ಸಿದ್ಧಾರ್ಥ ಸಿಂಗ್ ಹತ್ಯೆಯ ಹಿಂದಿನ ಐದು ರಹಸ್ಯಗಳು !
ಬೆಂಗಳೂರು, ಫೆಬ್ರವರಿ 09 : ಮಾಜಿ ಮುಖ್ಯಮಂತ್ರಿ ದಿ. ಧರ್ಮಸಿಂಗ್ ಅವರ ಸಂಬಂಧಿ ಸಿದ್ಧಾರ್ಥ ಸಿಂಗ್ ಹತ್ಯೆಯ ಹಿಂದೆ ಐದು ನೂರು ಕೋಟಿ ರೂಪಾಯಿ ಆಸ್ತಿ ಲಪಟಾಯಿಸುವ ಬಹುದೊಡ್ಡ ಸಂಚು ನಡೆದಿತ್ತು ಎಂಬ ಆಘಾತಕಾರಿ ಸಂಗತಿ ಪೊಲೀಸರ ತನಿಖೆ ವೇಳೆ ಹೊರ ಬಿದ್ದಿದೆ. ಈ ಕೊಲೆ ರಹಸ್ಯ ಇನ್ನೂ ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.
ದಿ. ಧರ್ಮಸಿಂಗ್ ಸೋದರ ಸಂಬಂಧಿ ಪುತ್ರನನ್ನು ಅಪಹರಿಸಿ ಹತ್ಯೆ
ಸಿದ್ಧಾರ್ಥ ಸಿಂಗ್ ಹತ್ಯೆಯ ಬಗ್ಗೆ ಆತನ ತಂದೆ ದೇವೇಂದ್ರ ಸಿಂಗ್ ಅವರಿಗೂ ಗೊತ್ತಿತ್ತಾ ? ಸಿದ್ಧಾರ್ಥ ಸಿಂಗ್ ಹತ್ಯೆ ಬಳಿಕ ಐದು ನೂರು ಕೋಟಿ ಆಸ್ತಿ ಲಪಟಾಯಿಸಿ ಪ್ರಿಯಕರನ ಜತೆ ಪರಾರಿಯಾಗಲು ಇಂದು ಸಿಂಗ್ ಪ್ಲಾನ್ ರೂಪಿಸಿದ್ದರಾ ? ಇಂದು ಸಿಂಗ್ ಹಾಗೂ ಆತ್ಮಹತ್ಯೆಗೆ ಶರಣಾದ ಆರೋಪಿ ಶ್ಯಾಮ್ ರೆಡ್ಡಿಗೂ ಸಂಬಂಧ ಇದೆಯಾ ? ಸಿದ್ಧಾರ್ಥ ಸಿಂಗ್ ಹತ್ಯೆಯ ಬಳಿಕ ಆತನ ಮೊಬೈಲ್ ನಿಂದಲೇ ಪೋಷಕರಿಗೆ " ತಾನು ಅಮೆರಿಕಾಗೆ ಹೋಗುತ್ತಿದ್ದೇನೆ" ಎಂಬ ಸಂದೇಶ ರವಾನಿಸಿದರಾ ? ಇಂತಹ ನೂರಾರು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವಲ್ಲಿ ಅಮೃತಹಳ್ಳಿ ಪೊಲೀಸರು ಮುಂದಾಗಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ತನಿಖೆ ನಡೆಸುತ್ತಿದ್ದಂತೆ ನಿಗೂಢ ಹತ್ಯೆಯ ರಹಸ್ಯಗಳು ಒಂದೊಂದಾಗಿ ಬಯಲಾಗುತ್ತಿವೆ.
ದಿ. ಧರ್ಮಸಿಂಗ್ ಸೋದರ ಸಂಬಂಧಿ ಸುಪಾರಿ ಹತ್ಯೆಯ ಸೀಕ್ರೇಟ್ !
ಹತ್ಯೆ ನಂತರ ಮೊಬೈಲ್ ನಲ್ಲಿ ಸಂದೇಶ ! ಸಿದ್ಧಾರ್ಥ ಸಿಂಗ್ ಮನೆಯಿಂದ ಕಣ್ಮರೆಯಾಗಿರುವ ಬಗ್ಗೆ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಅಚ್ಚರಿ ಏನೆಂದರೆ, ಮಿಸ್ಸಿಂಗ್ ದೂರಿನಲ್ಲಿ ತಾನು ಸ್ನೇಹಿತರನ್ನು ಕಾಣಲು ಅಮೆರಿಕಾಗೆ ಹೋಗುತ್ತಿರುವುದಾಗಿ ಸಿದ್ಧಾರ್ಥ ತನ್ನ ಮೊಬೈಲ್ ನಿಂದ ಸಂಬಂಧಿಕರಿಗೆ ರವಾನಿಸಿದ್ದ ಸಂದೇಶ ದೂರಿನಲ್ಲಿ ಉಲ್ಲೇಖವಾಗಿತ್ತು. ಆದರೆ ಸಿದ್ದಾರ್ಥ ಸಿಂಗ್ ಮೊಬೈಲ್ ಈವರೆಗೂ ಪೊಲೀಸರಿಗೆ ಸಿಕ್ಕಿಲ್ಲ. ಹೀಗಾಗಿ ಶ್ಯಾಮ್ ಮತ್ತು ಸಹಚರರು ಸಿದ್ದಾರ್ಥ ನನ್ನು ಕಾರಿನಲ್ಲಿ ಅಪಹರಿಸಿ ಮಧ್ಯಪಾನ ಮಾಡಿಸಿದ್ದಾರೆ. ಆನಂತರ ಸಿದ್ಧಾರ್ಥ ಸಿಂಗ್ ಹತ್ಯೆ ಸಂಗತಿ ಬಯಲಿಗೆ ಬಾರದಿರಲಿ ಎಂದು ಆತನ ಮೊಬೈಲ್ ನಿಂದ ಅಮೆರಿಕಾಗೆ ಹೋಗುತ್ತಿರುವುದಾಗಿ ಹಂತಕರೇ ಮೊಬೈಲ್ ನಲ್ಲಿ ಸಂದೇಶ ರವಾನಿಸಿರುವುದು ಪೊಲೀಸರ ಪ್ರಾಥಮಿಕ ತನಿಖೆ ವೇಳೆ ಬೆಳಕಿಗೆ ಬಂದಿದೆ. ಯಾಕೆಂದರೆ ಸಿದ್ಧಾರ್ಥ ಸಿಂಗ್ ಮೊಬೈಲ್ ಸಿಕ್ಕಿದ್ದರೆ ಪ್ರಕರಣದಲ್ಲಿ ಇನ್ನಷ್ಟು ಸಾಕ್ಷಗಳು ಸಿಕ್ಕಿ ಬೀಳುತ್ತಿದ್ದವು. ಆದರೆ ಕೊಲೆ ಮಾಡಿದ ಬಳಿಕ ಸಿದ್ದಾರ್ಥ ಮೊಬೈಲ್ ಬಿಸಾಡಿದ್ದಾರೆ. ಇನ್ನು ಮೊಬೈಲ್ ಪಡೆದಿದ್ದ ಶಾಮ್ ರೆಡ್ಡಿ ಆತ್ಮಹತ್ಯೆ ಮಾಡಿಕೊಂಡಿರುವುದರಿಂದ ಸದ್ಯಕ್ಕೆ ಅದು ಸಿಗುವ ಲಕ್ಷಣ ಗೋಚರಿಸುತ್ತಿಲ್ಲ. ಹೀಗಾಗಿ ಹತ್ಯೆ ಬಳಿಕ ಆರೋಪಿಗಳೇ ಮೊಬೈಲ್ ಸಂದೇಶ ರವಾನಿಸಿದ್ದಾರೆ ಎಂಬ ತೀರ್ಮಾನಕ್ಕೆ ಪೊಲೀಸರು ಬಂದಿದ್ದಾರೆ.
ಐದು ನೂರು ಕೋಟಿ ರೂ. ಆಸ್ತಿ ರಹಸ್ಯ:
ಸಿದ್ಧಾರ್ಥ ಸಿಂಗ್ ಅವರ ತಂದೆ ದೇವೇಂದ್ರ ಸಿಂಗ್ ಇಂದು ಚವ್ಹಾಣ್ ಸಿಂಗ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದ. ಇಬ್ಬರ ನಡುವೆ ವಯಸ್ಸಿನ ಅಂತರವಿತ್ತು.ಆದರೂ ಆಸ್ತಿ ನೋಡಿ ದೇವೇಂದ್ರ ಸಿಂಗ್ ನನ್ನು ಮದುವೆಯಾಗಿದ್ದರು. ದೇವೇಂದ್ರ ಸಿಂಗ್ ಸುಮಾರು ಐದು ನೂರು ಕೋಟಿ ಮೌಲ್ಯದ ಆಸ್ತಿ ಸಂಪಾದಿಸಿದ್ದ. ಎಲ್ಲಾ ಆಸ್ತಿಯನ್ನು ತನ್ನ ಪುತ್ರನ ಹೆಸರಿನಲ್ಲಿ ಮಾಡಿದ್ದ. ಚಂಢೀಗಡ, ಚೆನ್ನೈ ಹಾಗೂ ಬೆಂಗಳೂರಿನಲ್ಲಿ ಹೊಂದಿದ್ದ ಆಸ್ತಿಯನ್ನು ಲಪಟಾಯಿಸುವ ಉದ್ದೇಶದಿಂದ ಇಂದು ಚವ್ಹಾಣ್ ಆರೋಪಿಗಳ ಜತೆ ಶಾಮೀಲಾಗಿ ಹತ್ಯೆಗೆ ಸಂಚು ರೂಪಿಸಿದ್ದಾರೆ ಎಂಬ ಸಂಗತಿ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಹೊರ ಬಿದ್ದಿದೆ. ಇನ್ನು ಇಂದು ಸಿಂಗ್ ಆಸ್ತಿ ಕಬಳಿಸಿದ ನಂತರ ಬೇರೆಯದ್ದೇ ಪ್ಲಾನ್ ರೂಪಿಸಿದ್ದಳು. ಆದರೆ ಈಕೆಯ ಜತೆ ನಿಕಟ ಸಂಪರ್ಕ ಹೊಂದಿದ್ದ ಶ್ಯಾಮ್ ರೆಡ್ಡಿ ತಿರುಪತಿ ಲಾಡ್ಜ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಕಾರಣ ಇದರ ನೈಜ ಕಾರಣ ಇನ್ನೂ ಹೊರಗೆ ಬಂದಿಲ್ಲ. ಇಂದು ಚವ್ಹಾಣ್ ಸರಿಯಾಗಿ ಬಾಯಿ ಬಿಡುತ್ತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ದೇವೇಂದ್ರ ಸಿಂಗ್ ಗೊಂದಲದ ಹೇಳಿಕೆ :
ಪತ್ನಿ ಇಂದು ಚವ್ಹಾಣ್ ಜತೆ ಅನೋನ್ಯವಾಗಿದ್ದ ದೇಂವೇಂದ್ರ ಸಿಂಗ್ ಪೊಲೀಸರ ವಿಚಾರಣೆ ವೇಳೆ ಗೊಂದಲದ ಹೇಳಿಕೆ ನೀಡುತ್ತಿದ್ದಾರೆ. ಹೀಗಾಗಿ ದೇವೇಂದ್ರ ಸಿಂಗ್ ಬಗ್ಗೆಯೂ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಸಿದ್ದಾರ್ಥ ಹತ್ಯೆ ಬಗ್ಗೆ ಮಲತಾಯಿ ಸಂಚು ರೂಪಿಸಿ ಕಾರ್ಯಗತ ಗೊಳಿಸುತ್ತಿರುವ ವಿಚಾರ ಮೊದಲೇ ದೇವೇಂದ್ರ ಸಿಂಗ್ ಗೆ ಗೊತ್ತಿತ್ತಾ ? ಮಗ ಕೊಲೆಯಾಗಲಿದ್ದಾನೆ ಎಂಬ ಸುಳಿವು ಸಿಂಗ್ ಗಮನಕ್ಕೆ ಬಂದಿತ್ತಾ ? ಬಂದರೂ ಮೌನವಾಗಿದ್ದರೇ ಎಂಬ ಅನುಮಾನಗಳು ಹುಟ್ಟು ಹಾಕಿವೆ. ಯಾಕೆಂದರೆ ದೇವೇಂದ್ರ ಸಿಂಗ್ ಗೊಂದಲದ ಹೇಳಿಕೆ ನೀಡುತ್ತಿದ್ದು, ಪೊಲೀಸರು ಆತನನ್ನೂ ಕುಡ ವಿಚಾರಣೆಗೆ ಒಳಪಡಿಸಿದ್ದಾರೆ. ಇನ್ನು ಸಿದ್ಧಾರ್ಥ ಹತ್ಯೆಯ ಆರೋಪಿ ಜತೆ ದೇವೇಂದ್ರ ಸಿಂಗ್ ಸಂಪರ್ಕ ಹೊಂದಿರುವ ಬಗ್ಗೆ ಪೊಲೀಸರು ಕೆಲವರು ಮಹತ್ದದ ಸಾಕ್ಷಾಧಾರಗಳು ಸಂಗ್ರಹವಾಗಿರುವುದು ಈ ಅನುಮಾನಕ್ಕೆ ಕಾರಣವಾಗಿದೆ.
Recommended Video
ಪ್ರಮುಖ ಆರೋಪಿಯ ಸುಳಿವು ಇಲ್ಲ:
ಇನ್ನು ಸಿದ್ದಾರ್ಥ ಸಿಂಗ್ ನನ್ನು ಅಪಹರಿಸಿ ಹತ್ಯೆ ಮಾಡಿದ ಆರೋಪಿಗಳಲ್ಲಿ ಶ್ಯಾಮ್ ರೆಡ್ಡಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ವಿನೋದ್ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಈ ಪ್ರಕರಣದ ಮತ್ತೊಬ್ಬ ಆರೋಪಿ ಕಾರ್ತೀಕ್ ತಲೆ ಮರೆಸಿಕೊಂಡಿದ್ದಾನೆ. ಹತ್ಯೆ ಬಳಿಕ ತಲೆ ಮರೆಸಿಕೊಂಡಿರುವ ಕಾರ್ತೀಕ್ ಸುಳಿವು ಸಿಕ್ಕಿಲ್ಲ. ಈತನಿಗಾಗಿ ಅಮೃತಹಳ್ಳಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಈತ ಸಿಕ್ಕರೆ ಸಿದ್ಧಾರ್ಥ ಸಿಂಗ್ ಹತ್ಯೆಯ ನೈಜ ರಹಸ್ಯ, ಸುಪಾರಿ ಕೊಟ್ಟವರ ಅಸಲಿತನ ಬಯಲಿಗೆ ಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಂದು ಮತ್ತು ಶ್ಯಾಮ್ ಗೂ ಏನು ಸಂಬಂಧ ?
ಇನ್ನು ಹತ್ಯೆ ಸೂತ್ರಧಾರಿ ಇಂದು ಸಿಂಗ್ ಚವ್ಹಾಣ್. ತಿರುಪತಿ ಲಾಡ್ಜ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಶ್ಯಾಮ್ ರೆಡ್ಡಿ ಜತೆ ನಿಕಟ ಸಂಪರ್ಕದಲ್ಲಿದ್ದಳು. ಶ್ಯಾಮ್ ನ ಮೊಬೈಲ್ ಪೊಲೀಸರು ಜಪ್ತಿ ಮಾಡಿದ್ದು, ಅದರಲ್ಲಿನ ವಾಟ್ಸಪ್ ಸಂದೇಶ ಈ ಪ್ರಕರಣಕ್ಕೆ ಹೊಸದೊಂದು ಆಯಾಮ ನೀಡಿದೆ. ಬಂಧಿತ ಇಂದು ಚವ್ಹಾಣ್ ಮತ್ತು ಶ್ಯಾಮ್ ರೆಡ್ಡಿ ಗುಪ್ತ ಸಂಬಂಧ ಹೊಂದಿದ್ದರು. ಇಬ್ಬರು ಸೇರಿ ಸಿದ್ದಾರ್ಥ ಹತ್ಯೆ ಮಾಡಿ ಐದು ನೂರು ಕೋಟಿ ರೂಪಾಯಿ ಆಸ್ತಿ ಲಪಟಾಯಿಸುವ ಪ್ಲಾನ್ ರೂಪಿಸಿದ್ದರು. ಸಿದ್ದಾರ್ಥ ಹತ್ಯೆಯ ಬಳಿಕ ದೇವೇಂದ್ರ ಸಿಂಗ್ ನನ್ನು ತೊರೆದು ಶ್ಯಾಮ್ ಜತೆ ಎಸ್ಕೇಪ್ ಆಗಲು ಇಂದು ಚವ್ಹಾಣ್ ಯೋಜನೆ ರೂಪಿಸಿದ್ದರು ಎಂಬುದನ್ನು ಪುಷ್ಟೀಕರಿಸುವ ವಾಟ್ಸಪ್ ಸಂದೇಶಗಳು ಮೃತ ಶ್ಯಾಮ್ ಮೊಬೈಲ್ ನಲ್ಲಿ ಸಿಕ್ಕಿವೆ ಎನ್ನಲಾಗಿದೆ. ಅದರಂತೆ ಶ್ಯಾಮ್ ರೆಡ್ಡಿ ಎಲ್ಲರಿಗೂ ಕೋಟಿ ಕೋಟಿ ಕೊಟ್ಟು ಲೈಫ್ ಸೆಟ್ಲ್ ಮಾಡಿಸುವ ಆಸೆ ಹುಟ್ಟಿಸಿ ಸಿದ್ದಾರ್ಥ ನನ್ನು ಅಪಹರಿಸಿ ಜ. 18 ರಂದೇ ಹತ್ಯೆ ಮಾಡಿ ನೆಲ್ಲೂರಿನ ಕಾಡಿನಲ್ಲಿ ಹೂತು ಹಾಕಿದ್ದರು. ಹತ್ಯೆಯ ನಂತರ ಪ್ರಕರಣದ ತನಿಖೆ ನೋಡಿ ಭಯ ಬಿದ್ದಿದ್ದ ಶ್ಯಾಮ್ ರೆಡ್ಡಿ ತಿರುಪತಿಯ ಲಾಡ್ಜ್ ನಲ್ಲಿ ಆತ್ಮಹ್ಯೆಗೆ ಶರಣಾಗಿದ್ದ. ಶ್ಯಾಮ್ ಆತ್ಮಹತ್ಯೆ ಮಾಡಿಕೊಳ್ಳದೇ , ಸಿದ್ದಾರ್ಥ ಪ್ರಕರಣ ಪತ್ತೆಯಾಗದೇ ಇದ್ದಲ್ಲಿ ಅಂದು ಕೊಂಡಂತೆ ಎಸ್ಕೇಪ್ ಆಗುತ್ತಿದ್ದರೇ ಎಂಬ ಸಂಶಯ ಹುಟ್ಟುಕೊಂಡಿದೆ. ನಿಗೂಢವಾಗಿರುವ ಸಿದ್ದಾರ್ಥ ಕೊಲೆ ರಹಸ್ಯ ಪತ್ತೆ ಮಾಡುವಲ್ಲಿ ಅಮೃತಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕೊಲೆಯ ಮತ್ತಷ್ಟು ರಹಸ್ಯಗಳು ಬಯಲಿಗೆ ಬರಬೇಕಿದೆ ಅಷ್ಟೇ.