ಕಂಬಿ ಹಿಂದೆ ಹಾಕುತ್ತೇವೆ: 'ಸ್ವಿಗ್ಗಿ'ಗೆ ಎಚ್ಚರಿಕೆ ನೀಡಿದ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್
Recommended Video
ಬೆಂಗಳೂರು, ಜನವರಿ 21: ನಗರದಲ್ಲಿ ಅತಿ ಹೆಚ್ಚು ಸಂಚಾರ ನಿಯಮಾವಳಿಗಳನ್ನು ಉಲ್ಲಂಘನೆ ಮಾಡುವುದು ರೆಸ್ಟೋರೆಂಟ್ಗಳಿಂದ ಮನೆ ಅಥವಾ ಕಚೇರಿಗಳಿಗೆ ಆಹಾರ ಸರಬರಾಜು ಮಾಡುವ ವಿವಿಧ ಕಂಪೆನಿಗಳ ಡೆಲಿವರ್ ಬಾಯ್ಗಳು ಎಂಬ ಆರೋಪವಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ನಗರದ ಪೊಲೀಸ್ ಆಯುಕ್ತ ಭಾಸ್ಕರರಾವ್, ಸ್ವಿಗ್ಗಿ ಆಡಳಿತ ಮಂಡಳಿಗೆ ಎಚ್ಚರಿಕೆ ನೀಡಿದ್ದಾರೆ.
ಗ್ರಾಹಕರಿಗೆ ನಿರ್ದಿಷ್ಟ ಸಮಯದಲ್ಲಿ ಆಹಾರ ಡೆಲಿವರಿ ಮಾಡುವ ಧಾವಂತದಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿ ಹೋಗುತ್ತಾರೆ. ಇದರಿಂದ ಅವರು ಅನೇಕ ಬಾರಿ ಅಪಘಾತಕ್ಕೆ ತುತ್ತಾದ ಘಟನೆಗಳು ನಡೆದಿವೆ. ಹಾಗೆಯೇ ಪೊಲೀಸರಿಂದ ದಂಡಕ್ಕೂ ಒಳಗಾಗಿದ್ದಾರೆ.
ಕ್ಯಾರಿ ಬ್ಯಾಗ್ಗೆ 14 ರೂ.: ಡೊಮಿನೊಸ್ಗೆ ಬಿತ್ತು 10 ಲಕ್ಷ ರೂ. ದಂಡ
ಆಹಾರ ಪೂರೈಕೆ ಮಾಡುವಾಗ ತಡವಾದರೆ, ಆಹಾರ ಬಿಸಿ ಇಲ್ಲದಿದ್ದರೆ ಕಂಪೆನಿಗಳಿಗೆ ಗ್ರಾಹಕರು ದೂರು ನೀಡುತ್ತಾರೆ. ಇದಕ್ಕೆ ಡೆಲಿವರಿ ಬಾಯ್ಗಳೇ ಬಲಿಪಶುಗಳಾಗುತ್ತಾರೆ. ಇದರ ವಿರುದ್ಧ ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅದನ್ನು ಗಮನಿಸಿರುವ ಭಾಸ್ಕರ ರಾವ್, ಸಂಚಾರ ನಿಯಮಗಳನ್ನು ಪಾಲಿಸುವಂತೆ ಹಾಗೆಯೇ ಡೆಲಿವರಿ ಬಾಯ್ಗಳನ್ನು ದಂಡಿಸದಂತೆ ಸ್ವಿಗ್ಗಿ ಕಂಪೆನಿಗೆ ಸೂಚನೆ ನೀಡಿದ್ದಾರೆ.
ಸಮಯ ವಿಸ್ತರಣೆ ಮಾಡಿ
'30 ನಿಮಿಷಗಳ ಕಾಲಾವಧಿಯನ್ನು ಮೀರುತ್ತೇನೆ ಎಂಬ ಕಾರಣಕ್ಕೆ ತನ್ನ ಜೀವವನ್ನು ಪಣವಾಗಿಡುವ ಮಗುವಿನಿಂದ ಉಚಿತ ಪಿಜ್ಜಾ ಪಡೆದುಕೊಳ್ಳಲು ನಮಗೆ ಹೃದಯವಿದೆಯೇ? ಎಲ್ಲ ಸಂಚಾರ ನಿಯಮಗಳನ್ನು ಉಲ್ಲಂಘಿಸಿ ಪ್ರಾಣವನ್ನು ಪಣವಾಗಿಡುವ ಈ ಮಕ್ಕಳಿಗೆ ಪಿಜ್ಜಾ ಕಂಪೆನಿಗಳು ಕನಿಷ್ಠ 40 ನಿಮಿಷಗಳ ಸಮಯ ನೀಡಬೇಕು ಎಂಬುದನ್ನು ನಾನು ಗಂಭೀರವಾಗಿ ಪರಿಗಣಿಸಿದ್ದೇನೆ' ಎಂದು ಭಾಸ್ಕರ್ ರಾವ್ ಟ್ವೀಟ್ ಮಾಡಿದ್ದಾರೆ.
ಸಂಚಾರ ಉಲ್ಲಂಘನೆ ಒಪ್ಪುವುದಿಲ್ಲ
'ನಿಮ್ಮ ಕಳವಳವನ್ನು ನಾವು ಅರ್ಥ ಮಾಡಿಕೊಳ್ಳುತ್ತೇವೆ. ನಾವು ಯಾವುದೇ ರೀತಿಯ ಸಂಚಾರ ಉಲ್ಲಂಘನೆಗಳನ್ನು ಕ್ಷಮಿಸುವುದಿಲ್ಲ. ನೀವು ಅದನ್ನು ಕಂಡರೆ ದಯವಿಟ್ಟು 080-46866699 ಸಂಖ್ಯೆಯಲ್ಲಿ ನಮ್ಮನ್ನು ಸಂಪರ್ಕಿಸಿ ಮಾಹಿತಿ ನೀಡಿ' ಎಂದು ಸ್ವಿಗ್ಗಿ ಕೇರ್ಸ್ ಗ್ರಾಹಕ ಕೇಂದ್ರ ಪ್ರತಿಕ್ರಿಯೆ ನೀಡಿತ್ತು.
ಮ್ಯಾನೇಜ್ಮೆಂಟ್ ಜೈಲಿಗೆ ಹೋಗಬೇಕಾಗುತ್ತದೆ
'ಮಿ. ಸ್ವಿಗ್ಗಿ ಕೇರ್ಸ್, ಅತಿ ಹೆಚ್ಚು ಸಂಚಾರ ನಿಯಮ ಉಲ್ಲಂಘನೆ ಮಾಡುವವರೇ ನೀವು. ನಾವು ಸಂಚಾರ ನಿಯಮವನ್ನು ಸರಿಯಾಗಿ ಪಾಲಿಸುತ್ತಿದ್ದೇವೆ ಎಂದು ನೀವು ವಿಶ್ವಾಸದಿಂದ ಹೇಳಿಕೊಳ್ಳುತ್ತೀರಿ. ಆದರೆ ನಿಮ್ಮ ಹುಡುಗರು ಕಂಪೆನಿ ನಮಗೆ ದಂಡ ಹಾಕುತ್ತದೆ, ಬಿಟ್ಟುಬಿಡಿ ಎಂದು ಪೊಲೀಸರನ್ನು ಬೇಡಿಕೊಳ್ಳುತ್ತಾರೆ. ಮುಂದೊಮ್ಮೆ ಸ್ವಿಗ್ಗಿಯ ಹುಡುಗರು ರಸ್ತೆಯಲ್ಲಿ ರಕ್ತ ಸುರಿಸುವುದನ್ನು ಕಂಡರೆ ಖಂಡಿತವಾಗಿಯೂ ನಿಮ್ಮ ಮ್ಯಾನೇಜ್ಮೆಂಟ್ ಕಂಬಿ ಹಿಂದೆ ಹೋಗುವುದು ಖಚಿತ' ಎಂದು ಭಾಸ್ಕರ್ ರಾವ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಊಬರ್ ಈಟ್ ಇಂಡಿಯಾ ಜೊಮ್ಯಾಟೊಗೆ ಮಾರಾಟ?
ದುಡಿಮೆಗೆ ಕತ್ತರಿ ಹಾಕಬೇಡಿ
ಗ್ರಾಹಕರು ಆರ್ಡರ್ ಮಾಡುವ ಪಿಜ್ಜಾ 30 ನಿಮಿಷಗಳ ಒಳಗೆ ತಲುಪದೆ ಇದ್ದರೆ ಅದಕ್ಕೆ ಹಣ ಪಾವತಿ ಮಾಡಬೇಕಿಲ್ಲ ಎಂಬ ಆಮಿಷವನ್ನು ಒಡ್ಡುವ ಪಿಜ್ಜಾ ಕಂಪೆನಿಗಳು, ಡೆಲಿವರಿ ತಡವಾದರೆ ಆ ಹಣವನ್ನು ಡೆಲಿವರಿ ಬಾಯ್ಗಳಿಂದಲೇ ವಸೂಲಿ ಮಾಡುತ್ತವೆ. ಇದರಿಂದಾಗಿ ಅವರು ಸಂಚಾರ ನಿಯಮಗಳನ್ನು ಉಲ್ಲಂಘಿಸಿ ತರಾತುರಿಯಲ್ಲಿ ತಲುಪಲು ಪ್ರಯತ್ನಿಸುತ್ತಾರೆ. ಈ ಅವಧಿಯನ್ನು ವಿಸ್ತರಿಸಬೇಕು, ಇಲ್ಲವೇ ಸಂಪೂರ್ಣವಾಗಿ ತೆಗೆದುಹಾಕಬೇಕು. ಹೊಟ್ಟೆಪಾಡಿಗಾಗಿ ಡೆಲಿವರಿ ಬಾಯ್ ಕೆಲಸ ಮಾಡುವ ದುಡಿಮೆಗೆ ಕತ್ತರಿ ಹಾಕುವ, ಅವರು ಜೀವಕ್ಕೆ ಅಪಾಯವನ್ನು ತಂದುಕೊಳ್ಳುವ ಚಟುವಟಿಕೆಗಳಿಗೆ ಅವಕಾಶ ನೀಡಬಾರದು ಎಂದು ಅನೇಕರು ಭಾಸ್ಕರ್ ರಾವ್ ಅವರ ಹೇಳಿಕೆಯನ್ನು ಬೆಂಬಲಿಸಿದ್ದಾರೆ.