ಮೋದಿ ನಿರ್ಗಮನದ ಬಳಿಕ ಕಿತ್ತುಹೋದ ರಸ್ತೆ; ವರದಿ ಕೇಳಿದ ಪ್ರಧಾನಿ ಕಚೇರಿ
ಬೆಂಗಳೂರು ಜೂ.24: ಬೆಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮನ ಹಿನ್ನೆಲೆ ಬಿಬಿಎಂಪಿ ತರಾತುರಿಯಲ್ಲಿ ಕೋಟ್ಯಾಂತರ ಹಣ ವ್ಯಯಿಸಿ ಮಾಡಿದ್ದ ರಸ್ತೆ ಡಾಂಬರೀಕಣ ಮೂರು ದಿನಕ್ಕೆ ಕಿತ್ತು ಹೋಗಿದೆ. ಬಿಬಿಎಂಪಿಯ ಕಾಮಗಾರಿ ಗುಣಮಟ್ಟದ ಬಗ್ಗೆ ಆರಂಭವಾಗಿದೆ. ಈ ವಿಚಾರದ ಕುರಿತು ವರದಿ ನಿಡುವಂತೆ ಪ್ರಧಾನಮಂತ್ರಿ ಕಾರ್ಯಾಲಯ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.
ಬೆಂಗಳೂರಿಗೆ ಜೂ.20ರಂದು ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದರು. ಪ್ರಧಾನಿ ಆಗಮನಕ್ಕೂ ಮುನ್ನವೇ ನಗರದಲ್ಲಿ ಹಾಳಾಗಿದ್ದ ರಸ್ತೆಗಳನ್ನು ಬಿಬಿಎಂಪಿ 23ಕೋಟಿ ರೂ.ವೆಚ್ಚದಲ್ಲಿ ಮರು ನಿರ್ಮಾಣ ಮಾಡಿತ್ತು. ಆದರೆ ರಾಜ್ಯ ಪ್ರವಾಸ ಮುಗಿಸಿ ಪ್ರಧಾನಿ ದೆಹಲಿಗೆ ತೆರಳಿದ ಮೂರೇ ದಿನಕ್ಕೆ ರಸ್ತೆ ಡಾಂಬರು ಕಿತ್ತು ಹಾಳಾಗಿದೆ.
ರಸ್ತೆ ಡಾಂಬರು ಕೈಯಿಂದ ಕಿತ್ತರೆ ಬರುವಷ್ಟರ ಮಟ್ಟಿಗೆ ಬಿಬಿಎಂಪಿ ತರಾತುರಿಯಲ್ಲಿ ರಸ್ತೆ ಮರು ನಿರ್ಮಾಣ ಮಾಡಿತ್ತು. ಈ ಕುರಿತ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಗಮನಿಸಿದ ಪ್ರಧಾನಿಮಂತ್ರಿ ಕಾರ್ಯಾಲಯದ ಅಧಿಕಾರಿಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕಾಮಗಾರಿ, ಗುಣಮಟ್ಟದ ಕುರಿತು ಮಾಹಿತಿ ಕೇಳಿದೆ.
ಕಳಪೆ ಕಾರಣರಾದ ಅಧಿಕಾರಿ ವಿರುದ್ಧ ಕ್ರಮಕ್ಕೆ ಸಿಎಂ ಸೂಚನೆ
ಗುರುವಾರ ದೆಹಲಿಯಲ್ಲಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ವಿಚಾರವಾಗಿ ಮುಖಭಂಗಕ್ಕೆ ಒಳಗಾದರು ಎಂಬ ಸುದ್ದಿ ಇದೆ. ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಬೊಮ್ಮಾಯಿ ಬಿಬಿಎಂಪಿ ಅಧಿಕಾರಿಗಳಿಗೆ ತರಾತುರಿಯ ರಸ್ತೆ ಡಾಂಬರೀಕರಣ ಕಾಮಗಾರಿ ಕುರಿತು ಸೂಕ್ತ ಮಾಹಿತಿ ನೀಡಬೇಕು. ಕಳಪೆ ಕಾಮಗಾರಿಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಎಂದು ತಿಳಿದು ಬಂದಿದೆ. ಇತ್ತೀಚೆಗೆ ಸುರಿದ ಮಳೆಯಿಂದಾಗಿ ರಸ್ತೆ ಡಾಂಬರು ಕಿತ್ತಿದೆ ಎಂದು ಸಬೂಬು ಹೇಳಿದ್ದ ಬಿಬಿಎಂಪಿಗೆ ಈಗ ಸಂಕಷ್ಟ ಬಂದೊದಗಿದೆ.
13ಕೋಟಿ ವೆಚ್ಚದಲ್ಲಿ ರಸ್ತೆ ದುರಸ್ತಿ
ನಗರದ ಕೆಲವೆಡೆ ಪ್ರಧಾನಿ ಮಂತ್ರಿಗಳ ಕಾರ್ಯಕ್ರಮ ಆಯೋಜನೆಯಾಗಿತ್ತು. ಈ ಹಿನ್ನೆಲೆ ಪ್ರಧಾನಿಗಳೇ ಅಚ್ಚರಿಗೊಳ್ಳುವಂತೆ ಬಿಬಿಎಂಪಿ ಒಟ್ಟು 23ಕೋಟಿ ರೂ. ವೆಚ್ಚದಲ್ಲಿ 14 ಕಿ.ಮೀ. ರಸ್ತೆಗಳನ್ನು ಅವಸರವಾಗಿ ಹೊಳೆಯುವಂತೆ ಮಾಡಿತ್ತು. ಕೆಂಗೇರಿಯಿಂದ ಕೊಮ್ಮಘಟ್ಟದವರೆಗಿನ ಏಳು ಕಿ.ಮೀ. ರಸ್ತೆಯೊಂದಕ್ಕೆ ಒಟ್ಟು ಆರು ಕೋಟಿ ರು. ವೆಚ್ಚದಲ್ಲಿ ಡಾಂಬರು ಹಾಕಲಾಗಿತ್ತು. ಇದೇ ಮಾರ್ಗದಲ್ಲೇ ಪ್ರಧಾನಿ ನರೇಂದ್ರ ಮೋದಿ ಸಾಗಿದ್ದರು. ಉಳಿದ ಹಣದಲ್ಲಿ ಜ್ಞಾನಭಾರತಿ ಮುಖ್ಯರಸ್ತೆ, ಬಳ್ಳಾರಿ ರಸ್ತೆ, ಮೈಸೂರು ರಸ್ತೆಗಳನ್ನು ಬಿಬಿಎಂಪಿ ದುರಸ್ಥಿ ಮಾಡಿತ್ತು. ಇದೀಗ ಈ ರಸ್ತೆಗಳು ಅಸಲಿಯತ್ತು ಏನೆಂದು ಗೊತ್ತಾಗಿದೆ. ಕಳೆಪೆ ರಸ್ತೆಗಳ ವಿಚಾರ ಹೊರಬಿಳುತ್ತಿದ್ದಂತೆ ಆ ಬಗ್ಗೆ ಪ್ರಧಾನಿ ಮಂತ್ರಿಗಳ ಕಾರ್ಯಾಲಯ ರಾಜ್ಯ ಸರ್ಕಾರಕ್ಕೆ ಮಾಹಿತಿ ಕೇಳಿದೆ.
ಸಾರ್ವಜನಿಕವಾಗಿ ಖಂಡನೆ ವ್ಯಕ್ತ
ಬೆಂಗಳೂರು ನಗರಾಭಿವೃದ್ಧಿ ಇಲಾಖೆ ಇನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕೈಯಲ್ಲಿದೆ. ಸದ್ಯದಲ್ಲೇ ಬಿಬಿಎಂಪಿ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸದೊಂದಿಗೆ ಬೊಮ್ಮಾಯಿ ಸುಮಾರು 30,000ಕೋಟಿ ಯೋಜನೆಗಳಿಗೆ ಚಾಲನೆ ನೀಡಲು ಪ್ರಧಾನಿಗಳನ್ನು ಆಹ್ವಾನಿಸಿದ್ದರು. ಆದರೆ ಬಿಬಿಎಂಪಿ ಮಾಡಿದ ಈ ಕಳಪೆ ಕಾಮಗಾರಿಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೈಗಾರಿಕೋದ್ಯಮಿಗಳು ಸಹ ಪಾಲಿಕೆ ಕೆಲಸವನ್ನು ಖಂಡಿಸಿದ್ದಾರೆ. ಹೈಕೋರ್ಟ್ ಕೂಡ ರಸ್ತೆ ಗುಂಡಿ ಮುಚ್ಚುವ ವಿಚಾರದಲ್ಲಿ ಮೇಲಿಂದ ಮೇಲೆ ಪಾಲಿಕೆಗೆ ಚಾಟಿ ಬೀಸುತ್ತಲೇ ಇದೆ.
ಕಳಪೆ ಕಾಮಗಾರಿ ಸಾಬೀತಾದರೆ ಕಠಿಣ ಕ್ರಮ: ತುಷಾರ್
ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಪ್ರತಿಕ್ರಿಯಿಸಿ, ರಸ್ತೆ ದುರಸ್ತಿಗೆ ಖರ್ಚು ಮಾಡಿದ ಹಣಕ್ಕೂ ಮತ್ತು ಡಾಂಬರು ಕಿತ್ತು ಬಂದಿರುವುದಕ್ಕೆ ಸಂಬಂಧವಿಲ್ಲ. ಗುಂಡಿ ಮುಚ್ಚುವ ಮೊದಲೇ ಅಲ್ಲಿ ಕೊಳಚೆ ನೀರಿನ ಸಮಸ್ಯೆ ಇತ್ತು. ಅದನ್ನು ಸರಿಯಾಗಿ ಮುಚ್ಚದ ಹಿನ್ನೆಲೆ ಡಾಂಬರು ಕಿತ್ತಿದೆ. ರಸ್ತೆ ಕಿತ್ತುಹೋಗಿದೆ ಎಂಬ ವಿಚಾರ ಬಂದ ಮೇಲೆ ಮರಿಯಪ್ಪನಪಾಳ್ಯ ಸೇರಿದಂತೆ ಎಲ್ಲೆಲ್ಲಿ ರಸ್ತೆ ದುರಸ್ಥಿ ಮಾಡಲಾಗಿತ್ತೋ ಅಲ್ಲಿಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿದ್ದಾರೆ. ಮುಖ್ಯಮಂತ್ರಿಗಳ ಸೂಚನೆಯಂತೆ ಕಳಪೆ ಕಾಮಗಾರಿ ಸಾಬೀತಾದರೆ ಸೂಕ್ತ ಕ್ರಮ ಕೈಗೊಳ್ಳಲಿದ್ದೇವೆ ಎಂದರು.
ಮರಿಯಪ್ಪನ ಪಾಳ್ಯದಲ್ಲಿ ಗುಣಮಟ್ಟವಲ್ಲದ ಕಾಮಗಾರಿ ನಡೆಸಲಾಗಿದೆ ಎಂಬ ಆರೋಪ ಬಂದಿದೆ. ಈ ಹಿನ್ನೆಲೆ ಕಾರ್ಯ ನಿರ್ವಾಹಕ ಅಧಿಕಾರಿ ಸೇರಿದಂತೆ ರಸ್ತೆ ಮರುನಿರ್ಮಾಣದ ಜವಾಬ್ದಾರಿ ಹೊತ್ತು ಮೂವರು ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದ್ದೇವೆ ಎಂದು ಮಾಹಿತಿ ನೀಡಿದರು.