ಅಗ್ನಿ ಶ್ರೀಧರ್ ಆಪ್ತ ಸುನಿಲ್, ಒಂಟೆ ರೋಹಿತ್ ಬಂಧನ
ಜನಪ್ರಿಯ ಲೇಖಕ, ಪತ್ರಕರ್ತ, ಸಿನಿಮಾ ಸಂಭಾಷಣಾಕಾರ ಅಗ್ನಿ ಶ್ರೀಧರ್ ಅವರ ಮನೆ ಮೇಲೆ ಮಂಗಳವಾರ ಬೆಳ್ಳಂಬೆಳ್ಳಗೆ ಪೊಲೀಸ್ ದಾಳಿ. ಅವರ ಪರಮಾಪ್ತ ಬಚ್ಚನ್ ಕೂಡಾ ಬಂಧನ
ಬೆಂಗಳೂರು, ಫೆಬ್ರವರಿ 07: ಜನಪ್ರಿಯ ಲೇಖಕ, ಪತ್ರಕರ್ತ, ಸಿನಿಮಾ ಸಂಭಾಷಣಾಕಾರ ಅಗ್ನಿ ಶ್ರೀಧರ್ ಅವರ ಮನೆ ಮೇಲೆ ಮಂಗಳವಾರ ನಡೆದ ಬೆಳ್ಳಂಬೆಳ್ಳಗೆ ಪೊಲೀಸ್ ದಾಳಿ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ.
ಎಪಿಎಂಸಿ ಅಧ್ಯಕ್ಷ ಕಡಬಗೆರೆ ಶ್ರೀನಿವಾಸ್ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಒಂಟೆ ಅಲಿಯಾಸ್ ರೋಹಿತ್ ಗೆ ಅಗ್ನಿಶ್ರೀಧರ್ ಅವರು ಆಶ್ರಯ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದರಿಂದ ಈ ದಾಳಿ ನಡೆಸಲಾಗಿತ್ತು. ಇದೇ ವೇಳೆ, ಸೈಲಂಟ್ ಸುನೀಲ, ರೋಹಿತ್, ಬಚ್ಚನ್ ಅವರನ್ನೂ ಪೊಲೀಸರು ವಿಚಾರಣೆಗೊಳಪಡಿಸಿದ್ದರು.[ಪೊಲೀಸ್ ದಾಳಿ ಪೂರ್ಣ ವಿವರ ಓದಿ]
ಆದರೆ, ರಾತ್ರಿ ಹೊತ್ತಿಗೆ ತಮ್ಮ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿರುವ ಪೊಲೀಸರು ರಾಜಾಜಿ ನಗರ, ಸುಬ್ರಹ್ಮಣ್ಯ ನಗರದ ರೌಡಿಶೀಟರ್ ಆದ ಸೈಲೆಂಟ್ ಸುನಿಲ್ ನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ಏತನ್ಮಧ್ಯೆ, ವಿಚಾರಣೆ ವೇಳೆ ಕುಸಿದು ಬಿದ್ದಿದ್ದರಿಂದಾಗಿ ಆಸ್ಪತ್ರೆಗೆ ದಾಖಲಾಗಿರುವ ಅಗ್ನಿ ಶ್ರೀಧರ್ ಅವರನ್ನು ನೋಡಲು ಬಂದಿದ್ದ ಅವರ ಆಪ್ತ ಒಂಟೆ ರಮೇಶ್ ಅವರನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಕಡಬಗೆರೆ ಶ್ರೀನಿವಾಸ್ ಅವರ ಆಪ್ತ ಟಾಟಾ ರಮೇಶ್ ಅವರಿಗೆ ಬೆದರಿಕೆ ಹಾಕಿದ್ದ ಹಿನ್ನೆಲೆಯಲ್ಲಿ ಅವರ ವಿರುದ್ಧ ದೂರು ದಾಖಲಾಗಿದ್ದ ಹಿನ್ನೆಲೆಯಲ್ಲಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಆಸ್ಪತ್ರೆಯಲ್ಲಿ ಅಗ್ನಿ ಶ್ರೀಧರ್: ಪೊಲೀಸರು ವಿಚಾರಣೆ ನಡೆಸುತ್ತಿದ್ದ ವೇಳೆಗೆ ಅಗ್ನಿ ಶ್ರೀಧರ್ ಅವರು ಅಧಿಕ ರಕ್ತದೊತ್ತಡದಿಂದ ಕುಸಿದುಬಿದ್ದಿದ್ದಾರೆ. ಹಾಗಾಗಿ, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅವರು ಚೇತರಿಸಿಕೊಂಡ ಕೂಡಲೇ ವಿಚಾರಣೆಗೊಳಪಡಿಸಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.
ಅದರ ಬೆನ್ನಲ್ಲೇ ಅಗ್ನಿ ಶ್ರೀಧರ್ ಅವರ ಆಪ್ತರಾದ ಬಚ್ಚನ್ ಅವರನ್ನೂ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಮಂಗಳವಾರ ಬೆಳಗ್ಗೆ ಅಗ್ನಿ ಶ್ರೀಧರ್ ಅವರ ಮನೆಯ ಮೇಲೆ ಕಾರ್ಯಾಚಾರಣೆ ನಡೆಸಿದ ನಂತರವೂ ಅವರನ್ನು ವಿಚಾರಣೆಗೊಳಪಡಿಸಲಾಗಿತ್ತು. ಸಂಜೆ ವೇಳೆಗೆ ಕುಮಾರಸ್ವಾಮಿ ಲೇಔಟ್ ನಲ್ಲಿರುವ ಬಚ್ಚನ್ ಅವರ ಮನೆಯ ಬಳಿ ಬಚ್ಚನ್ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ಸ್ಪಷ್ಟಪಡಿಸಿವೆ.
ಅಗ್ನಿ ಶ್ರೀಧರ್ ಮನೆಯಲ್ಲಿ ಏನೇನು ಸಿಕ್ಕವು?: ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ನಲ್ಲಿರುವ ಮನೆಯ ಮೇಲೆ ಹೇಮಂತ್ ನಿಂಬಾಳ್ಕರ್ ಅವರ ನೇತೃತ್ವದ ತಂಡ ದಾಳಿ ನಡೆಸಿದೆ. ಡಿಸಿಪಿ ಹರ್ಷಾ, ಡಿಸಿ ಶರಣಪ್ಪ, ಡಿಸಿಪಿ ನಾರಾಯಣ ಅವರ ಪ್ರತ್ಯೇಕ ತಂಡಗಳು ವಾರೆಂಟ್ ಪಡೆದು ಮನೆಯಲ್ಲಿ ಪರಿಶೀಲನೆ ನಡೆಸಿದ್ದಾರೆ. ಮನೆಯಲ್ಲಿ ಲೈಸನ್ಸ್ ಇಲ್ಲದ ಗನ್ ಹಾಗೂ ಮಾರಾಕಸ್ತ್ರಗಳು ಪತ್ತೆಯಾಗಿವೆ ಎಂದು ಹೇಳಲಾಗಿದೆ.
ಶೂಟೌಟ್ ಪ್ರಕರಣದ ಆರೋಪಿ ಪಾಯ್ಸನ್ ರಾಮನ ಸೋದರನಿಗೆ ಆಶ್ರಯ ಕೊಟ್ಟಿದ್ದು, ಕಾಂಗ್ರೆಸ್ ಮುಖಂಡ ಟಾಟಾ ರಮೇಶ್ ಗೆ ಜೀವ ಬೆದರಿಕೆ ಹಾಕಿರುವ ಆರೋಪಗಳು ಸದ್ಯಕ್ಕೆ ಅಗ್ನಿ ಶ್ರೀಧರ್ ಅವರಿಗೆ ಮುಳುವಾಗಿದೆ.