ಪೊಲೀಸ್ ಠಾಣೆಯಲ್ಲಿ ಕರು ಸಾಕುತ್ತಿದ್ದ ಕರುಪ್ರೇಮಿ ಇನ್ಸ್ಪೆಕ್ಟರ್ ಗೆ ಹೃದಯಾಘಾತ!
ಬೆಂಗಳೂರು, ಅ. 21: ಆತ ಒಬ್ಬ ಪೊಲೀಸ್ ಅಧಿಕಾರಿ. ಗೋವು ಎಂದರೆ ಪಂಚ ಪ್ರಾಣ. ಕರ್ತವ್ಯ ನಿರ್ವಹಿಸುವ ಪೊಲೀಸ್ ಠಾಣೆಯಲ್ಲಿಯೇ ಕರು ಸಾಕುತ್ತಿದ್ದ. ವರ್ಗಾವಣೆಯಾದರೆ, ಅಲ್ಲಿಗೆ ಕರುವನ್ನು ತೆಗೆದುಕೊಂಡು ಹೋಗುತ್ತಿದ್ದ. ಕರು ಪ್ರೀತಿಸುತ್ತಿದ್ದ ಪೊಲೀಸ್ ಇನ್ಸ್ಪೆಕ್ಟರ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಮಹಮದ್ ರಫಿಕ್ ಸಾವನ್ನಪ್ಪಿದ ಪೊಲೀಸ್ ಅಧಿಕಾರಿ. ಜಾನುವಾರುಗಳನ್ನು ಪ್ರೀತಿಸುತ್ತಿದ್ದ ಮಹಮದ್ ರಫಿಕ್ ಬೆಳಗ್ಗೆ ಸ್ನಾನ ಮಾಡುವಾಗ ಉಸಿರಾಟದ ತೊಂದರೆ ಕಾಣಿಸಿಕೊಂಡು ಮೃತಪಟ್ಟಿದ್ದಾರೆ. ರಾಜ್ಯ ಅಪರಾಧ ದಾಖಲಾತಿಗಳ ಘಟಕದಲ್ಲಿ ಕೆಲಸ ಮಾಡುತ್ತಿದ್ದರು. ಮೈಸೂರು ಮೂಲದ ಮಹಮದ್ ರಫಿಕ್ ಅವರು ಯಾವುದೇ ಕಾರಣದಿಂದ ನೊಂದು ಠಾಣೆ ಮೆಟ್ಟಿಲು ಹತ್ತಿದವರಿಗೆ ಸಾಂತ್ವನ ಹೇಳುವ ಮೂಲಕ ಸ್ಪಂದಿಸುತ್ತಿದ್ದರು. ಇಂತಹ ಕಾರ್ಯಗಳ ಮೂಲಕವೇ ಅವರು ಇಲಾಖೆಯಲ್ಲಿ ದೊಡ್ಡ ಹೆಸರು ಗಳಿಸಿದ್ದರು.
ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಅಗಿ ಕೆಲಸ ಮಾಡುತ್ತಿದ್ದ ವೇಳೆ ಪೊಲೀಸ್ ಠಾಣೆಯಲ್ಲಿಯೇ ಕರು ಸಾಕಿ ರಾಜ್ಯದಲ್ಲಿ ಸುದ್ದಿಯಾಗಿದ್ದರು. ಅಲ್ಲದೇ ಪೊಲೀಸ್ ಕಾನ್ಸ್ಟೇಬಲ್ ಸುಬ್ರಮಣಿ ಸರಿಗಮಪದಲ್ಲಿ ಹಾಡಲು ಅವಕಾಶ ಕೊಟ್ಟು ಸುದ್ದಿಯಾಗಿದ್ದರು. ಚಿಕ್ಕಂದಿನಿಂದಿನಿಂದಲೂ ಕರುಗಳ ಬಗ್ಗೆ ಪ್ರೀತಿ ಬೆಳೆಸಿಕೊಂಡಿದ್ದ ಮಹಮದ್ ರಫಿಕ್ ಅವರು ಗಮನ ಸೆಳೆದಿದ್ದರು.
ಕೊರೊನಾ ಲಾಕ್ ಡೌನ್ ವೇಳೆ ತನ್ನ ವೇತನದ ಒಂದು ಭಾಗವನ್ನು ವೆಚ್ಚ ಮಾಡಿ ಗೋವುಗಳಿಗೆ ಆಹಾರ ನೀಡಿದ್ದರು. ವರ್ಗಾವಣೆಯಾದರೂ ನೆಚ್ಚಿನ ಕರುವನ್ನು ಅಲ್ಲಿಗೆ ತೆಗೆದುಕೊಂಡು ಹೋಗುವ ಮೂಲಕ ಸುದ್ದಿಯಾಗುತ್ತಿದ್ದರು. ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು, ಕೂಡಲೇ ವೈದ್ಯರನ್ನು ಕರೆಸಿ ಚಿಕಿತ್ಸೆ ಕೊಡಿಸಲಾಗಿದೆ. ಅಷ್ಟರಲ್ಲಿ ಮಹಮದ್ ರಫಿಕ್ ಸಾವನ್ನಪ್ಪಿದ್ದಾರೆ ವೈದ್ಯರು ದೃಢಪಡಿಸಿದ್ದಾರೆ. ಮಹಮದ್ ರಫಿಕ್ ಅವರ ಸಾವಿನ ವಿಚಾರ ತಿಳಿದ ಸಹೋದ್ಯೋಗಿಗಳು ಕಂಬನಿ ಮಿಡಿದಿದ್ದಾರೆ.
ಹೃದಯ ಶ್ರೀಮಂತ:
ಯಾರಾದರೂ ಕಷ್ಟ ಅಂತ ಪೊಲೀಸ್ ಠಾಣೆಗೆ ಹೋದರೆ ಸಾಮಾನ್ಯವಾಗಿ ಜೋರು ಧ್ವನಿಯಲ್ಲಿ ಮಾತನಾಡಿಸುತ್ತಾರೆ. ಹೀಗಾಗಿ ಪೊಲೀಸ್ ಠಾಣೆಗಳು ಜನ ಸ್ನೇಹಿಯಾಗಿಲ್ಲ ಎಂಬ ಕೂಗು ಮೊದಲಿನಿಂದಲೂ ಕೇಳಿ ಬರುತ್ತಿದೆ. ಆದರೆ ಮಹಮದ್ ರಫಿಕ್ ಇದಕ್ಕೆ ತದ್ವಿರುದ್ಧ. ಯಾರಾದರೂ ಸಮಸ್ಯೆ ಇದೆ ಅಂತ ಠಾಣೆಗೆ ಹೋದರೆ ಕೂರಿಸಿ ಅವರ ಸಮಸ್ಯೆ ಆಲಿಸುತ್ತಿದ್ದರು. ಕೌಟುಂಬಿಕ ವಿವಾದದಲ್ಲಿ ಠಾಣೆ ಮೆಟ್ಟಿಲೇರಿದರೆ ಅವರಿಗೆ ಸಾಂತ್ವನ ಹೇಳಿ ಬುದ್ಧಿವಾದ ಹೇಳಿ ಅಲ್ಲಿಯೇ ಇತ್ಯರ್ಥ ಮಾಡಿ ಕಳಿಸುತ್ತಿದ್ದರು. ಹೀಗಾಗಿ ಮಹಮದ್ ರಫಿಕ್ ಗಾಗಿ ಜನರು ಕಾಯುತ್ತಿದ್ದರು. ಅವರ ಸಲಹೆ ಪಡೆಯಲು ಅನೇಕರು ಹೋಗುತ್ತಿದ್ದರು. 2002 ರಲ್ಲಿ ಪೊಲೀಸ್ ಇಲಾಖೆಗೆ ಪಿಎಸ್ಐ ಆಗಿ ಸೇರ್ಪಡೆಯಾಗಿದ್ದರು. ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಿಂದ ವರ್ಗಾವಣೆ ಬಳಿಕ ರಾಜ್ಯ ಪೊಲೀಸ್ ಅಪರಾಧ ದಾಖಲಾತಿಗಳ ಘಟಕದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಏಕಾಏಕಿ ಹೃದಯಾಘಾತದಿಂದ ಸಾವನ್ನಪ್ಪಿರುವ ರಫಿಕ್ ಸಾವನ್ನಪ್ಪಿರುವ ಸುದ್ದಿ ಕೇಳಿ ಅವರ ಸಹೋದ್ಯೋಗಿಗಳು ಕಂಗಾಲಾಗಿದ್ದಾರೆ.
"ಮಹಮದ್ ರಫಿಕ್ ಗೆ ಜನರ ಸೇವೆ ಮಾಡುವ ಶೈಲಿಯೇ ಮಾದರಿ. ಯಾರನ್ನು ಕೆಟ್ಟ ಪದದಿಂದ ಮಾತನಾಡಿಸುತ್ತಿರಲಿಲ್ಲ. ಜನ ಸಾಮಾನ್ಯರು ಯಾರೇ ಠಾಣೆಗೆ ಹೋದರೂ ಅವರನ್ನು ಸಂತೈಸಿ ಬುದ್ಧಿವಾದ ಹೇಳಿ ಸಲಹೆ ನೀಡುತ್ತಿದ್ದರು. ಅವರು ಪೊಲೀಸ್ ಅಧಿಕಾರಿಯಾಗಿ ಕೆಲಸ ಮಾಡಿದ್ದಷ್ಟೇ ಕಾರ್ಯವನ್ನು ಆಪ್ತ ಸಮಾಲೋಚಕರಾಗಿಯೂ ಮಾಡಿದ್ದರು. ರಫಿಕ್ ದು ಮಾದರಿ ವ್ಯಕ್ತಿತ್ವ" ಎಂದು ಅವರ ಸಹೋದ್ಯೋಗಿಯೊಬ್ಬರು 'ಒನ್ ಇಂಡಿಯಾ ಕನ್ನಡ'ಕ್ಕೆ ತಿಳಿಸಿದ್ದಾರೆ.
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ:
ಆರೋಪಿ ವಿರುದ್ಧ ಹಾಕಿದ್ದ ಕೋಕಾ ಕಾಯ್ದೆ ಎತ್ತಿ ಹಿಡಿದ ಸುಪ್ರೀಂಕೋರ್ಟ್:
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಆರೋಪಿ ಮೋಹನ ನಾಯಕ ವಿರುದ್ಧ ದಾಖಲಿಸಿದ್ದ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ ( ಕೋಕಾ) ದೂರನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ. ಆರೋಪಿ ಮೋಹನ್ ನಾಯಕ್ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ. ಸಣ್ಣ ಸುಳಿವು ಇಲ್ಲದಂತೆ ಗೌರಿ ಲಂಕೇಶ್ ನ್ನು ಹತ್ಯೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ. ಆರೋಪಿಯನ್ನು ಬಂಧಿಸಿದ್ದ ವಿಶೇಷ ತನಿಖಾ ತಂಡದ ಕಾರ್ಯ ಶೈಲಿಯನ್ನು ದೇಶವೇ ಕೊಂಡಾಡಿತ್ತು.
ಮೋಹನ ನಾಯ್ಕ ವಿರುದ್ಧ ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿದ ಬಳಿಕ ಕೋಕಾ ಕಾಯ್ದೆ ಅಡಿ ಕೇಸು ದಾಖಲಿಸಿದ್ದರು. ಇದನ್ನು ಪ್ರಶ್ನಿಸಿ ಮೋಹನ ನಾಯ್ಕ್ ಹೈಕೋರ್ಟ್ ಮೊರೆ ಹೋಗಿದ್ದ. ಮೋಹನ್ ನಾಯಕ್ ವಾದ ಆಲಿಸಿದ್ದ ಹೈಕೋರ್ಟ್ ಕೋಕಾ ಕಾಯ್ದೆ ಅಡಿ ದಾಖಲಿಸಿದ್ದ ದೂರನ್ನು ರದ್ದು ಪಡಿಸಿತ್ತು. ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಕರ್ನಾಟಕ ಹೈಕೋರ್ಟ್ ಕೊಟ್ಟಿರುವ ತೀರ್ಪನ್ನು ರದ್ದು ಪಡಿಸಿದೆ. ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗಳ ವಿರುದ್ಧ ಕೋಕಾ ಕಾಯ್ದೆ ಅಡಿ ಕೇಸು ದಾಖಲಿಸಿರುವ ಎಸ್ಐಟಿ ಕ್ರಮ ಸರಿಯದೆ.
Recommended Video