ಸಿಂಗರ್, ಕಾನ್ಸ್ಟೇಬಲ್ ಸುಬ್ರಮಣಿ ಪತ್ನಿ ಅನುಮಾನಸ್ಪದ ಸಾವು
ಬೆಂಗಳೂರು, ಮೇ. 11: ಖಾಸಗಿ ವಾಹಿನಿಯ ಸರಿಗಮಪ ರಿಯಾಲಿಟಿ ಶೋವೊಂದರಲ್ಲಿ ಹಾಡುವ ಮೂಲಕ ರಾಜ್ಯದ ಮನೆ ಮಾತಾಗಿದ್ದ ಪೊಲೀಸ್ ಕಾನ್ಸ್ಟೇಬಲ್ ಸುಬ್ರಮಣಿ ಪತ್ನಿ ಅನುಮಾನಸ್ಪದವಾಗಿ ಸಾವಿಗೀಡಾಗಿದ್ದಾರೆ. ಕೋವಿಡ್ನಿಂದ ಮೃತಪಟ್ಟಿದ್ದಾರೆ ಎಂಬ ಸುದ್ದಿ ಹರಿಡಿದ ಬೆನ್ನಲ್ಲೇ ಆಕೆ ಕೋವಿಡ್ನಿಂದ ಸಾವನ್ನಪ್ಪಿಲ್ಲ. ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಹೊರಗೆ ಬಿದ್ದಿದೆ.
ಕೋಲಾರ ಮೂಲದ ಸುಬ್ರಮಣಿ ಬಯ್ಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದರು. ಹಳೇ ಕನ್ನಡ ಹಾಡು ಹಾಡುತ್ತಿದ್ದ ಸುಬ್ರಮಣಿ ಪೊಲೀಸರಿಗೆ ಸಂಬಂಧಿಸಿದಂತೆ ಒಂದು ಹಾಡು ಹಾಡಿದ್ದರು. ಅದು ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿತ್ತು. ಆನಂತರ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಸರಿಗಮಪದಲ್ಲಿ ಹಾಡುವ ಅವಕಾಶ ಸಿಕ್ಕಿತ್ತು. ಅಲ್ಲಿ ಕನ್ನಡದ ಹಾಡುಗಳನ್ನು ಹಾಡುವ ಮೂಲಕ ಸುಬ್ರಮಣಿ ರಾಜ್ಯದ ಮನೆ ಮಾತಾಗಿದ್ದರು. ಕೆ.ಆರ್.ಪುರಂನಲ್ಲಿ ತನ್ನ ಪತ್ನಿ ಜ್ಯೋತಿಯೊಂದಿಗೆ ನೆಲೆಸಿದ್ದರು.
Recommended Video
ಇತ್ತೀಚೆಗೆ ಸುಬ್ರಮಣಿ ಪತ್ನಿ ಜ್ಯೋತಿ ಕೋಲಾರಕ್ಕೆ ಹೋಗಿದ್ದರು. ಅಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೂಡಲೇ ಅವರನ್ನು ಹೊಸಕೋಟೆಯಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ವೇಳೆ ಪರೀಕ್ಷೆ ನಡೆಸಿದಾಗ ಕೋವಿಡ್ ಪಾಸಿಟಿವ್ ಇರುವುದು ದೃಢಪಟ್ಟಿದೆ. ಆತ್ಮಹತ್ಯೆಗೆ ನಿಖರ ಕಾರಣ ಗೊತ್ತಾಗಿಲ್ಲ. ಕೋಲಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.