ಅಸಲಿ ಅಭ್ಯರ್ಥಿಯ ಆಧಾರ್ ಕಾರ್ಡ್ನಲ್ಲಿ ನಕಲಿ ಅಭ್ಯರ್ಥಿ ಪೋಟೋ ಕೂರಿಸಿ ಅಕ್ರಮ
ಬೆಂಗಳೂರು, ಜೂ. 15: ಸಿವಿಲ್ ಪೊಲೀಸ್ ಹುದ್ದೆಗಳ ನೇಮಕಕ್ಕಾಗಿ ನಡೆದ ಪರೀಕ್ಷೆಗೆ ನಕಲಿ ಅಭ್ಯರ್ಥಿಗಳು ಹಾಜರಾದ ಪ್ರಕರಣವನ್ನು ಸಿಐಡಿ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ. ಅಸಲಿ ಅಭ್ಯರ್ಥಿಗಳ ಪರವಾಗಿ ಪರೀಕ್ಷೆ ಬರೆಯುತ್ತಿದ್ದ ಸುಮಾರು 61 ನಕಲಿ ಅಭ್ಯರ್ಥಿಗಳನ್ನು ಸಿಐಡಿ ಪೊಲೀಸರು ದಸ್ತಗಿರಿ ಮಾಡಿದ್ದಾರೆ. ಅಸಲಿ ಅಭ್ಯರ್ಥಿಯ ಆಧಾರ್ ಕಾರ್ಡ್ನಲ್ಲಿ ನಕಲಿ ಪರೀಕ್ಷಾರ್ಥಿಯ ಪೋಟೋ ಕೂರಿಸಿ ಪರೀಕ್ಷೆಯಲ್ಲಿ ಅಕ್ರಮ ಮಾಡಲಾಗಿತ್ತು ಎಂಬುದು ಸಿಐಡಿ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.
ಗೋಕಾಕ್ ನಲ್ಲಿರುವ ಏಕಲವ್ಯ ಕೋಚಿಂಗ್ ಸೆಂಟರ್ ಲಕ್ಷ್ಮಣ ಉದ್ದಪ್ಪ ಬಂಡಿ, ಭೀಮಪ್ಪ ಮಹದೇವ ಹುಲ್ಲೋಳಿ, ಲಕ್ಷ್ಮಣ ಮುತ್ತಪ್ಪ ಪರಣ್ಣರವರ್, ಮಲ್ಲಿಕಾರ್ಜುನ ಯಮುನಪ್ಪ ಬಲಣ್ಣನವರ್ ಎಂಬುವರನ್ನು ಬಂಧಿಸಲಾಗಿದೆ. ಬೆಂಗಳೂರು ನಗರದಲ್ಲಿ 11 ಪ್ರಕರಣ ಸೇರಿದಂತೆ 21 ಕ್ರಿಮಿನಲ್ ಪ್ರಕರಣ ದಾಖಲಾಗಿವೆ. ಬೆಳಗಾವಿಯಲ್ಲಿ ಐದು ಪ್ರಕರಣ, ಬಳ್ಳಾರಿ, ಚಿತ್ರದುರ್ಗ, ಯಾದಗಿರಿಯಲ್ಲಿ ತಲಾ ಒಂದು ಪ್ರಕರಣ ದಾಖಲಾಗಿವೆ. ಇದರಲ್ಲಿ ಶಾಮೀಲಾಗಿದ್ದ ಐವರು ಪೊಲೀಸ್ ಪೇದೆಗಳನ್ನು ಸೇವೆಯಿಂದ ವಜಾ ಮಾಡಲಾಗಿದೆ ಎಂಧು ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯ ಪ್ರಕಟಣೆ ತಿಳಿಸಿದೆ.
ಏನಿದು ಪರೀಕ್ಷೆ ಅಕ್ರಮ: 598 ಸಿವಿಲ್ ಕಾನ್ಸ್ಟೇಬಲ್ ಹುದ್ದೆ, 640 ಹೈದರಾಬಾದ್ ಕರ್ನಾಟಕ ಕಾನ್ ಸ್ಟೇಬಲ್, 2420 ಕೆಎಸ್ಆರ್ಪಿ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿತ್ತು. ಈ ಪರೀಕ್ಷೆಯಲ್ಲಿ ಅಸಲಿ ವಿದ್ಯಾರ್ಥಿಗಳ ಹೆಸರಿನಲ್ಲಿ ನಕಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿರುವ ಮಾಹಿತಿ ಸಿಕ್ಕಿತ್ತು. ಈ ಕುರಿತು ರಾಜ್ಯದಲ್ಲಿ ದಾಖಲಾದ ಹನ್ನೊಂದು ಕ್ರಿಮಿನಲ್ ಪ್ರಕರಣಗಳ ತನಿಖೆಯನ್ನು ಸಿಐಡಿಗೆ ವಹಿಸಲಾಗಿತ್ತು. ಮೂರು ಇನ್ಸ್ಪೆಕ್ಟರ್ ಗಳನ್ನು ಒಳಗೊಂಡ ತಂಡ ತನಿಖೆ ನಡೆಸಿತ್ತು.
ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ ಲಿಖಿತ ಪರೀಕ್ಷೆ ಹಾಗೂ ದೇಹದಾಢ್ಯ ಪರೀಕ್ಷೆಯಲ್ಲಿ ಅಸಲಿ ಅಭ್ಯರ್ಥಿಗಳ ಹೆಸರಿನಲ್ಲಿ ನಕಲಿ ಅಭ್ಯರ್ಥಿಗಳು ಪರೀಕ್ಷೆ ಬರೆಯುತ್ತಿದ್ದರು. ತನಿಖೆ ವೇಳೆ ಸುಮಾರು 61 ಅಭ್ಯರ್ಥಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ. 1.54 ಲಕ್ಷ ರೂ. ಹಣ, ಎರಡು ಕಾರು, ಎಂಟು ಮೊಬೈಲ್, ಕಂಪ್ಯೂಟರ್ ಹಾರ್ಡ್ ಡಿಸ್ಕ್ ವಶಪಡಿಸಿಕೊಳ್ಳಲಾಗಿದೆ. ಸಿಐಡಿ ತನಿಖೆಯಲ್ಲಿ ಅಸಲಿ ಅಭ್ಯರ್ಥಿಗಳ ಆಧಾರ್ ಕಾರ್ಡ್ ನಲ್ಲಿ ನಕಲಿ ಅಭ್ಯರ್ಥಿಗಳ ಭಾವಚಿತ್ರ ಬಳಿಸಿ ಪರೀಕ್ಷೆ ಬರೆಯುವುದು ಈ ದಂಧೆಯ ಕಾರ್ಯತಂತ್ರ. ಈ ದಂಧೆಯಲ್ಲಿ ಶಾಮೀಲಾಗಿದ್ದ ಐವರು ಪೊಲೀಸ್ ಕಾನ್ಸ್ಟೇಬಲ್ ಕೂಡ ಕೆಲಸ ಕಳೆದುಕೊಂಡಿದ್ದಾರೆ.
Recommended Video
ಇನ್ನು ಈ ಅಕ್ರಮ ದಂಧೆಯಲ್ಲಿ ತೊಡಗಿರುವ ಗೋಕಾಕ್ನ ವೀರೇಶ್ ಡಿಜಿಟಲ್ ಸ್ಟುಡಿಯೋ ಸೇರಿದಂತೆ, ಹಲವು ಸೈಬರ್ ಕೇಂದ್ರಗಳ ಮೇಲೂ ದಾಳಿ ನಡೆಸಲಾಗಿದೆ. ಇನ್ನೂ ಹಲವು ಸೈಬರ್ ಕೇಂದ್ರಗಳ ಮೇಲೆ ಸಿಐಡಿ ಪೊಲೀಸರು ನಿಗಾ ಇಟ್ಟಿದ್ದಾರೆ. ನಕಲಿ ಅಭ್ಯರ್ಥಿಗಳ ಮೂಲಕ ಪರೀಕ್ಷೆ ಬರೆಸಿ ಸರ್ಕಾರಿ ಉದ್ಯೋಗ ಗಿಟ್ಟಿಸುವ ಯತ್ನ ನಡೆಸಿದ 21 ಅಭ್ಯರ್ಥಿಗಳು ಮುಂದೆ ಯಾವುದೇ ರೀತಿಯ ಪರೀಕ್ಷೆ ಬರೆಯದಂತೆ ಡಿಬಾರ್ ಮಾಡಲಾಗಿದೆ. ಅಕ್ರಮಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆ ಮುಂದುವರೆದಿದೆ.