ಗೌರಿ ಲಂಕೇಶ್ ಹತ್ಯೆ ಭೇಧಿಸಿದ ಎಸ್ಐಟಿ ಗೆ 25 ಲಕ್ಷ ಬಹುಮಾನ
ಬೆಂಗಳೂರು, ಮೇ 28: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಭೇಧಿಸಿದ ಬೆಂಗಳೂರು ಪೊಲೀಸ್ ವಿಶೇಷ ತಂಡಕ್ಕೆ ಇಲಾಖೆ ವತಿಯಿಂದ 25 ಲಕ್ಷ ರೂಪಾಯಿ ಪ್ರೋತ್ಸಾಹಕರ ಬಹುಮಾನ ನೀಡಲಾಗಿದೆ.
ಗೌರಿ ಲಂಕೇಶ್ ಅವರು ರಾಜರಾಜೇಶ್ವರಿ ನಗರದ ತಮ್ಮ ನಿವಾಸದ ಬಳಿ ಸೆಪ್ಟೆಂಬರ್ 5 ರಂದು 2017 ರಂದು ಹಂತಕರ ಗುಂಡಿಗೆ ಬಲಿಯಾಗಿದ್ದರು. ಈ ಪ್ರಕರಣ ದೇಶ-ವಿದೇಶದ ಗಮನ ಸೆಳೆದಿತ್ತು. ಈ ಪ್ರಕರಣದ ತನಿಖೆಗೆ ವಿಶೇಷ ತಂಡವನ್ನು ರಚಿಸಲಾಗಿತ್ತು.
ಗೌರಿ ಹತ್ಯೆ ಆರೋಪಿಗಳು ಯಾರ್ಯಾರು? ಕೊಲೆಯಲ್ಲಿ ಅವರ ಪಾತ್ರ ಏನು?
ವಿಶೇಷ ತಂಡವು ಎರಡು ವರ್ಷಕ್ಕೂ ಹೆಚ್ಚು ಕಾಲ ತನಿಖೆ ಮಾಡಿ ಹಲವು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಅಲ್ಲದೆ ಹಲವು ಮಹತ್ವದ ಸುಳಿವುಗಳನ್ನು ಪತ್ತೆ ಮಾಡಿ, ಪ್ರಕರಣಕ್ಕೆ ತಾರ್ಕಿಕ ಅಂತ್ಯವನ್ನು ನೀಡಿದೆ. ಕರ್ನಾಟಕ ಪೊಲೀಸರು ಪ್ರಕರಣವನ್ನು ತನಿಖೆ ನಡೆಸಿದ ರೀತಿ ದೇಶದಾದ್ಯಂತ ಮೆಚ್ಚುಗೆಗೆ ಕಾರಣವಾಗಿದೆ.
91 ಪೊಲೀಸರ ವಿಶೇಷ ತಂಡ
ಹೀಗಾಗಿ ಪೊಲೀಸ್ ಇಲಾಖೆಯು ವಿಶೇಷ ತಂಡಕ್ಕೆ ನಗದು ಬಹುಮಾನದ ನೀಡುವ ಮೂಲಕ ಗೌರವ ಸಲ್ಲಿಸಿದ್ದು, ವಿಶೇಷ ತಂಡದಲ್ಲಿದ್ದ 91 ಪೊಲೀಸರಿಗೆ 25 ಲಕ್ಷ ರೂಪಾಯಿ ಹಣ ಬಹುಮಾನವಾಗಿ ನೀಡಿದೆ.
ಗೌರಿ ಲಂಕೇಶ್ ಹಂತಕರು ಪಡೆದಿದ್ದ ತರಬೇತಿ ಹುಬ್ಬೇರುವಂತೆ ಮಾಡುತ್ತವೆ!
ಚಾರ್ಜ್ಶೀಟ್ ಸಲ್ಲಿಸಿರುವ ಎಸ್ಐಟಿ
ಎಸ್ಐಟಿಯು 18 ಮಂದಿಯ ಮೇಲೆ ಆರೋಪ ಹೊರೆಸಿ 5000 ಪುಟಗಳ ಸುದೀರ್ಘ ಆರೋಪಪಟ್ಟಿಯನ್ನು ನ್ಯಾಯಾಲಯಕ್ಕೆ ಈಗಾಗಲೇ ಸಲ್ಲಿಸಿದೆ. 16 ಜನರ ಬಂಧನವೂ ಆಗಿದೆ. ಒಬ್ಬ ವ್ಯಕ್ತಿ ಈಗಾಗಲೇ ಮೃತಪಟ್ಟಿದ್ದಾನೆ ಎನ್ನಲಾಗುತ್ತಿದೆ. ಗೌರಿ ಹತ್ಯೆ ತನಿಖೆಯಲ್ಲಿ ಸಿಕ್ಕ ಲೀಡ್ನಿಂದ ಮಹಾರಾಷ್ಟ್ರ ಸರ್ಕಾರವು ದಾಬೋಲ್ಕರ್ ಹತ್ಯೆ ಆರೋಪಿಗಳನ್ನು ಸಹ ಬಂಧಿಸಲು ಸಾಧ್ಯವಾಗಿತ್ತು.
ಗೌರಿ ಲಂಕೇಶ್ ಹಂತಕರು ಪಡೆದಿದ್ದ ತರಬೇತಿ ಹುಬ್ಬೇರುವಂತೆ ಮಾಡುತ್ತವೆ!
ರೋಚಕ ತಿರುವುಗಳಿರುವ ತನಿಖೆ
ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆಯು ಸುದೀರ್ಘವಾಗಿ ನಡೆದಿತ್ತು. ಬಹಳ ಸವಾಲುಗಳಿಂದ ಕೂಡಿದ್ದ ಈ ತನಿಖೆ ಅತ್ಯಂತ ರೊಚಕವಾಗಿಯೂ ಇದೆ. ವಿಶೇಷ ಪೊಲೀಸರ ತಂಡವು ಹಲವು ತಂತ್ರಜ್ಞಾನವನ್ನು ಬಳಸಿಕೊಂಡು ಹಲವು ಕೋನಗಳಿಂದ ತನಿಖೆ ಮಾಡಿ ಆರೋಪಿಗಳನ್ನು ಬಂಧಿಸಿತ್ತು.
ಗೌರಿ ಹತ್ಯೆಯ ಆರೋಪಿಗಳಿವರು
ಗೌರಿ ಹತ್ಯೆಗೆ ಸಂಬಂಧಿಸಿದಂತೆ, ಅಮೋಲ್ ಕಾಳೆ, ಪರಶುರಾಮ್ ವಾಗ್ಮೋರೆ, ಗಣೇಶ್ ವಿಸ್ಕಿನ್ , ಅಮಿತ್ ಬದ್ದಿ, ಅಮಿತ್ ದಿಗ್ವೇಕರ್, ಭರತ್ ಕುರ್ಣೆ, ಸುರೇಶ್ ಅಲಿಯಾಸ್ ಲಕ್ಷ್ಮಣ್, ರಾಜೇಶ್ ಡಿ.ಬಂಗಾರ, ಸುಧನ್ವ ಗೋಂಧಾಳ್ವಾಕರ್, ಪಾಂಡೇಜಿ ಅಲಿಯಾಸ್ ಸುಧೀರ್ ಶಂಕರ್, ಶರ್ ಬಾಹುಸಾಬ್ ಕಾಳಾಸ್ಕರ್, ಮೋಹನ್ ನಾಯ್ಕ, ವಾಸುದೇವ್ ಭಗವಾನ್ ಸೂರ್ಯವಂಶಿ, ಸುಜಿತ್ ಕುಮಾರ್, ಮನೋಹರ ಯಡವೆ, ಶ್ರೀಕಾಂತ್ ಪಂಗಾರ್ಕರ್, ಹೊಟ್ಟೆ ಮಂಜ ಅಲಿಯಾಸ್ ನವೀನ್ ಕುಮಾರ್ ಅವರುಗಳು ಈವರೆಗೆ ಬಂಧಿತರಾಗಿದ್ದಾರೆ.