ಪೊಲೀಸರಿಂದ ಪತ್ನಿ ಮೇಲೆ ಹಲ್ಲೆ, ಕಾಶಪ್ಪ ಆರೋಪ
ಬೆಂಗಳೂರು, ಜು. 5 : ಪೊಲೀಸರ ಮೇಲೆ ಕೈಮಾಡಿದ್ದಕ್ಕಾಗಿ ಬಂಧನದ ಭೀತಿ ಎದುರಿಸುತ್ತಿರುವ ಹುನಗುಂದ ಶಾಸಕ ವಿಜಯಾನಂದ್ ಕಾಶಪ್ಪನವರ್ ಗೋವಾದಲ್ಲಿ ಅವಿತುಕೊಂಡಿದ್ದಾರೆ ಎಂಬ ಸುದ್ದಿಯಿದೆ. ಆದರೆ, ಅವರು ಪೊಲೀಸರ ಕೈಗೆ ಇನ್ನೂ ಸಿಕ್ಕದಿರುವುದು ಅಚ್ಚರಿಯ ಸಂಗತಿ. ಆದರೆ, ವಕೀಲರ ಮುಖಾಂತರ ನ್ಯಾಯಾಲಯಕ್ಕೆ ಅವರು ನೀಡಿರುವ ಹೇಳಿಕೆ ಪ್ರಕರಣವನ್ನು ಮತ್ತಷ್ಟು ಗೋಜಲಾಗಿಸಿದೆ.
"ಪೊಲೀಸರು ತಮ್ಮ ಹೆಂಡತಿಯ ಮೇಲೆಯೇ ಕೈ ಮಾಡಿದ್ದರಿಂದ ನಾನು ಅವರ ಮೇಲೆ ಹಲ್ಲೆ ಮಾಡಬೇಕಾಯಿತು" ಎಂದು ಕಾಶಪ್ಪನವರ್ ಅವರ ವಕೀಲ ಎಸ್ ರಾಯ್ಕರ್ ಅವರು ನಿರೀಕ್ಷಣಾ ಜಾಮೀನು ಕೋರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಸಲ್ಲಿಸಲಾಗಿರುವ ಅರ್ಜಿಯಲ್ಲಿ ತಿಳಿಸಲಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.
ಇಷ್ಟು ಮಾತ್ರವಲ್ಲದೆ, ಪೊಲೀಸರು ಶಾಸಕ ವಿಜಯಾನಂದ ಕಾಶಪ್ಪನವರ್ ಅವರಿಂದ ಹಣ ಕೀಳಲು ಕೂಡ ಯತ್ನಿಸಿದರು ಎಂದು ನಿರೀಕ್ಷಣಾ ಜಾಮೀನು ಅರ್ಜಿಯಲ್ಲಿ ನಮೂದಿಸಲಾಗಿದೆ. ಪೊಲೀಸರು ಶಾಸಕ ಅಥವಾ ಅವರ ಜೊತೆಗಿದ್ದವರ ಮೇಲೆ ಬಿಟ್ಟು ಶಾಸಕರ ಪತ್ನಿಯ ಮೇಲೆ ಏಕೆ ಹಲ್ಲೆ ಮಾಡಿದರು ಎಂಬುದು ಇಲ್ಲಿ ಉತ್ತರಿಸಬೇಕಾದ ಪ್ರಶ್ನೆಯಾಗಿದೆ.
ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಯುಬಿ ಸಿಟಿಯಲ್ಲಿರುವ ಪಬ್ ನಲ್ಲಿ ಜು.1ರಂದು ಹುಟ್ಟುಹಬ್ಬ ಆಚರಿಸುತ್ತಿದ್ದ ಸಂದರ್ಭದಲ್ಲಿ, ತಡರಾತ್ರಿ ಏಕೆ ಪಾರ್ಟಿ ಮಾಡುತ್ತಿದ್ದೀರೆಂದು ಪ್ರಶ್ನಿಸಿದ ಪೊಲೀಸರಿಗೆ ಕಪಾಳಮೋಕ್ಷ ಮಾಡಿರುವ ಆರೋಪವನ್ನು ಕಾಶಪ್ಪನವರ್ ಅವರು ಎದುರಿಸುತ್ತಿದ್ದಾರೆ. ಅವರ ಜೊತೆ ಕೆಲ ರೌಡಿ ಶೀಟರ್ ಗಳು ಕೂಡ ಇದ್ದರೆಂದು ದೂರಿನಲ್ಲಿ ದಾಖಲಾಗಿದೆ.
ಈ ಪ್ರಕರಣ ಸದನವನ್ನು ಕೂಡ ಪ್ರವೇಶಿಸಿ ವಿರಾಟ್ ಸ್ವರೂಪ ಪಡೆದುಕೊಂಡಿದೆ. ಇಂಥ ರೌಡಿ ಶಾಸಕನ ವಿರುದ್ಧ ಸರಕಾರ ಏಕೆ ಇನ್ನೂ ಕ್ರಮ ತೆಗೆದುಕೊಂಡಿಲ್ಲ ಎಂದು ವಿರೋಧ ಪಕ್ಷದ ನಾಯಕರು ಹುಯಿಲೆಬ್ಬಿಸಿದ್ದಾರೆ. ಇದೊಂದು ಸಣ್ಣ ಪ್ರಕರಣ ಎಂದು ಗೃಹ ಸಚಿವ ಕೆಜೆ ಜಾರ್ಜ್ ಅವರು ಕೈಜಾಡಿಸಿಕೊಂಡಿದ್ದರೆ, ನಿಮ್ಮವರೇನು ಕಮ್ಮಿ ಎಂದು ಸಿದ್ದರಾಮಯ್ಯ ಅವರು ಬಿಜೆಪಿಗೆ ಟಾಂಗ್ ನೀಡಿದ್ದಾರೆ. ಕಾಂಗ್ರೆಸ್ ಪಕ್ಷದವರೇ ಆದ ರಮೇಶ್ ಕುಮಾರ್ ಅವರು, ಕಾಶಪ್ಪ ಅವಿವೇಕಿ, ಆತನಿಗೆ ತಪ್ಪು ಮಾಡಿದಾಗ ಹೇಗೆ ತಪ್ಪಿಸಿಕೊಳ್ಳಬೇಕೆಂಬುದು ಗೊತ್ತಿಲ್ಲ ಎಂದು ಚಟಾಕಿ ಹಾರಿಸಿದ್ದರು.
ಕಾಶಪ್ಪನವರ್ ಅವರು ತಪ್ಪು ಮಾಡೇ ಇಲ್ಲದಿದ್ದರೆ ಏಕೆ ತಲೆಮರೆಸಿಕೊಳ್ಳಬೇಕಾಗಿತ್ತು ಎಂಬ ಪ್ರಶ್ನೆ ಉದ್ಭವವಾಗಿದೆ. ಇಲ್ಲಿ ತಪ್ಪು ಯಾರದು ಎಂಬುದು ಪೊಲೀಸರು ವಶಪಡಿಸಿಕೊಂಡಿರುವ ಸಿಸಿಟಿವಿ ಫುಟೇಜ್ ನಿಂದ ಬಹಿರಂಗವಾಗಬೇಕಿದೆ. ಈ ನಡುವೆ, ಕಾಶಪ್ಪನವರ್ ಅವರ ಪ್ರಾಥಮಿಕ ಸದಸ್ಯತ್ವವನ್ನು ಕಾಂಗ್ರೆಸ್ ರದ್ದುಪಡಿಸಿದೆ.