ಪ್ರಧಾನಿ ಆಗಮನ: ಭದ್ರತೆಗಾಗಿ 2,100 ಪೊಲೀಸ್ ಸಿಬ್ಬಂದಿ ನಿಯೋಜನೆ
ಬೆಂಗಳೂರು ಜೂ. 19: ಪ್ರಧಾನಿ ನರೇಂದ್ರ ಮೋದಿ ಎರಡು ದಿನ ಕರ್ನಾಟಕ ರಾಜ್ಯ ಪ್ರವಾಸ ಕೈಗೊಂಡಿರುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸಮಪರ್ಕ ಬಿಗಿ ಭದ್ರತೆ ಮಾಡಿಕೊಂಡಿದೆ. ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ನಗರದಲ್ಲಿ 2,100 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಬೆಂಗಳೂರು ಮತ್ತು ಮೈಸೂರಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದಾರೆ. ಸೋಮವಾರ ಯಲಹಂಕ ವಿಮಾನ ನಿಲ್ದಾಣಕ್ಕೆ ಆಗಮಿಸುವ ಮೋದಿ ನಂತರ ಅಲ್ಲಿಂದ ಕೆಂಗೇರಿ ಬಳಿಯ ಕೊಮ್ಮಘಟ್ಟದ ಬಳಿ ಇರುವ ಮೈದಾನದಲ್ಲಿನ ಬಹಿರಂಗ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.
ಪ್ರಧಾನಿ ಭೇಟಿ ಹಿನ್ನಲೆಯಲ್ಲಿ ಭದ್ರತೆ ನೀಡಲು ಬೆಂಗಳೂರು ಪೊಲೀಸರು ಸಜ್ಜಾಗಿದ್ದಾರೆ. ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ನೇತೃತ್ವದಲ್ಲಿ ಎರಡು ಸಾವಿರ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದ್ದು, ನಗರಾದ್ಯಂತ ಕಟ್ಟೆಚ್ಚರ ವಹಿಸಲಿದ್ದಾರೆ.
ಪೊಲೀಸ್ ಸಿಬ್ಬಂದಿ ನಿಯೋಜನೆ ಹೇಗಿದೆ?: ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ನೇತೃತ್ವದಲ್ಲಿ ಇಬ್ಬರು ಹೆಚ್ಚುವರಿ ಪೊಲೀಸ್ ಆಯುಕ್ತರು, ಇಬ್ಬರು ಜಂಟಿ ಪೊಲೀಸ್ ಆಯುಕ್ತರು ಕಾರ್ಯ ನಿರ್ವಹಿಸಲಿದ್ದಾರೆ. 8 ಡಿಸಿಪಿ, 25 ಸಹಾಯಕ ಪೊಲೀಸ್ ಆಯುಕ್ತರು, 123 ಮಂದಿ ಇನ್ಸ್ಪೆಕ್ಟರ್ ಹಾಗೂ 125 ಸಬ್ ಇನ್ಸ್ಪೆಕ್ಟರ್ ಬಂದೋಬಸ್ತ್ಗಾಗಿ ನೇಮಿಸಲಾಗಿದೆ. ಇವರ ಸಮ್ಮುಖದಲ್ಲಿ ಸಹಾಯಕ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹಾಗೂ ಒಟ್ಟು 1736 ಪೊಲೀಸರು ಒಳಗೊಂಡಂತೆ 2,100 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಪೊಲೀಸ್ ಇಲಾಖೆ ಮೂಲಗಳು ತಿಳಿಸಿವೆ.
ಎಲ್ಲೆಲ್ಲಿ ನಿಯೋಜನೆ?; ನಿಯೋಜಿತ ಹಿರಿಯ ಅಧಿಕಾರಿಗಳು ಮತ್ತು ಇತರ ಪೊಲೀಸ್ ಸಿಬ್ಬಂದಿ ಪೈಕಿ ಹಲವರು ಪ್ರಧಾನಿ ನರೇಂದ್ರ ಮೋದಿ ಉಪಸ್ಥಿತಿಯ ಕಾರ್ಯಕ್ರಮದ ಸ್ಥಳ ಹಾಗೂ ಯಲಹಂಕದ ಹೆಲಿಪ್ಯಾಡ್ ಸುತ್ತಾ ಮುತ್ತ ಬಂದೋಬಸ್ತ್ ಒದಗಿಸಲಿದ್ದಾರೆ. ಅಂತೆಯೇ ರಾಜಕೀಯ ಮುಖಂಡರು, ಇನ್ನಿತರ ಗಣ್ಯರು ಸಂಚರಿಸುವ ರಸ್ತೆಗಳಲ್ಲಿ ಸಹ ನೂರಾರು ಪೊಲೀಸರು ಸೂಕ್ತ ಭದ್ರತೆ ನೀಡಲಿದ್ದಾರೆ.
ಸಾಲದೆಂಬಂತೆ ನಗರ ಪೊಲೀಸರ ಜತೆಗೆ ಸಿಎಆರ್, ಕೆಎಸ್ಆರ್ಪಿ, ಗರುಡ ಪಡೆಗಳ, ಕ್ವಿಕ್ ರಿಯಾಕ್ಷನ್ ಟೀಂ (QRT) ಕೂಡ ವಿಶೇಷವಾಗಿ ಭದ್ರತೆಗೆ ನಿಯೋಜನೆಗೊಂಡಿವೆ. ಈ ಮೂಲಕ ಪ್ರಧಾನಿ ಸಂಚಾರಕ್ಕೆ ವ್ಯತ್ಯವಾಗದಂತೆ ನೋಡಿಕೊಳ್ಳಲಾಗುವುದು. ಜತೆಗೆ ವೇದಿಕೆ ಕಾರ್ಯಕ್ರಮದ ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಲಾಗಿದೆ. ಈ ಸಂಬಂಧ ಶನಿವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಅಧಿಕಾರಿಗಳ ತಂಡ ಪ್ರಧಾನಿ ಆಗಮಿಸುವ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿದ್ದಾರೆ.
ವಿವಿಧ ಯೋಜನೆಗಳಿಗೆ ಚಾಲನೆ; ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನಲ್ಲಿ ಬೈನ್ ಸೆಲ್ ಅಭಿವೃದ್ಧಿ ಕೇಂದ್ರ (450ಕೋಟಿ) ಉದ್ಘಾಟಿಸಿ, ನಂತರ ಮೈಂಡ್ ಟ್ರಿ ಸಂಸ್ಥೆಯ 850 ಹಾಸಿಗೆಯುಳ್ಳ ಸಂಶೋಧನಾ ಆಸ್ಪತ್ರೆ ಸ್ಥಾಪನೆಗೆ ಅಡಿಗಲ್ಲು ಹಾಕಲಿದ್ದಾರೆ.
ಇದೇ ವೇಳೆ ಬಹುದಿನಗಳ ಕನಸಾಗಿರುವ 15 ಸಾವಿರ ಕೋಟಿ ವೆಚ್ಚದ ಉಪನಗರ ರೈಲು ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ವಿವಿಧ ರಸ್ತೆ, ರೈಲು ಮಾರ್ಗಗಳ ಅಭಿವೃದ್ಧಿ ಯೋಜನೆಗೆ ಅವರು ಚಾಲನೆ ನೀಡಲಿದ್ದಾರೆ. ನಂತರ ಮೈಸೂರಿಗೆ ಪ್ರಯಾಣ ಬೆಳೆಸಲಿದ್ದಾರೆ.