'ಗಾಂಧಿ ಕನಸಿನ ಭಾರತ ಬೇಕು' ಎಂದವರ ಬಂಧಿಸಿದ ಪೊಲೀಸರು!
ಬೆಂಗಳೂರು, ಡಿಸೆಂಬರ್ 23: 'ಗಾಂಧಿ ಕನಸಿನ ಭಾರತ ಬೇಕು' ಎಂದು ಕೇಳುವುದು, ಗಾಂಧಿ ಕನಸು ಕಂಡಿದ್ದ, ಶಾಂತಿಯುತ, ಸೌಹಾರ್ದ, ಜಾತ್ಯಾತೀತ ದೇಶ ನಮ್ಮದಾಗಬೇಕು ಎಂದುಕೊಳ್ಳುವುದು ತಪ್ಪೇ? ಬೆಂಗಳೂರು ಪೊಲೀಸರ ಪ್ರಕಾರ ತಪ್ಪು!
'ಗಾಂಧಿ ಕನಸಿನ ಭಾರತ ಬೇಕು, ಸಾವರ್ಕರ್ ಕನಸಿನ ಭಾರತ ಬೇಡ' ಎಂದು ಘೋಷಣೆ ಕೂಗಿದ್ದು, ಬಂಧಿಸಲು ಕಾರಣಗಳಲ್ಲಿ ಒಂದು ಎಂಬಂತೆ ಪೊಲೀಸರು ದಾಖಲಿಸಿರುವ ಎಫ್ಐಆರ್ ಪ್ರತಿ ವೈರಲ್ ಆಗಿದೆ.
ಧರ್ಮ ವಿರೋಧಿ ಕಾಯ್ದೆ ಜಾರಿಗೊಳಿಸಲು ಬಿಡುವುದಿಲ್ಲ ಎಂದ ಮೌಲಾನಾ
ನಿಷೇಧಾಜ್ಞೆ ಹೇರಿದ್ದ ಗುರುವಾರದಂದು ಸಿಎಎ ವಿರೋಧಿಸಿ ಟೌನ್ಹಾಲ್ ಬಳಿ ಕೆಲವರು ಪ್ರತಿಭಟನೆ ನಡೆಸಿದರು. ಅವರನ್ನು ಪೊಲೀಸರು ಬಂಧಿಸಿ ಅವರ ಮೇಲೆ ಪ್ರಕರಣ ದಾಖಲಿಸಿದ್ದರು. ಹೀಗೆ ದಾಖಲಾದ ಪ್ರಕರಣದ ಬಗ್ಗೆ ಪೊಲೀಸರು ದಾಖಲಿಸಿರುವ ಎಫ್ಐಆರ್ ಇದೀಗ ವೈರಲ್ ಆಗಿದೆ. 'ಗಾಂಧಿ ಕನಸಿನ ಭಾರತ ಬೇಕು' ಎಂದು ಕೇಳಿದ್ದು ತಪ್ಪೇ? ಎನ್ನುವಂತೆ ಮಾಡಿದೆ.
'ಟೌನ್ಹಾಲ್ ಬಳಿಗೆ 150-200 ಜನ ಅಕ್ರಮ ಕೂಟ ಮಾಡಿಕೊಂಡು ಮಾಡಿಕೊಂಡು ಬಂದ ಗುಂಪು, ಸರ್ಕಾರದ ಆದೇಶವನ್ನು ಉಲ್ಲಂಘಿಸಿ (ನಿಷೇಧಾಜ್ಞೆ) 'ನಮಗೆ ಗಾಂಧಿ ಕನಸಿನ ಭಾರತ ಬೇಕು, ಸಾವರ್ಕರ್ ಕನಸಿನ ಭಾರತ ಬೇಡ' ಎಂದು ಘೋಷಣೆಗಳನ್ನು ಕೂಗಿದರು' ಎಂದು ಘಟನೆ ಬಗ್ಗೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಪ್ರತಿಭಟನಾಕಾರರನ್ನು ಬಂಧಿಸಿರುವುದು ನಿಷೇಧಾಜ್ಞೆ ಉಲ್ಲಂಘಿಸಿದ್ದಕ್ಕೇ ಎಂಬುದು ಸ್ಪಷ್ಟ, ಆದರೆ ಎಫ್ಐಆರ್ ದಾಖಲಿಸಿರುವ ಪೊಲೀಸರು, ಘೋಷಣೆ ಕೂಗಿದ್ದೂ ಸಹ ಒಂದು ಅಪರಾಧ ಎಂಬ ಧ್ವನಿ ಮೂಡುವಂತೆ ಎಫ್ಐಆರ್ ದಾಖಲಿಸಿದ್ದಾರೆ.