ದಲಿತ ಧ್ವನಿ ಕವಿ ಸಿದ್ದಲಿಂಗಯ್ಯ ಗೆ ಪಂಪ ಪ್ರಶಸ್ತಿ
ಬೆಂಗಳೂರು, ಫೆಬ್ರವರಿ 04: ಖ್ಯಾತ ಕನ್ನಡ ಕವಿ, ದಲಿತ ಧ್ವನಿ ಸಿದ್ದಲಿಂಗಯ್ಯ ಅವರು ಕರ್ನಾಟಕ ಸರ್ಕಾರ ನೀಡುವ ಪಂಪ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಪಂಪ ಪ್ರಶಸ್ತಿಯು ಐದು ಲಕ್ಷ ನಗದು, ಪಾರಿತೋಶಕವನ್ನು ಒಳಗೊಂಡಿದೆ. ಪ್ರಶಸ್ತಿ ಪ್ರಧಾನವು ಫೆಬ್ರವರಿ 8 ರಂದು ನಡೆಯಲಿದೆ.
ಸಿದ್ದಲಿಂಗಯ್ಯ ಅವರ ಹಲವಾರು ಕೃತಿಗಳು ಪ್ರಕಟಗೊಂಡಿತ್ತು, ಅವರ ಕವಿತೆ 'ಇಕ್ರಲಾ, ವದೀರ್ಲಾ...' ಕವನ ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಹೊಸ ಅಲೆ ಎಬ್ಬಿಸಿತ್ತು.
ಸಿದ್ದಲಿಂಗಯ್ಯ ಅವರ 'ಹೊಲೆಮಾದಿಗರ ಹಾಡು', 'ಮೆರವಣಿಗೆ', 'ಸಾವಿರಾರು ನದಿಗಳು', 'ಕಪ್ಪು ಕಾಡಿನ ಹಾಡು', 'ನನ್ನ ಜನಗಳು ಮತ್ತು ಇತರ ಕವನಗಳು' ಇತರ ಕವನ ಸಂಕಲಗಳನ್ನು ಅವರು ಪ್ರಕಟಿಸಿದ್ದಾರೆ. 'ಏಕಲವ್ಯ', 'ಪಂಚಮ', 'ನೆಲಕಾವ್ಯ' ಅವರ ಪ್ರಕಟಿತ ನಾಟಕಗಳು. 'ಊರು-ಕೇರಿ' ಸಿದ್ದಲಿಂಗಯ್ಯ ಅವರ ಆತ್ಮಕತನ.
ಗೀತರಚನಾಕಾರರೂ ಆಗಿರುವ ಸಿದ್ದಲಿಂಗಯ್ಯ ಅವರಿಗೆ ಈಗಾಗಲೇ ರಾಜ್ಯೋತ್ಸವ ಪ್ರಶಸ್ತಿ, ಅಂಬೇಡ್ಕರ್ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ನಾಡೋಜ , ನೃಪತುಂಗ ಪ್ರಶಸ್ತಿ ಮತ್ತು ಗೌರವಗಳು ದೊರೆತಿವೆ.
ಸಂಸ್ಕೃತ ವಿವಿ ವಿಶ್ರಾಂತ ಕುಲಪತಿಗಳು, ವಿಮರ್ಶಕರೂ ಆಗಿರುವ ಮಲ್ಲೆಪುರಂ ಜಿ ವೆಂಕಟೇಶ್ ಅವರ ನೇತೃತ್ವದ ಸಮಿತಿಯು ಕವಿ ಸಿದ್ದಲಿಂಗಯ್ಯ ಅವರನ್ನು ಪಂಪ ಪ್ರಶಸ್ತಿಗೆ ಆಯ್ಕೆ ಮಾಡಿದೆ.