ರೈಲು ದರೋಡೆ ಪ್ರಕರಣ, ಚನ್ನಪಟ್ಟಣ ನಿಲ್ದಾಣ ಬಳಿ ಬಿಗಿ ಭದ್ರತೆ
ಬೆಂಗಳೂರು, ಡಿಸೆಂಬರ್ 25: ಬೆಂಗಳೂರು-ಮೈಸೂರು ರೈಲಿನಲ್ಲಿ ನಡೆದ ದರೋಡೆಗೆ ಸಂಬಂಧಿಸಿದಂತೆ ಎಚ್ಚೆತ್ತುಕೊಂಡಿರುವ ಪೊಲೀಸರು ಬಿಗಿ ಭದ್ರತೆ ಕಲ್ಪಿಸಿದ್ದಾರೆ.
ದರೋಡೆ ಮತ್ತು ಕಳ್ಳತನ ಪ್ರಕರಣಗಳ ಮೇಲೆ ನಿಗಾ ಇಡಲು ಇರುವ ಎಲ್ಲಾ ಸಿಬ್ಬಂದಿಗಳನ್ನು ಹೆಚ್ಚುವರಿ ಕರ್ತವ್ಯಕ್ಕೆ ನಿಯೋಜಿಸಿದೆ. ಕೃತ್ಯ ನಡೆದ ಸ್ಥಳ ಮತ್ತು ಎರಡು ಠಾಣೆಗಳ ನಡುವೆ ಸಿಬ್ಬಂದಿ ಪ್ರಯಾಣ ಮಾಡುತ್ತಿದ್ದಾರೆ.
ಬೆಂಗಳೂರು-ಮೈಸೂರು ರೈಲಿನಲ್ಲಿ ದರೋಡೆ, ರೈಲು ಹತ್ತಲು ಆತಂಕ
ರೈಲಿನಲ್ಲಿ ದರೋಡೆ ನಡೆಸಿರುವ ಗ್ಯಾಂಗ್ ಹೊರಗಿನಿಂದ ಬಂದಿಲ್ಲ, ಸ್ಥಳೀಯರೇ ಈ ಕೃತ್ಯ ಎಸಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಸದ್ಯ ನಮಗೆ ಸಿಬ್ಬಂದಿ ಕೊರತೆ ಇದೆ, ಹೆಚ್ಚುವರಿ ಸಿಬ್ಬಂದಿ ನೇಮಕಕ್ಕೆ ಈಗಾಗಲೇ ರಾಜ್ಯ ಸರ್ಕಾರ ಅನುಮತಿ ನೀಡಿದೆ. ಇರುವ ಸಿಬ್ಬಂದಿಯನ್ನೇ ಹೆಚ್ಚುವರಿ ಕರ್ತವ್ಯಕ್ಕೆ ನಿಯೋಜಿಸಲಾಗುತ್ತಿದೆ ಎಂದು ರೈಲ್ವೆ ಎಸ್ಪಿ ಭೀಮಾಶಂಕರ್ ತಿಳಿಸಿದ್ದಾರೆ.
ಮೈಸೂರಿನ ನಾಗನಹಳ್ಳಿಯಿಂದ ಬೆಂಗಳೂರಿನ ಕೆಂಗೇರಿವರೆಗೆ ಒಟ್ಟು 20 ಮಂದಿ ರೈಲ್ವೆ ಪೊಲೀಸರ ನಿಯೋಜನೆ ಇದ್ದರೂ ಅದರಲ್ಲಿ ಒಬ್ಬ ಸಬ್ಇನ್ಸ್ಪೆಕ್ಟರ್ , ಇಬ್ಬರು ಸಹಾಯಕ ಸಬ್ಇನ್ ಸ್ಪೆಕ್ಟರ್, ನಾಲ್ವರು ಹೆಡ್ ಕಾನ್ಸ್ಟೇಬಲ್, ಆರು ಜನ ಪೇದೆಗಳು, ಉಳಿದಂತೆ ಹೊರಗುತ್ತಿಗೆ ಸಿಬ್ಬಂದಿ ಇರುತ್ತಾರೆ.