ಐದೇ ನಿಮಿಷದಲ್ಲಿ ಕೋಟಿ ಮೌಲ್ಯದ ಚಿನ್ನ ಅಬೇಸ್- ಓಜಿ ಕುಪ್ಪಂ ಗ್ಯಾಂಗ್ ಅಂದರ್..
ಬೆಂಗಳೂರು, ಮೇ21: ಓಜಿಕುಪ್ಪಂ ಆಂಧ್ರಪ್ರದೇಶದ ಹಳ್ಳಿ. ಈ ಊರಿನ ಹೆಸರನ್ನ ಹೇಳಿದರೆ ಸಾಕು ಬೆಂಗಳೂರು ಪೊಲೀಸರು ಆ ಗ್ಯಾಂಗ್ನ ಇತಿಹಾಸವನ್ನೇ ಹೊರಗೆೆಳೆದುಬಿಡ್ತಾರೆ. ಓಜಿಕುಪ್ಪಂನ ಮೂಲದ ಗ್ಯಾಂಗ್ ಬೆಂಗಳೂರಿಗೆ ಲಗ್ಗೆಯಿಟ್ಟರೆ ಮುಗಿತು. ಖತರ್ನಾಕ್ ಐಡಿಯಾಗಳನ್ನು ಮಾಡಿ ಹಣ ಎಗರಿಸೋದರಲ್ಲಿ ನಿಸ್ಸೀಮರು. ಜಸ್ಟ್ 5 ನಿಮಿಷದಲ್ಲೇ ಕೋಟಿ ಕೋಟಿ ಬೆಲೆಯ ಚಿನ್ನ ವಜ್ರವನ್ನು ಎಗರಿಸಿದ್ದರು. ಆ ಚಿನ್ನವನ್ನು ಎಗಸಿದ ಕಲೆ.. ಓಜಿಕುಪ್ಪಂ ಗ್ಯಾಂಗ್ ಅಂದರ್ ಆದ ರೋಚಕ ಕಹಾನಿ ಇಲ್ಲಿದೆ.
ರಘುವನಹಳ್ಳಿಯಲ್ಲಿರುವ ಯುನಿಯನ್ ಬ್ಯಾಂಕ್ನ ಲಾಕರ್ನಲ್ಲಿ ಚಿನ್ನವನ್ನು ಇಟ್ಟಿದ್ದ ಸುಬ್ರಮಣ್ಯ ಭಂಡಾರು ಎಂಬುವವರು ಲಾಕರ್ನಿಂದ ಒಡವೆ ತೆಗೆದುಕೊಂಡು ಬಂದು ಕಾರಿನ ಹಿಂಬದಿಯ ಸೀಟಿನಲ್ಲಿ ಇಟ್ಟಿದ್ದರು. ಕಾರಿನ ಗಾಜಿನಿಂದ ಇಣುಕಿದರೆ ಚಿನ್ನದ ಬ್ಯಾಗ್ ಕಾಣುತ್ತಿತ್ತು.
ಐದೇ ನಿಮಿಷದಲ್ಲಿ ಚಿನ್ನ ದೋಚಿದ ಖದೀಮ
ಸುಬ್ರಮಣ್ಯ ಭಂಡಾರುರವರ ಕಾರನ್ನು ಗಮನಿಸುತ್ತಿದ್ದ ಓಜಿ ಕುಪ್ಪಂ ಗ್ಯಾಂಗ್ ಸದಸ್ಯರು ಕಾರಿನಿಂದ ವ್ಯಕ್ತಿ ಇಳಿಯುವುದನ್ನೇ ಕಾಯುತ್ತಿದ್ದರು. ಈ ವೇಳೆ ವ್ಯಕ್ತಿ ಚಿನ್ನದ ಬ್ಯಾಗ್ ಅನ್ನು ಕಾರಿನ ಹಿಂಬದಿಯ ಸೀಟ್ನಲ್ಲೇ ಇಟ್ಟು ಡೋರ್ ಲಾಕ್ ಮಾಡಿ ಸಮೀಪದಲ್ಲೇ ಇದ್ದ ನರ್ಸರಿಯೊಂದಕ್ಕೆ ಹೋಗಿದ್ದಾರೆ. ನರ್ಸರಿ ಹೋಗಿ ಬರಲು ತೆಗೆದುಕೊಂಡಿದ್ದು ಕೇವಲ 5 ನಿಮಿಷವಷ್ಟೇ. ಗಿಡವನ್ನು ಖರೀದಿಸಿ ಬಂದಿದ್ದ ವ್ಯಕ್ತಿ ಕಾರನ್ನು ನೋಡಿ ದಿಗ್ಬ್ರಮೆಗೆ ಒಳಗಾಗಿಬಿಟ್ಟರು. ಯಾಕೆಂದರೆ ಕಾರನ ಕಿಟಕಿಯ ಗಾಜು ಹೊಡೆದಿತ್ತು. ಕಾರಿನಲ್ಲಿದ್ದ ಚಿನ್ನಭರಣ ಕಣ್ಮರೆಯಾಗಿತ್ತು. ಅಸಲಿಗೆ ಏನಾಗಿತ್ತು ಅನ್ನೋದನ್ನು ತಿಳಿಯೋದಕ್ಕೆ ಹೆಚ್ಚು ಚಿಂತಿಸುವ ಅಗತ್ಯವಿರಲಿಲ್ಲ ಕೋಟಿ ಬೆಲೆಯ ಚಿನ್ನಾಭರಣ 5 ನಿಮಿಷದಲ್ಲೇ ಕಳ್ಳತನವಾಗಿಬಿಟ್ಟಿತ್ತು. ಓಜಿ ಕುಪ್ಪಂ ಗ್ಯಾಂಗ್ ಭರ್ಜರಿ ಲಾಭದೊಂದಿಗೆ ಕಾಲಿಗೆ ಬುದ್ದಿ ಹೇಳಿದ್ದರು.
1170ಗ್ರಾಂ ಚಿನ್ನ, 186 ಗ್ರಾಂ ವಜ್ರದ ಒಡವೆ
ಸುಬ್ರಮಣ್ಯ ಭಂಡಾರು ಎಂಬುವವರು ತಮ್ಮ ಹೆಂಡತಿಯ ಹುಟ್ಟುಹಬ್ಬದ ಸಲುವಾಗಿ ಹೆಂಡತಿ ಮತ್ತು ಮಗಳ ಚಿನ್ನಾಭರಣವನ್ನು ಬ್ಯಾಂಕ್ನಿಂದ ತರಲು ಹೋಗಿದ್ದರು. ಈ ಸಮಯದಲ್ಲೇ ಓಜಿ ಕುಪ್ಪಂಗ್ಯಾಂಗ್ ಚಿನ್ನವಿದ್ದ ಎರಡು ಬ್ಯಾಗ್ ಅನ್ನು ಅಬೇಸ್ ಮಾಡಿತ್ತು. ಬ್ಯಾಗ್ನಲ್ಲಿದ್ದ ಸುಮಾರು 1170ಗ್ರಾಂ ಚಿನ್ನ, 186 ಗ್ರಾಂ ವಜ್ರದ ಒಡವೆ ಕಳ್ಳತವಾಗಿಬಿಟ್ಟಿತ್ತು.
ಬ್ಯಾಂಕ್ ಚಲನ್ ಭರ್ತಿ ಮಾಡುವಂತೆ ನಾಟಕ
ಪ್ರಕರಣವನ್ನು ದಾಖಲಿಸಿಕೊಂಡಿದ್ದ ತಲಘಟ್ಟಪುರ ಪೊಲೀಸರು ಸಿಸಿಟಿವಿಯನ್ನು ಪರಿಶೀಲಿಸಿದಾಗ ವ್ಯಕ್ತಿಯೊಬ್ಬ ಚಲನ್ ಭರ್ತಿ ಮಾಡುವಂತೆ ನಿಂತಿರುತ್ತಾನೆ. ಭರ್ತಿ ಮಾಡಿದ ಚಲನ್ ಅನ್ನು ಯಾವುದಕ್ಕೂ ಬಳಸದೇ ಜೇಬಿನಲ್ಲಿ ಹಾಗೇ ಇರಿಸಿಕೊಂಡು ಹೊರಗಡೆ ಬಂದಿದ್ದಾನೆ. ಕಾರ್ ಬಳಿಯಲ್ಲಿ ಹೋಗಿ ಕ್ಷಣ ಮಾತ್ರದಲ್ಲೇ ಚಿನ್ನವಿದ್ದ ಎರಡು ಬ್ಯಾಗ್ ಅನ್ನು ಎಸ್ಕೇಪ್ ಮಾಡಿದ್ದಾರೆ.
ತಮಿಳುನಾಡಿನಲ್ಲಿ ವಶಕ್ಕೆ ಪಡೆದು ಚನ್ನಾಭರಣ ರಿಕವರಿ
ತಲಘಟ್ಟಪುರ ಪೊಲೀಸರು ಸಿಸಿಟಿವಿ ಮತ್ತು ಕೆಲವು ಟೆಕ್ನಿಕಲ್ ಎವಿಡೆನ್ಸ್ ಮೇಲೆ ರತ್ನಕುಮಾರ್ ಅಲಿಯಾಸ್ ರೆಡ್ಡಿ ಎಂಬಾತನ್ನು ಬಂಧಿಸುತ್ತಾರೆ. ರತ್ನಕುಮಾರ್ ನೀಡಿರುವ ಮಾಹಿತಿ ಮೇರೆಗೆ ತನ್ನ ಸಂಬಂಧಿ ಮೊಹಮ್ಮದ್ ಹರ್ಷಾದ್ ನದೀಮ್ ಗೆ ಚಿನ್ನಾಭರಣವನ್ನು ಮಾರಾಟ ಮಾಡಿಕೊಡುವಂತೆ ಕೊಟ್ಟಿರುವುದಾಗಿ ತಿಳಿಸಿದ್ದಾರೆ. ಈ ವೇಳೆ ನದೀಮ್ ನನ್ನು ಬಂಧಿಸಿ ಚಿನ್ನಾಭರಣವನ್ನು ವಶಕ್ಕೆ ಪಡೆದರೇ ಇನ್ನು ಕೆಲವು ಚಿನ್ನಾಭರಣವನ್ನು ತನ್ನ ಅಕ್ಕ ತಾಸಿನ್ ಫಾತಿಮಾ ಬಳಿ ಕೊಟ್ಟಿರುವುದಾಗಿ ತಿಳಿಸಿರುತ್ತಾನೆ. ತಲಘಟ್ಟಪುರ ಪೊಲೀಸರು ಎಲ್ಲರನ್ನು ಬಂಧಿಸಿ 978ಚಿನ್ನಾಭರಣ ಮತ್ತು176ಗ್ರಾಂ ವಜ್ರವನ್ನು ವಶಕ್ಕೆ ಪಡೆದಿದ್ದಾರೆ. ಒಟ್ಟಾರೆ 1 ಕೋಟಿ22 ಲಕ್ಷದ ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದೆ.
ಗಮನವನ್ನು ಬೇರೆಡೆ ಸೆಳೆಯುವ ಖತರ್ನಾಕ್ ಟೀಮ್
ಓಜಿ ಕುಪ್ಪಂ ಗ್ಯಾಂಗ್ ಖತರ್ನಾಕ್ ಖದೀಮರು. ಗಮನವನ್ನು ಬೇರೆಡೆ ಸೆಳೆದು ಹಣ, ಚಿನ್ನಾಭರಣ, ಸಿಕ್ಕಿದ್ದನ್ನೆಲ್ಲಾ ದೋಚುವ ಕಿರಾತಕರು. ಸಾಮಾನ್ಯವಾಗಿ ಹಣಕಾಸಿನ ವ್ಯವಹಾರ ನಡೆಯೋ ಬ್ಯಾಂಕಿನಲ್ಲಿ ಹೆಚ್ಚು ಗಮನವನ್ನು ಕೇಂದ್ರಿಕರಿಸಿರುತ್ತಾರೆ. ಹಣವನ್ನೋ ಚಿನ್ನವನ್ನೋ ಬ್ಯಾಂಕ್ನಿಂದ ಹೊರಗಡೆಗೆ ತರುವುದನ್ನು ಗಮನಿಸಿ ಹಿಂಬಾಲಿಸುತ್ತಾರೆ. ಕಾರಿನಲ್ಲೋ ದ್ವಿಚಕ್ರ ವಾಹನದಲ್ಲೋ, ಅಥವಾ ಬ್ಯಾಗ್ ನಲ್ಲೋ ಹಣವನ್ನು ಇಟ್ಟಿದ್ದರೇ ಯಾವ ರೀತಿ ಗಮನವನ್ನು ಬೇರೆಡೆ ಸೆಳೆಯಬಹುದು ಎಂದು ನೋಡಿಕೊಳ್ಳುತ್ತಾರೆ. ಹತ್ತಿಪ್ಪತ್ತರ ನೋಟನ್ನು ಕೆಳಗೆ ಎಸೆದು ಗಮನವನ್ನು ಸೆಳೆಯುತ್ತಾರೆ, ಅಥವಾ ಬಟ್ಟೆ ಮೇಲೆ ಗಲೀಜು ಎಸೆದು ಗಮನವನ್ನು ಬೇರೆಡೆ ಸೆಳೆದು ಹಣ ಅಥವಾ ಚಿನ್ನಾಭರಣವನ್ನು ದೋಚಿ ಎಸ್ಕೇಪ್ ಆಗುತ್ತಾರೆ.