ಅಮಾಯಕರ ಮೇಲೆ ಪೊಲೀಸರ ದೌರ್ಜನ್ಯ: ಸಿದ್ದರಾಮಯ್ಯ
ಬೆಂಗಳೂರು, ಡಿಸೆಂಬರ್ 20: ಶಾಂತಿಯುತ ಪ್ರತಿಭಟನಾಕಾರರ ಮೇಲೆ ಪೊಲೀಸರು ನಿನ್ನೆ ಅಮಾನವೀಯವಾಗಿ ಗುಂಡು ಹಾರಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಇಂದು ತಮ್ಮ ಕಾವೇರಿ ನಿವಾಸದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಅಘೋಷಿತ ತುರ್ತುಪರಿಸ್ಥಿತಿ ವಾತಾವರಣ ಸೃಷ್ಟಿಸಿದ್ದಾರೆ, ಪೊಲೀಸರ ಗುಂಡೇಟಿಗೆ ಇಬ್ಬರು ಅಮಾಯಕರು ಬಲಿಯಾಗಿದ್ದಾರೆ ಎಂದು ಕಿಡಿಕಾರಿದರು.
ಸರ್ಕಾರವೇ ಮುಂದೆ ನಿಂತು ಕೊಂದಿದೆ: ಎಚ್ ಡಿ ಕುಮಾರಸ್ವಾಮಿ ಆರೋಪ
ಪ್ರತಿಭಟನಾಕಾರರ ಕೈಯಲ್ಲಿ ಮಾರಕಾಸ್ತ್ರಗಳಿರಲಿಲ್ಲ, ಸಾರ್ವಜನಿಕ ಆಸ್ತಿ, ಪಾಸ್ತಿಗೆ ನಷ್ಟ ಮಾಡಿರಲಿಲ್ಲ, ಘೋಷಣೆ ಕೂಗುವುದಕ್ಕೆ ಬಿಡಬೇಕಿತ್ತು, ಕಾನೂನು ಸುವ್ಯವಸ್ಥೆ ಕಾಪಾಡುವುದು ಪೊಲೀಸರ ಕೆಲಸವೆಂದು ಸಿದ್ದರಾಮಯ್ಯ ಹೇಳಿದರು.
ಸಿಎಎ ಗೆ ದೇಶಾದ್ಯಂತ ವಿರೋಧ
ಮಂಗಳೂರಿನಲ್ಲಿ ಪೊಲೀಸರೇ ಹಿಂಸಾಚಾರಕ್ಕೆ ಕುಮ್ಮಕ್ಕು ಕೊಟ್ಟಿದ್ದಾರೆ, ಹಲವು ಪ್ರಕ್ರಿಯೆ ಮಾಡಬೇಕಿತ್ತು, ಅನೌನ್ಸ್ ಮಾಡಿ, ನಂತರ ಟಿಯರ್ ಗ್ಯಾಸ್ ಸಿಡಿಸಬೇಕಿತ್ತು. ಇದಕ್ಕೂ ಬಗ್ಗದಿದ್ದಲ್ಲಿ ವಾಟರ್ ಸಿಡಿತ, ಲಾಟಿ ಚಾರ್ಜ್ ಮಾಡಿ ಪ್ರತಿಭಟನೆ ಹತ್ತಿಕ್ಕಬೇಕಿತ್ತು, ನಂತರ ಪರಿಸ್ಥಿತಿ ಕೈ ಮೀರಿದಾಗ ಫೈರ್ ಮಾಡಬೇಕಿತ್ತು ಎಂದು ತಿಳಿಸಿದರು.
ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ದ ದೇಶಾದ್ಯಂತ ಪ್ರತಿಭಟನೆ ಮಾಡುತ್ತಿದ್ದಾರೆ, ಜಾತ್ಯಾತೀತವಾಗಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಹೀಗಿರುವಾಗ ಆರೋಗ್ಯಕರ ಪ್ರಜಾಪ್ರಭುತ್ವ ಕಾಪಾಡಲು ಪ್ರತಿಭಟನೆಗೆ ಅವಕಾಶ ಮಾಡಿಕೊಡಬೇಕಿತ್ತು ಎಂದರು.
ಸಿಎಎ ವಿವಾದಾತ್ಮಕ ಕಾಯ್ದೆ ಎಂದು ಶಾ ಹೇಳಿದ್ದಾರೆ
ಪ್ರಜಾಪ್ರಭುತ್ವ ದೇಶದಲ್ಲಿ ಜನ ವಿರೋಧಿ ನೀತಿ ತಂದರೆ ಅದನ್ನು ಟೀಕಿಸುವ ಹಕ್ಕು ಜನರಿಗಿದೆ, ಸಂವಿಧಾನದಲ್ಲೇ ಶಾಂತಿಯುತವಾಗಿ ಪ್ರತಿಭಟಿಸಲು ಅವಕಾಶ ನೀಡಿದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದರು.
ಪ್ರತಿಭಟನೆ ವೇಳೆ ರಾಷ್ಟ್ರಗೀತೆ: ದೇಶದ ಮನಗೆದ್ದ ಬೆಂಗಳೂರು ಪೊಲೀಸ್ ಅಧಿಕಾರಿ
ಅಮಿತ್ ಶಾ ಅವರೇ ರಾಜ್ಯಸಭೆ ಕಲಾಪದಲ್ಲಿಯೇ ವಿವಾದಾತ್ಮಕ ಕಾಯ್ದೆ ಅಂತ ಹೇಳಿದ್ದಾರೆ, ಅನೆಕ ರಾಜ್ಯಗಳಲ್ಲಿ ಜನಾಕ್ರೋಶ ವ್ಯಕ್ತವಾಗಿದೆ. ಯಾರಿಗೆ ಎಷ್ಟೇ ಬಹುಮತವಿದ್ದರೂ ಸಂವಿಧಾನವನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂದರು.
ಹಿಟ್ಲರ್ ಆಡಳಿತ ನೆನಪಿಸುತ್ತದೆ
ಅನಗತ್ಯವಾಗಿ ರಾಜ್ಯದಲ್ಲಿ 144 ಸೆಕ್ಷನ್ ಹಾಕಿದ್ದಾರೆ, ಸುಖಾಸುಮ್ಮನೆ ಹಾಕಲು ಬರುವುದಿಲ್ಲ, ಅದಕ್ಕೆ ಪೂರಕ ವಾತಾವರಣವಿರಬೇಕು. ಆದರೆ ಇದನ್ನು ಉದ್ದೇಶಪೂರ್ವಕವಾಗಿಯೇ ಸರ್ಕಾರ ಮತ್ತು ಪೊಲೀಸರೇ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ಮಾಡಿದ ಸಿದ್ದರಾಮಯ್ಯ, ಇದನ್ನು ನೋಡಿದರೆ ಹಿಟ್ಲರ್ ಆಡಳಿತ ನೆನಪಿಗೆ ಬರುತ್ತದೆ, ಪ್ರಜಾಪ್ರಭುತ್ವ ವಿರೋಧಿ ಸರ್ಕಾರ ಎಂದು ಜರಿದರು.
ಬಿಜೆಪಿಯಿಂದ ಹಿಂಸಾಚಾರಕ್ಕೆ ಕುಮ್ಮಕ್ಕು
ಸಿಎಂ ಯಡಿಯೂರಪ್ಪ ಜನರ ಮೇಲೆ ದೌರ್ಜನ್ಯ ಮಾಡದಂತೆ ಮನವಿ ಮಾಡಿಕೊಂಡಿದ್ದರು, ಹೀಗಿದ್ದರೂ ಸಿಎಂ ಮಾತಿಗೆ ಕ್ಯಾರೇ ಎಂದಿಲ್ಲ. ಆದರೆ ಸರ್ಕಾರದ ಗಮನಕ್ಕೆ ತಾರದೇ ಗೋಲಿಬಾರ್ ಸಾಧ್ಯವೇ ಎಂದು ಪ್ರಶ್ನಿಸಿದರು. ಪೊಲೀಸರ ಉದ್ದೇಶ ಕೊಲ್ಲುವುದೇ ಆಗಿತ್ತು ಎಂದು ಹೇಳಿದರು.
ಹಿಂಸಾಚಾರಕ್ಕೆ ಬಿಜೆಪಿಯ ಕುಮ್ಮಕ್ಕು ಇರುವುದು ಸ್ಪಷ್ಟವಾಗಿದೆ, ಇವರ ಉದ್ದೇಶ ಎರಡು ಧರ್ಮದ ಮಧ್ಯೆ ಬೆಂಕಿ ಹಚ್ಚಿ, ಅದರಿಂದ ರಾಜಕೀಯ ಲಾಭ ಪಡೆಯುವುದಾಗಿದೆ. ಕೇಂದ್ರ ಮಂತ್ರಿ ಸುರೇಶ್ ಅಂಗಡಿ ಗುಂಡಿಕ್ಕಿ ಕೊಲ್ಲಿ ಅಂತಾರೆ, ಇವರಿಂದಲೇ ಪೊಲೀಸರು ಗುಂಡು ಹಾರಿಸಿದ್ದಾರೆ ಎಂದು ಬಿಜೆಪಿ ವಿರುದ್ದ ನೇರ ಆರೋಪ ಮಾಡಿದರು.