ಬೆಂಗಳೂರಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು: ರೌಡಿ ಶೀಟರ್ ಸ್ಲಂ ಭರತ್ ಸಾವು
ಬೆಂಗಳೂರು, ಫೆಬ್ರವರಿ 27: ಪೊಲೀಸರ ಮೇಲೆ ಹಲ್ಲೆ ಮಾಡಿ ಓಡಿಹೋಗಲು ಯತ್ನಿಸಿದ್ದ ರೌಡಿ ಶೀಟರ್ ಸ್ಲಂ ಭರತ್ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ.
ಬೆಳ್ಳಂ ಬೆಳಗ್ಗೆ ಗುಂಡಿನ ಸದ್ದು ಕೇಳಿದ್ದು, ಕುಖ್ಯಾತ ರೌಡಿಶೀಟರ್ ಭರತ್ ಅಲಿಯಾಸ್ ಸ್ಲಂ ಭರತ ತಪ್ಪಿಸಿಕೊಳ್ಳುತ್ತಿದ್ದ ವೇಳೆ ಪೊಲೀಸರು ಫೈರಿಂಗ್ ಮಾಡಿದ್ದಾರೆ.
ಶ್ರೀರಾಮುಲು ಆಪ್ತ ಬಂಡಿ ರಮೇಶ್ ಕೊಲೆ ಆರೋಪಿ ಯಲ್ಲಪ್ಪ ಮರ್ಡರ್
ಸೋಲದೇವನಹಳ್ಳಿ ಬಳಿ ಘಟನೆ ನಡೆದಿದ್ದು, ಪೊಲೀಸರ ಮೇಲೆ ದಾಳಿ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಪೊಲೀಸರು ಗುಂಡು ಹಾರಿಸಿ ಭರತ್ನನ್ನು ಬಂಧಿಸಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.
ರೌಡಿ ಶೀಟರ್ ಲಕ್ಷ್ಮಣನ ಕೊಲೆ ಬಳಿಕ ಭರತ್ ದಾಂಧಲೆ ಹೆಚ್ಚಾಗಿತ್ತು. ರೌಡಿಶೀಟರ್ ಸ್ಲಂ ಭರತ್ ನನ್ನ ಮುರಾದಾಬಾದ್ನಿಂದ ಕರೆತರುತ್ತಿದ್ದ ವಿಷಯ ತಿಳಿದು ಆರೋಪಿಯ ಗ್ಯಾಂಗ್, ಪೀಣ್ಯ ಬಳಿ ಎರಡು ಕಾರಿನಲ್ಲಿ ಬಂದು ಪೊಲೀಸರನ್ನು ಅಡ್ಡಗಟ್ಟಿತ್ತು. ಒಂದು ಟಾಟಾ ಸುಮೊ ಮತ್ತು ಜೆನ್ ಕಾರಿನಲ್ಲಿ ಬಂದು ಪೊಲೀಸರ ಮೇಲೆ ಅಟ್ಯಾಕ್ ಮಾಡಿತ್ತು. ಅಲ್ಲದೆ ಪೊಲೀಸರ ಮೇಲೆ ಫೈರಿಂಗ್ ಸಹ ಮಾಡಿತ್ತು. ಬಳಿಕ ಮಾರಕಾಸ್ತ್ರಗಳಿಂದ ಪೊಲೀಸರ ಮೇಲೆ ಹಲ್ಲೆ ಮಾಡಿತ್ತು. ಈ ವೇಳೆ ಸಿಬ್ಬಂದಿ ಸುಭಾಷ್ ಗಾಯಗೊಂಡಿದ್ದರು.
ಪೊಲೀಸರಿಗೆ ಕಚ್ಚಿ ರೌಡಿ ಭರತ್ ತಪ್ಪಿಸಿಕೊಂಡಿದ್ದ, ನಗರದ ಎಲ್ಲಾ ಹೊರ ವಲಯಗಳಲ್ಲಿ ನಾಕಾ ಬಂಧಿ ಹಾಕಿ ತಪಾಸಣೆ ನಡೆಸಲಾಗುತ್ತಿತ್ತು. ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ಹಾಗೂ ಡಿಸಿಪಿ ನಿಶಾಜೇಮ್ಸ್ ತೀವ್ರ ಹುಡುಕಾಟ ನಡೆಸಿದ್ದರು.
ರೌಡಿ ಲಕ್ಷ್ಮಣ ಕೊಲೆಯಾದ ನಂತರ ಎಲ್ಲ ಡೀಲ್ ಗಳು ನನಗೇ ಬರಬೇಕು, ನಾನೇ ಎಲ್ಲ ಡೀಲ್ ಗಳನ್ನು ಮಾಡುತ್ತೇನೆ ಎಂದು ಲಕ್ಷ್ಮಣ ಮಾಡುತ್ತಿದ್ದ ವ್ಯವಹಾರಗಳಿಗೆ ಭರತ್ ಕೈ ಹಾಕಿದ್ದ. ಅಲ್ಲದೆ ಹಫ್ತಾ ವಸೂಲಿಗೆ ಇಳಿದಿದ್ದ, ಅಲ್ಲದೆ ಈ ಹಿಂದೆ ಬೆಂಗಳೂರಿನಲ್ಲಿ ಪೊಲೀಸರ ಮೇಲೆಯೇ ವಾಹನ ಹತ್ತಿಸೋಕೆ ಬಂದು ಎಸ್ಕೇಪ್ ಆಗಿದ್ದ. ಹೀಗಾಗಿ ಸ್ಲಂ ಭರತ್ನನ್ನು ಉತ್ತರ ಪ್ರದೇಶದ ಮುರದಾಬಾದ್ನಲ್ಲಿ ಪೊಲೀಸರು ಬಂಧಿಸಿದ್ದರು.
ಸ್ಲಂ ಭರತ್ ತನ್ನ ಗೆಳತಿಯೊಂದಿಗೆ ಮುರದಾಬಾದ್ ನಲ್ಲಿ ಇರುವ ವಿಚಾರ ತಿಳಿದ ಬೆಂಗಳೂರು ಪೊಲೀಸರು ಉತ್ತರ ಪ್ರದೇಶದ ಮುರದಾಬಾದ್ ಗೆ ತೆರಳಿದ್ದರು. ಈ ವೇಳೆ ಪೊಲೀಸರನ್ನು ರೌಡಿಗಳು ಎಂದು ಬಿಂಬಿಸಿದ ಸ್ಲಂ ಭರತ್ ಸುಮಾರು 300ಕ್ಕೂ ಹೆಚ್ಚು ರೌಡಿಗಳನ್ನು ಬಳಸಿಕೊಂಡು ಪೊಲೀಸರ ಮೇಲೆ ಅಟ್ಯಾಕ್ ಮಾಡಿಸಿದ್ದ. ಈ ವೇಳೆ ಸ್ಥಳೀಯ ಪೊಲೀಸರ ನೆರವು ಪಡೆದು ಸ್ಲಂ ಪೊಲೀಸರು ಭರತ್ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.
ಸೋಲದೇವನಹಳ್ಳಿ ಬಳಿ ಸ್ಲಂ ಭರತ್ ಮೇಲೆ ಗುಂಡು ಹಾರಿಸಿ, ಬಂಧಿಸಿದ್ದರು. ನಂತರ ಚಿಕಿತ್ಸೆ ಫಲಕಾರಿಯಾಗದೆ ಭರತ್ ಸಾವನ್ನಪ್ಪಿದ್ದಾನೆ. ರಾಜಗೋಪಾನಗರ ಇನ್ಸ್ಪೆಕ್ಟರ್ ರಿಂದ ಶೂಟೌಟ್ ನಡೆದಿದ್ದು, ರೌಡಿ ಭರತನ ಹೊಟ್ಟೆಗೆ ಗುಂಡು ತಗುಲಿತ್ತು. ಹೀಗಾಗಿ ಸಾವನ್ನಪ್ಪಿದ್ದಾನೆ.