ವ್ಯಾಪಾರಿಯಿಂದ 37 ಲಕ್ಷ ದರೋಡೆ : ಪ್ರಮುಖ ಆರೋಪಿ ಸೆರೆ
ಬೆಂಗಳೂರು, ನವೆಂಬರ್ 19: ವ್ಯಾಪಾರಿಗೆ ಚಾಕು ತೋರಿಸಿ 37 ಲಕ್ಷ ರೂ ಹಣ ದೋಚಿ ಪರಾರಿಯಾಗಿದ್ದ ಆರೋಪಿಯನ್ನು ಕೆ.ಅರ್. ಮಾರ್ಕೆಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಜೆ.ಜೆ.ನಗರ ನಿವಾಸಿ ಆಸ್ಲಂಪಾಷಾ ಬಂಧಿತ ಆರೋಪಿ. ಈತನಿಂದ 30 ಲಕ್ಷ ರೂ. ನಗದು, ಹೋಂಡಾ ಆಕ್ಟೀವಾ ಹಾಗೂ ಮೊಬೈಲ್ ವಶಪಡಿಸಿಕೊಂಡಿದ್ದಾರೆ. ಕೃತ್ಯದಲ್ಲಿ ಭಾಗಿಯಾಗಿದ್ದ ಇತರೆ ಆರೋಪಿಗಳಿಗಾಗಿ ಶೋಧ ನಡೆಸಲಾಗುತ್ತಿದೆ.
ಮಾಮೂಲ್ ಪೇಟೆಯ ನಿವಾಸಿ, ಬಟ್ಟೆ ಅಂಗಡಿ ಮಾಲೀಕರು ಹಣ ದೋಚಿದ್ದ ದುಷ್ಕರ್ಮಿಗಳ ವಿರುದ್ಧ ದೂರು ನೀಡಿದ್ದರು. ಬಟ್ಡೆ ಖರೀದಿಸಿದ್ದ ಬಾಕಿ 37. 80 ಲಕ್ಷ ನಗದು ಹಣವನ್ನು ಮಾಮೂಲ್ ಪೇಟೆಯ ಲಾಲ್ ಬಿಲ್ಡಿಂಗ್ ನಲ್ಲಿರುವ ನಾಸಿರ್ ಆಲಿಖಾನ್ ಅವರಿಗೆ ನೀಡಲು ತೆರಳಿದ್ದರು.
ತನ್ನ ಅಂಗಡಿಯಲ್ಲಿ ಕೆಲಸ ಮಾಡುವ ಸತ್ತರ್ ಸಿಂಗ್ ಎಂಬುವರ ಜತೆ ಆಕ್ಟೀವಾ ವಾಹನದಲ್ಲಿ ಹಣ ತೆಗೆದು ಕೊಂಡು ಹೋಗುವಾಗ ಯಮಹಾ ಬೈಕಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ರಾಡು ತೋರಿಸಿ ಹೆದರಿಸಿದ್ದಾರೆ. ಅದೇ ವೇಳೆಗೆ ಮತ್ತಿಬ್ಬರು ಸೇರಿ ನಾಲ್ವರು ಹೆದರಿಸಿ 37 ಲಕ್ಷ ರೂ. ನಗದು ಹಣ ಕಸಿದುಕೊಂಡು ಪರಾರಿಗಿದ್ದರು.
ಹಣ ಕಳೆದುಕೊಂಡಿದ್ದ ಬಟ್ಟೆ ಅಂಗಡಿ ಮಾಲೀಕ ಮಾರ್ಕೆಟ್ ಠಾಣೆಗೆ ದೂರು ನೀಡಿದ್ದರು. ಪೊಲೀಸ್ ಇನ್ ಸ್ಪೆಕ್ಟರ್ ಬಿ.ಜಿ. ಕುಮಾರಸ್ವಾಮಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಪ್ರಮುಖ ಆರೋಪಿಯನ್ನು ಬಂಧಿಸಿ ಹಣ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ತಲೆಮರೆಸಿಕೊಂಡಿರುವ ಇತರೆ ಆರೋಪಿಗಳಿಗಾಗಿ ಶೋಧ ನಡೆಸಲಾಗುತ್ತಿದೆ. ಬಟ್ಟೆ ಅಂಗಡಿ ಮಾಲೀಕರು ಹಣ ಜೋಡಿಸಿ ನಾಸಿರ್ ಗೆ ಕೊಡುವ ಸಂಗತಿ ತಿಳಿದು ಕೊಂಡೇ ಈ ಕೃತ್ಯ ಎಸಗಿದ್ದು, ಈ ಕುರಿತು ತನಿಖೆ ನಡೆಸುತ್ತಿದ್ದಾರೆ.