೆ ಹಾಗೂ ಅಭಿಮಾನಿಗಳಿಗೆ ದೇವರು ಕರುಣಿಸಿಲಿ ಎಂದು ಪ್ರಾರ್ಥಿಸುತ್ತೇನೆ" ಎಂದು ಅಂತಿಮ ನಮನಗಳನ್ನು ಸಲ್ಲಿಸಿದ್ದಾರೆ.
"104 ವರ್ಷ ಆಯ್ತು, ನನಗ್ಯಾಕಪ್ಪಾ ಬೆಡ್ ಎಂದಿದ್ದರು ದೊರೆಸ್ವಾಮಿ"
Recommended Video
ಸಚಿವ ಸಿ.ಪಿ.ಯೋಗೇಶ್ವರ ದೊರೆಸ್ವಾಮಿ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ರಾಷ್ಟ್ರಪಿತ ಮಹಾತ್ಮಗಾಂಧಿ ಅವರ ಪ್ರೇರಣೆಯಿಂದ ಬ್ರಿಟಿಷರ ವಿರುದ್ಧ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ದೊರೆಸ್ವಾಮಿ ಅವರ ನಿಧನ ಕರ್ನಾಟಕಕ್ಕೆ ಮಾತ್ರವಲ್ಲ, ದೇಶಕ್ಕೆ ತುಂಬಲಾರದ ನಷ್ಟ ಎಂದಿದ್ದಾರೆ. ದೊರೆಸ್ವಾಮಿ ಅವರು ಯುವ ಜನತೆಯನ್ನು ನಾಚಿಸುವಂತೆ ಪ್ರಚಲಿತ ಜನಪರ ಹೋರಾಟಗಳಲ್ಲಿ ಹಾಗೂ ಬೇರೆ ಬೇರೆ ಸಾಮಾಜಿಕ ಚಳವಳಿಗಳಲ್ಲಿ ಇನ್ನೂ ತೊಡಗಿಸಿಕೊಂಡಿದ್ದರು. ಸೂರು, ಕೃಷಿ ಭೂಮಿ ಇಲ್ಲದವರು ಹಾಗೂ ಬಡವರು ಮತ್ತು ನಿರ್ಗತಿಕರ ಪರವಾದ ಹೋರಾಟಗಳಲ್ಲೂ ಸಕ್ರಿಯವಾಗಿ ಕಾಣಿಸಿಕೊಳ್ಳುತ್ತಿದ್ದರು ಎಂದು ಸ್ಮರಿಸಿದ್ದಾರೆ.