'ಟ್ರಾಫಿಕ್ ಪೊಲೀಸರು ಏಕಾಏಕಿ ಅಡ್ಡಗಟ್ಟಿ ದಾಖಲೆ ಕೇಳುವಂತಿಲ್ಲ'
ಬೆಂಗಳೂರು, ಮಾರ್ಚ್ 5: ಟ್ರಾಫಿಕ್ ಪೊಲೀಸರ ಭಯದಲ್ಲಿಯೇ ಓಡಾಡುವ ವಾಹನ ಸವಾರರಿಗೆ ರಾಜ್ಯ ಸರ್ಕಾರ ನೆಮ್ಮದಿಯ ಸುದ್ದಿ ನೀಡಿದೆ. ಸಂಚಾರ ನಿಯಮ ಉಲ್ಲಂಘನೆ ಸಂಬಂಧ ಪೊಲೀಸರು ವಾಹನಗಳಿಗೆ ಏಕಾಏಕಿ ಅಡ್ಡ ಬಂದು ದಾಖಲೆಗಳನ್ನು ಕೇಳುವಂತಿಲ್ಲ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ವಿಧಾನಪರಿಷತ್ನಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಜೆಡಿಎಸ್ ಸದಸ್ಯ ಎಚ್ಎಂ ರಮೇಶ್ ಗೌಡ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಬೊಮ್ಮಾಯಿ, ಬಿಬಿಎಂಪಿ ವ್ಯಾಪ್ತಿಯಲ್ಲಿನ ಪೊಲೀಸ್ ಠಾಣೆಗಳ ವ್ಯಾಪ್ತಿಯನ್ನು ಶೀಘ್ರದಲ್ಲಿಯೇ ಮರು ರಚನೆ ಮಾಡಲಾಗುವುದು. ಈ ಸಂಬಂಧ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದೆ. ಶೀಘ್ರದಲ್ಲಿಯೇ ಸಮಿತಿಯು ಈ ಕುರಿತು ವರದಿ ನೀಡಲಿದೆ' ಎಂದು ಮಾಹಿತಿ ನೀಡಿದ್ದಾರೆ.
ಸಿಸಿಟಿವಿ ಕ್ಯಾಮೆರಾ ಇಲ್ಲದ ಕಡೆಗಳಲ್ಲಿ ಸಿಗ್ನಲ್ ಜಂಪ್, ಅತಿ ವೇಗದ ವಾಹನಗಳನ್ನು ಪತ್ತೆಹಚ್ಚಲು ತಂತ್ರಜ್ಞಾನ ಬಳಸಿಕೊಳ್ಳಲಾಗುತ್ತಿದೆ. ನಿಯಮ ಉಲ್ಲಂಘಿಸಿದ ಸಂದರ್ಭಗಳಲ್ಲಿ ವಾಹನ ಮತ್ತು ಸವಾರರನ್ನು ಹಿಡಿಯಲು ಪೊಲೀಸರು ರಸ್ತೆಯಲ್ಲಿ ಅಡ್ಡ ಬರುವುದು ಗಮನಕ್ಕೆ ಬಂದಿದೆ. ಅಂತಹ ಸಂದರ್ಭಗಳಲ್ಲಿ ಅಪಘಾತ ಉಂಟಾಗದಂತೆ, ಸಾರ್ವಜನಿಕರಿಗೆ ತೊಂದರೆಯಾಗದಂತೆ ನಿಯಮಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ದಕ್ಷಿಣ ವಲಯ ಟ್ರಾಫಿಕ್ ಇಲ್ಲ
ಸಂಚಾರ ವಿಭಾಗಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರದಲ್ಲಿ ಪೂರ್ವ, ಪಶ್ಚಿಮ ಮತ್ತು ಉತ್ತರ ವಲಯ ಇದೆ. ಅದಕ್ಕೆ ಹೊಸದಾಗಿ ದಕ್ಷಿಣ ವಲಯ ಅಥವಾ ನಾಲ್ಕನೆಯ ವಲಯ ರಚಿಸುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಪೊಲೀಸ್ ಠಾಣೆಗಳ ಪುನರ್ ರಚನೆ
ಬೆಂಗಳೂರಿನ ಭೌಗೋಳಿಕ ವಿಸ್ತೀರ್ಣ ಹಾಗೂ ಜನಸಂಖ್ಯೆ ವಿಸ್ತರಣೆಯಾಗಿರುವುದರಿಂದ ಬೆಂಗಳೂರು ನಗರ ಮಿತಿಯಲ್ಲಿನ ಪೊಲೀಸ್ ಠಾಣೆಗಳನ್ನು ಮರು ಸಂಘಟಿಸುವ ಹಾಗೂ ಮರು ರಚಿಸಲಾಗುವುದು. ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ನೇತೃತ್ವದ ಸಮಿತಿಯು ಮುಂದಿನ 8-10 ದಿನಗಳಲ್ಲಿ ಪುನರ್ ರಚನೆಯ ಕುರಿತು ವರದಿ ನೀಡಲಿದೆ ಎಂದು ತಿಳಿಸಿದ್ದಾರೆ.
ಜನಸ್ನೇಹಿ ಪೊಲೀಸ್ ವ್ಯವಸ್ಥೆ
'ಬೆಂಗಳೂರಿನ ಜನಸಂಖ್ಯೆ ಹಾಗೂ ಸಂಚಾರ ದಟ್ಟಣೆ ಕಳೆದ ಕೆಲವು ವರ್ಷಗಲ್ಲಿ ಸಾಕಷ್ಟು ಏರಿಕೆಯಾಗಿದೆ. ಇತ್ತೀಚೆಗಷ್ಟೇ 110 ಗ್ರಾಮಗಳು ಬಿಬಿಎಂಪಿ ವ್ಯಾಪ್ತಿಗೆ ಸೇರ್ಪಡೆಯಾಗಿವೆ. ಸರ್ಕಾರವು ಜನಸ್ನೇಹಿ ಪೊಲೀಸ್ ವ್ಯವಸ್ಥೆಯ ಜಾರಿಗೆ ಗಮನಹರಿಸಿದೆ' ಎಂದು ಹೇಳಿದ್ದಾರೆ.
Recommended Video
12 ಕಾರಿಡಾರ್ಗಳಲ್ಲಿ ಕೆಲಸ
'ರಾಜ್ಯದಲ್ಲಿನ ಸಂಚಾರ ಸನ್ನಿವೇಶವನ್ನು ಸುಧಾರಿಸಲು ವಿವಿಧ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. 12 ಅಧಿಕ ಸಾಂದ್ರತೆಯ ಕಾರಿಡಾರ್ಗಳನ್ನು ಗುರುತಿಸಿದ್ದು, ಈ ಭಾಗಗಳಲ್ಲಿ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಕಾರ್ ಪಾರ್ಕಿಂಗ್, ಸ್ಕೈವಾಕ್, ರಸ್ತೆ ವಿಸ್ತರಣೆ ಮತ್ತು ಇತರೆ ಕೆಲಸಗಳನ್ನು ಮಾಡಲಾಗುತ್ತಿದೆ' ಎಂದು ಅವರು ಮಾಹಿತಿ ನೀಡಿದ್ದಾರೆ.