ಬೆಂಗಳೂರಲ್ಲಿ 24*7 ಹೋಟೆಲ್ ತರೆಯಲು ಅನುಮತಿ, ಎಲ್ಲಿ ತೆರೆದಿರುತ್ತೆ?
ಬೆಂಗಳೂರು, ಜೂನ್ 21: ಸಿಲಿಕಾನ್ ಸಿಟಿ ಬೆಂಗಳೂರಿನ ಕೆಲವು ಬಸ್, ರೈಲು ನಿಲ್ದಾಣಗಳು ಸೇರಿ ಆಯ್ದ ಸ್ಥಳಗಳಲ್ಲಿ ಮಾತ್ರ 24 ಗಂಟೆಗಳ ಕಾಲ ಹೋಟೆಲ್ ತೆರೆಯಲು ನಗರ ಪೊಲೀಸರು ಹಸಿರು ನಿಶಾನೆ ನೀಡಿದ್ದು ಈ ಸಂಬಂಧ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ.
ಬೆಂಗಳೂರು ನಗರದ ಪ್ರಮುಖ ಬಸ್ ಹಾಗೂ ರೈಲು ನಿಲ್ದಾಣ ಸೇರಿದಂತೆ ಕೆಲವು ಸ್ಥಳಗಳಲ್ಲಿ ಮಾತ್ರ 24 ಗಂಟೆಗಳ ಕಾಲ ಹೊಟೇಲ್ ತೆರೆಯಲು ಅನುಮತಿ ನೀಡಲಾಗಿದೆ. ಕಾನೂನು, ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆಯಿರುವುದರಿಂದ ನಗರದ ಎಲ್ಲಾ ಕಡೆಗಳಲ್ಲಿ ಹೋಟೆಲ್, ರೆಸ್ಟೋರೆಂಟ್ ತೆರೆಯಲು ಅನುಮತಿ ನೀಡಲು ಕಷ್ಟವಾಗಲಿದೆ. ಜನಸಂದಣಿ ಇಲ್ಲದ ಪ್ರದೇಶಗಳಲ್ಲಿ ಹೋಟೆಲ್ ವಹಿವಾಟಿಗೆ ಅವಕಾಶ ಕೊಟ್ಟರೆ ಕಾನೂನು, ಸುವ್ಯವಸ್ಥೆಗೆ ತೊಂದರೆಯಾಗಲಿದೆ.
ನಗರ ಎಲ್ಲಾ ಭಾಗಗಳಲ್ಲೂ ಹೋಟೆಲ್ಗಳನ್ನು ತೆರೆಯಲು ಅನುಮತಿಯನ್ನು ನೀಡಿದ್ದೇ ಆದರೆ ನಿಜಕ್ಕೂ ಕಾನೂನು, ಸುವ್ಯವಸ್ಥೆಗೆ ಧಕ್ಕೆಯಾಗಿಲಿದೆ. ಇದರೊಂದಿದೆ ಸೂಕ್ತ ಸಿಬ್ಬಂದಿ ಇಲ್ಲದಿರುವುದು ಅನುಮತಿ ನಿರಾಕರಿಸಲು ಮತ್ತೊಂದು ಕಾರಣವಾಗಿದೆ. ಹೀಗಾಗಿ ಕೆಲವು ಸ್ಥಳಗಳಲ್ಲಿ ಮಾತ್ರ ಹೋಟೆಲ್ ನಡೆಸಲು ಅನುಮತಿ ನೀಡಬಹುದಾಗಿದೆ ಎಂದು ಸರ್ಕಾರಕ್ಕೆ ನಗರ ಪೊಲೀಸರು ವರದಿ ಸಲ್ಲಿಸಿದ್ದಾರೆ.
ಹೋಟೆಲ್ ಮಾಲೀಕರ ಸಂಘ ವಿರೋಧ
ಈ ಬಗ್ಗೆ ಪ್ರತಿಕ್ರಿಯಿಸಿರುವ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ. ಸಿ. ರಾವ್, "ಕೆಲವು ಸ್ಥಳಗಳಲ್ಲಿ ಮಾತ್ರ ಹೋಟೆಲ್ ತೆರೆಯಲು ಅನುಮತಿ ನೀಡಿರುವ ಬಗ್ಗೆ ಮಾಧ್ಯಮಗಳಿಂದ ಮಾಹಿತಿ ಪಡೆದಿದ್ದೇನೆ. ಒಂದು ವೇಳೆ ನಿಜವೇ ಆದಲ್ಲಿ ಹೋಟೆಲ್ ಮಾಲೀಕರ ಸಂಘ ವಿರೋಧ ವ್ಯಕ್ತಪಡಿಸಲಿದೆ" ಎಂದು ಹೇಳಿದ್ದಾರೆ.
ಮುಖ್ಯಮಂತ್ರಗಳ ಭೇಟಿಗೆ ನಿರ್ಧಾರ
"ಹೋಟೆಲ್ ಮಾಲೀಕರ ಸಂಘವು ಪ್ರಮುಖ ಬೇಡಿಕೆಯು ನಗರದ ಎಲ್ಲಾ ಕಡೆಗಳಲ್ಲಿ ದಿನದ 24 ಗಂಟೆಗಳ ಕಾಲ ಹೋಟೆಲ್ ತೆರೆಯಲು ಅನುಮತಿ ನೀಡುವಂತೆ ನಗರ ಪೊಲೀಸ್ ಇಲಾಖೆಗೆ ಮನವಿ ಮಾಡಿಕೊಂಡಿತ್ತು. ಆದರೆ ಬಸ್, ರೈಲು ನಿಲ್ದಾಣಗಳ ಬಳಿ ಹೋಟೆಲ್ ನಡೆಸಲು ಸರ್ಕಾರಕ್ಕೆ ಪೊಲೀಸರು ವರದಿ ಸಲ್ಲಿಸಿರುವುದು ಸರಿಯಲ್ಲ. ನೆರೆಯ ತಮಿಳುನಾಡು, ಆಂಧ್ರ ಸೇರಿದಂತೆ ಬೇರೆ ಬೇರೆ ರಾಜ್ಯಗಳಲ್ಲಿ 24 ಗಂಟೆಗಳ ಕಾಲ ತೆರೆಯಲು ಅಲ್ಲಿನ ಸರ್ಕಾರಗಳು ಅನುಮತಿ ನೀಡಿವೆ. ಅದೇ ಮಾದರಿಯಲ್ಲಿ ಬೆಂಗಳೂರಿನಲ್ಲಿಯೂ ಅನುಮತಿ ನೀಡಬೇಕು. ಅನುಮತಿ ನೀಡುವ ಕುರಿತಂತೆ ಮುಂದಿನ ವಾರ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಈ ಬಗ್ಗೆ ಬೇಡಿಕೆ ಇಡಲಾಗುವುದು" ಎಂದು ಅಧ್ಯಕ್ಷ ಪಿ.ಸಿ.ರಾವ್ ತಿಳಿಸಿದ್ದಾರೆ.
ಅಗತ್ಯವಿರುವ ಕಡೆ ಅನುಮತಿ ನೀಡಬೇಕು
ನಗರಕ್ಕೆ ಬೇರೆ ಬೆೇರೆ ರಾಜ್ಯಗಳಿಂದ ಜನರು ಬರುತ್ತಾರೆ. ರಾತ್ರಿ ಬಸ್ಗಳಲ್ಲಿ ರೈಲುಗಳಲ್ಲಿ ಸಂಚಾರವನ್ನು ಮಾಡಿ ಬರುತ್ತೇವೆ. ರಾತ್ರಿ ಬಸ್ ನಿಲ್ದಾಣದಲ್ಲಿ ಟೀ ಕೇಂದ್ರ ಬಿಟ್ಟರೆ ತಿನ್ನಲು ಏನೂ ಸಿಗುವುದಿಲ್ಲ. ಬಸ್ ನಿಲ್ದಾಣದಲ್ಲಿ ಮತ್ತು ರೈಲು ನಿಲ್ದಾಣದಲ್ಲಿ ರಾತ್ರಿಯಿಡೀ ಹೋಟೆಲ್ ತೆರೆಯಲು ಅನುಮತಿ ನೀಡಿರುವುದು ಸ್ವಾಗತಾರ್ಹ ಮತ್ತು ನಗರದಲ್ಲಿ ಪ್ರಮುಖ ರಸ್ತೆಯ ಹೋಟೆಲ್ಗಳಿಗೂ ಅನುಮತಿ ನೀಡಬಹುದು ಎಂದು ಆಟೋ ಚಾಲಕ ಶಿವರಾಜ್ ಎಂಬುವವರು ಅಭಿಪ್ರಾಯಪಟ್ಟಿದ್ದಾರೆ.
ಕಾನೂನು ಸುವ್ಯವಸ್ಥೆ ಪಾಲನೆ ಕಷ್ಟ
ನಗರದ ಎಲ್ಲಾ ರಸ್ತೆಗಳಲ್ಲೂ ಜನಜಂಗುಳಿ ಇರುವುದಿಲ್ಲ. ಜನ ಮುಖ್ಯವಾಗಿ ಬಸ್ ನಿಲ್ದಾಣ , ರೈಲು ನಿಲ್ದಾಣಕ್ಕೆ ತಡರಾತ್ರಿ ಸೇರಿದಂತೆ ದಿನದ 24 ಗಂಟೆಯೂ ಸಂಚಾರವನ್ನು ಮಾಡುತ್ತಿರುತ್ತಾರೆ. ಇದರಿಂದಾಗಿ ಬಸ್ ಮತ್ತು ರೈಲು ನಿಲ್ದಾಣದಲ್ಲಿ ಹೋಟೆಲ್ ತೆರೆದರೆ ಸಾಕು. ಎಲ್ಲೆಡೆ ಹೋಟೆಲ್ ತೆರೆದರೆ ರಾತ್ರಿಯ ವೇಳೆಯಲ್ಲಿ ಕುಡಿದು ಬರುವವರು ಮತ್ತು ಗಲಾಟೆ ಮಾಡುವವರ ಸಂಖ್ಯೆ ಹೆಚ್ಚಾಗುತ್ತದೆ. ಇವರನ್ನು ಎಲ್ಲೆಡೆ ನಿಯಂತ್ರಿಸುವುದು ಕಷ್ಟವಾಗಲಿದೆ ಇದರಿಂದ ಕಾನೂನು ಸುವ್ಯವಸ್ಥೆ ಕಾಪಾಡುವುದು ಕಷ್ಟವಾಗಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Recommended Video