ರವಿ ಪೂಜಾರಿ ಹೇಳಿಕೆಗೆ ಬೆಚ್ಚಿಬಿದ್ದ ಸಿಸಿಬಿ ಪೊಲೀಸರು!
ಬೆಂಗಳೂರು, ಮಾರ್ಚ್ 15 : ಭೂಗತ ಪಾತಕಿ ರವಿ ಪೂಜಾರಿ ವಿಚಾರಣೆ ನಡೆಸುತ್ತಿರುವ ಸಿಸಿಬಿ ಪೊಲೀಸರು ಆತನ ಹೇಳಿಕೆಗೆ ಬೆಚ್ಚಿ ಬಿದ್ದಿದ್ದಾರೆ. ರವಿ ಪೂಜಾರಿಗೆ ಪೊಲೀಸ್ ಇಲಾಖೆಯಿಂದ ಮಾಹಿತಿ ರವಾನೆಯಾಗುತ್ತಿತ್ತು ಎಂಬ ಮಾಹಿತಿಯನ್ನು ಆತ ನೀಡಿದ್ದಾನೆ.
ಸಿಸಿಬಿಯ ಸಹಾಯಕ ಪೊಲೀಸ್ ಕಮೀಷನರ್ವೊಬ್ಬರು ರವಿ ಪೂಜಾರಿಗೆ ಮಾಹಿತಿಗಳನ್ನು ರವಾನೆ ಮಾಡುತ್ತಿದ್ದರು. ಈ ವಿಚಾರದ ಕುರಿತು ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರರಾವ್ಗೆ ಮಾಹಿತಿ ನೀಡಲಾಗಿದೆ.
ಡಾನ್ ರವಿ ಪೂಜಾರಿ ಆಫ್ರೀಕಾ ದೇಶದಲ್ಲಿ ಸಮಾಜ ಸೇವಕ!
ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ಗೆ ಪತ್ರ ಬರೆದಿರುವ ಭಾಸ್ಕರರಾವ್ ತಪ್ಪಿತಸ್ಥ ಎಸಿಪಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪತ್ರ ಬರೆದಿದ್ದಾರೆ. ಪೊಲೀಸ್ ಅಧಿಕಾರಿಯನ್ನು ವರ್ಗಾವಣೆ ಮಾಡಲಾಗಿದ್ದು, ಅವರ ವಿರುದ್ಧ ಇಲಾಖಾ ವಿಚಾರಣೆಯನ್ನು ಆರಂಭ ಮಾಡಲಾಗಿದೆ.
ಭೂಗತ ದೊರೆ ರವಿ ಪೂಜಾರಿ ಜಾತಕ ಬಿಚ್ಚಿಟ್ಟ ಎಡಿಜಿಪಿ ಅಮರ್
ಮಂಗಳೂರಿನಲ್ಲಿ ಕರ್ತವ್ಯ ನಿರ್ವಹಣೆ ಮಾಡಿದ್ದ ಪೊಲೀಸ್ ಅಧಿಕಾರಿ ರವಿ ಪೂಜಾರಿ, ಕಲಿ ಯೋಗೇಶ್ ಸೇರಿ ಹಲವರ ಜೊತೆ ಸಂಪರ್ಕ ಹೊಂದಿದ್ದರು. ಅವರು ಬಳಿಕ ಬೆಂಗಳೂರಿಗೆ ವರ್ಗಾವಣೆಗೊಂಡರೂ ರವಿ ಪೂಜಾರಿಗೆ ಇಲ್ಲಿನ ಬೆಳವಣಿಗೆ ಕುರಿತು ಮಾಹಿತಿಗಳನ್ನು ನೀಡುತ್ತಿದ್ದರು.
ಪೊಲೀಸ್ ಅಧಿಕಾರಿ ಯಾರು?
ಸಿಸಿಬಿಯ ಸಹಾಯಕ ಪೊಲೀಸ್ ಕಮಿಷನರ್ ವೆಂಕಟೇಶ್ ಪ್ರಸನ್ನ ರವಿ ಪೂಜಾರಿಗೆ ಮಾಹಿತಿಯನ್ನು ನೀಡುತ್ತಿದ್ದರು. ರವಿ ಪೂಜಾರಿ ಈ ಕುರಿತು ಹೇಳಿಕೆ ನೀಡಿದ ಬಳಿಕ ಅವರನ್ನು ಅತಿ ಗಣ್ಯ ವ್ಯಕ್ತಿಗಳ ಭದ್ರತಾ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ. ಎಸಿಪಿ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರರಾವ್ ರಾಜ್ಯ ಪೊಲೀಸ್ ನಿರ್ದೇಶಕರಿಗೆ ಪತ್ರ ಬರೆದು ಶಿಫಾರಸು ಮಾಡಿದ್ದಾರೆ.
1994ರಲ್ಲಿ ಇಲಾಖೆಗೆ ಸೇರ್ಪಡೆ
1994ರಲ್ಲಿ ಪಿಎಸ್ಐ ಆಗಿ ಇಲಾಖೆಗೆ ಸೇರಿದ ವೆಂಕಟೇಶ್ ಪ್ರಸನ್ನ ಆರಂಭದಲ್ಲಿ ಮಂಗಳೂರಿನಲ್ಲಿ ಕರ್ತವ್ಯ ನಿರ್ವಹಣೆ ಮಾಡಿದ್ದರು. 2002ರಲ್ಲಿ ಬಡ್ತಿ ಪಡೆದರು. ಆಗ ರವಿ ಪೂಜಾರಿ, ಕಲಿ ಯೋಗೇಶ್ ಭೂಗತ ಚಟುವಟಿಕೆ ಆರಂಭವಾಗಿದ್ದವು. ಅವರ ವಿರುದ್ಧ ಹಲವು ಕಾರ್ಯಾಚರಣೆಗಳನ್ನು ವೆಂಕಟೇಶ್ ಮಾಡಿದ್ದರು. ಅವರ ಜೊತೆ ಸ್ನೇಹವೂ ಬೆಳೆದಿತ್ತು. 2016ರಲ್ಲಿ ಅವರನ್ನು ಬೆಂಗಳೂರಿನ ಸಿಸಿಬಿಗೆ ವರ್ಗಾವಣೆ ಮಾಡಲಾಗಿತ್ತು.
ರವಿ ಪೂಜಾರಿ ಹೇಳಿದ್ದೇನು?
"ನನ್ನ ವಿರುದ್ಧದ ಪ್ರಕರಣ ಅದರ ತನಿಖೆ ಸ್ಥಿತಿ ಹಾಗೂ ವಿವಾದಿತ ಪ್ರಕರಣಗಳ ಬಗ್ಗೆ ಎಸಿಪಿ ವೆಂಕಟೇಶ್ ಪಸನ್ನ ಅವರೇ ಮಾಹಿತಿ ನೀಡುತ್ತಿದ್ದರು" ಎಂದು ಸಿಸಿಬಿ ಪೊಲೀಸರ ವಿಚಾರಣೆ ವೇಳೆ ರವಿ ಪೂಜಾರಿ ಹೇಳಿಕೆ ನೀಡಿದ್ದಾನೆ.
ಸೆನೆಗಲ್ನಲ್ಲಿ ಸಿಕ್ಕಿ ಬಿದ್ದ
ಭೂಗತ ಪಾತಕಿ ರವಿ ಪೂಜಾರಿ ಸೆನೆಗಲ್ನಲ್ಲಿ ಸಿಕ್ಕಿಬಿದ್ದಿದ್ದ ಬಳಿಕ ಆತನನ್ನು ಗಡಿಪಾರು ಮಾಡಲಾಗಿತ್ತು. ಬೆಂಗಳೂರು ಸಿಸಿಬಿ ಪೊಲೀಸರು ಆತನನ್ನು ವಶಕ್ಕೆ ಪಡೆದು ಬೆಂಗಳೂರಿಗೆ ಕರೆ ತಂದಿದ್ದಾರೆ. ಕರ್ನಾಟಕದಲ್ಲಿ 97 ಅಪರಾಧ ಪ್ರಕರಣಗಳಲ್ಲಿ ರವಿ ಪೂಜಾರಿ ಭಾಗಿಯಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.