ಜೈಲಿನ ತಟ್ಟೆ, ಲೋಟವನ್ನೇ ಚಾಕುವನ್ನಾಗಿ ಪರಿವರ್ತಿಸಿಕೊಂಡಿದ್ದ ಕೈದಿಗಳು
ಬೆಂಗಳೂರು, ಅಕ್ಟೋಬರ್ 10: ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಕೈದಿಗಳು ಜೈಲಿನ ತಟ್ಟೆ, ಲೋಟವನ್ನೇ ಚಾಕುವನ್ನಾಗಿ ಪರಿವರ್ತಿಸಿಕೊಂಡಿದ್ದರು ಎನ್ನುವ ವಿಚಾರ ಸಿಸಿಬಿ ದಾಳಿ ವೇಳೆ ಬಹಿರಂಗಗೊಂಡಿದೆ.
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ಬುಧವಾರ ಬೆಳ್ಳಂಬೆಳಗ್ಗೆ ಜಂಟಿ ಪೊಲೀಸ್ ಆಯುಕ್ತರ ತಂಡ ದಿಢೀರ್ ದಾಳಿ ನಡೆಸಿತ್ತು. ಆರು ತಾಸುಗಳು ಜೈಲಿನಲ್ಲಿ ಪರಿಶೀಲನೆ ನಡೆಸಿದಾಗ ಚಾಕು-ಚೂರಿ ರಹಸ್ಯ ಬಹಿರಂಗವಾಗಿದೆ.
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ಸಿಸಿಬಿ ದಾಳಿ
ವಿಚಾರಣಾಧೀನ ಹಾಗೂ ಸಜಾ ಕೈದಿಗಳ ಬ್ಯಾರಕ್ಗಳ ಶೋಧನೆ ವೇಳೆ ಕೆಲವರು, ಜೈಲಿನಲ್ಲಿ ನೀಡಿದ್ದ ತಟ್ಟೆ ಹಾಗೂ ಲೋಟಗಳಿಂದ ಹರಿತವಾದ ಅಸ್ತ್ರ ಮಾಡಿಕೊಂಡಿದ್ದರು. ಅವುಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ತಮ್ಮ ಸೆಲ್ಗಳಲ್ಲಿ ರಹಸ್ಯವಾಗಿ ದಿಂಬು ಮತ್ತು ಹೊದಿಕೆಗಳ ಅಡಿಯಲ್ಲಿಟ್ಟುಕೊಂಡು , ಜೈಲಿಗೆ ಬರುವ ತಮ್ಮ ಎದುರಾಳಿಗಳ ದಾಳಿಗೆ ಸಂಚು ರೂಪಿಸುತ್ತಿದ್ದರು. ದುರ್ಬಲ ಕೈದಿಗಳನ್ನು ಅಡಿಯಾಳಾಗಿ ಇಟ್ಟುಕೊಂಡಿದ್ದರು.
ಜೈಲಿನಲ್ಲಿ ಪ್ರತಿಯೊಬ್ಬ ಸಜಾ ಮತ್ತು ವಿಚಾರಣಾಧೀನ ಕೈದಿಗೆ ಊಟ ಸೇವನೆಗೆ ತಟ್ಟೆ ಹಾಗೂ ಲೋಟಗಳನ್ನು ಕಾರಾಗೃಹ ಇಲಾಖೆ ವಿತರಿಸುತ್ತದೆ. ಇವುಗಳನ್ನು ಜಜ್ಜಿ ಕಲ್ಲಿನಲ್ಲಿ ಮಸೆದು ಚಾಕು-ಚೂರಿ ಮಾಡಿಕೊಂಡಿದ್ದರು.