ಮೋದಿ ಬೆಂಗಳೂರು ಭೇಟಿ: ರಾಜಧಾನಿಯ ರಸ್ತೆಗಳ ಸಂಚಾರದ ಮೇಲೆ ನಿರ್ಬಂಧ
ಬೆಂಗಳೂರು, ಜೂ. 19: ಪ್ರಧಾನಿ ನರೇಂದ್ರ ಮೋದಿ ಜೂ. 20 ರಂದು ಬೆಂಗಳೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಸಂಚಾರದ ಮೇಲೆ ನಿರ್ಬಂಧ ವಿಧಿಸಲಾಗಿದೆ. ಬೆಂಗಳೂರಿನಲ್ಲಿ ಸೋಮವಾರ ಭಾರಿ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆಯಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಕರ್ನಾಟಕ ಭೇಟಿ ಸಂಚಾರದ ಮೇಲೆ ಭಾರಿ ಪರಿಣಾಮ ಬೀಳಲಿದೆ. ಜೂ. 20 ರಂದು ಬೆಂಗಳೂರಿನ ವಿವಿಧ ಕಾರ್ಯಕ್ರಮಗಳಲ್ಲಿ ಪ್ರಧಾನಿ ಮೋದಿ ಪಾಲ್ಗೊಳ್ಳಲಿದ್ದು, ಭದ್ರತಾ ದೃಷ್ಟಿಯಿಂದ ಸಂಚಾರದ ಮೇಲೆ ಸಂಚಾರ ಪೊಲೀಸರು ನಿರ್ಬಂಧ ವಿಧಿಸಿದ್ದಾರೆ. ಈ ಕುರಿತು ಬೆಂಗಳೂರು ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಬಿ.ಆರ್. ರವಿಕಾಂತೇಗೌಡ ಅವರು ಕೊಟ್ಟಿರುವ ಸೂಚನೆಗಳ ವಿವರ ಇಲ್ಲಿದೆ.
ಪ್ರಧಾನಿ ನರೇಂದ್ರ ಮೋದಿ 2 ದಿನಗಳ ಮೈಸೂರು ಪ್ರವಾಸದ ಡಿಟೈಲ್ಸ್ ಇಲ್ಲಿದೆ
ಏರ್ಪೋರ್ಟ್ ರೋಡ್ ಬಂದ್:
ಪ್ರಧಾನಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಏರ್ಪೋರ್ಟ್ ಎಲಿವೇಟೆಡ್ ರಸ್ತೆ ಮೂಲಕ ಬೆಂಗಳೂರಿಗೆ ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆ ವರೆಗೂ ಏರ್ಪೋರ್ಟ್ ಎಲಿವೇಟಡ್ ರಸ್ತೆ ಬಳಸದಂತೆ ವಾಹನ ಸವಾರರಿಗೆ ಬೆಂಗಳೂರು ಪೊಲೀಸರು ಸೂಚನೆ ನೀಡಿದ್ದಾರೆ. ಈ ರಸ್ತೆಗೆ ಬದಲಿ ಮಾರ್ಗಗಳನ್ನು ಬಳಸುವಂತೆ ಬೆಂಗಳೂರು ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಏರ್ಪೋರ್ಟ್ ರೋಡ್ ಬದಲಿ ಮಾರ್ಗಗಳು:
ಮಾರ್ಗ 1:
ಕೆ.ಆರ್ ಪುರಂ ಮತ್ತು ರಿಂಗ್ ರಸ್ತೆ ಕಡೆಯಿಂದ ಸಂಚರಿಸುವ ವಾಹನಗಳು ಹೆಣ್ಣೂರು ಕ್ರಾಸ್ ಬಳಿ ಬಲ ತಿರುವು ಪಡೆದು ಭೈರತಿ ಕ್ರಾಸ್, ಬಾಗಲೂರು ಗುಂಡಪ್ಪ ಸರ್ಕಲ್- ಬಲತಿರುವು, ಬಂಡಿಕೊಡಗೇಹಳ್ಳಿ ಮುಖ್ಯ ರಸ್ತೆ ಮೂಲಕ ಬೇಗೂರು ಹಿಂಬಾಗಿಲು ಮೂಲಕ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪುವುದು.
ಮಾರ್ಗ 02:
ತುಮಕೂರು ರಸ್ತೆ, ರಿಂಗ್ ರಸ್ತೆ ಕಡೆಯಿಂದ ಸಂಚರಿಸುವ ವಾಹನಗಳು ಗೊರಗುಂಟೆ ಪಾಳ್ಯ, ಬಿಇಎಲ್ ಎಡ ತಿರುವು ಪಡೆದು ಗಂಗಮ್ಮನಗುಡಿ, ಸರ್ಕಲ್, ಎಂಎಸ್. ಪಾಳ್ಯ, ಯಲಹಂಕದ ಮದರ್ ಡೈರಿ ಜಂಕ್ಷನ್, ಸಿಂಗನಾಯಕನಹಳ್ಳಿ, ರಾಜಾನುಕುಂಟೆ, ವಿದ್ಯಾನಗರ ಕ್ರಾಸ್, ಸಾದರಹಳ್ಳಿ ಗೇಟ್ ಮೂಲಕ ಏರ್ ಪೋರ್ಟ್ ತಲುಪಲು ಸೂಚಿಸಲಾಗಿದೆ.
ಮಾರ್ಗ 03:
ವಿಧಾನಸೌಧ, ರಾಜಭವನ, ಕೆ.ಆರ್. ಮಾರ್ಕೆಟ್ ಕಡೆಯಿಂದ ಹೋಗುವ ವಾಹನಗಳು ಕಾವೇರಿ ಜಂಕ್ಷನ್ನಲ್ಲಿ ಎಡ ತಿರುವು, ಸ್ಯಾಂಕಿ ರಸ್ತೆ, ಮತ್ತಿಕೆರೆ ಕ್ರಾಸ್, ಎಚ್ಎಂಟಿ, ಬಿಇಎಲ್ ಸರ್ಕಲ್ ಗಂಗಮ್ಮನ ಗುಡಿ ರಸ್ತೆ , ರಾಜಾನುಕುಂಟೆ ಮಾರ್ಗವಾಗಿ ವಿಮಾನ ನಿಲ್ದಾಣ ತಲುಪುವುದು.
ಮಾರ್ಗ 04:
ಕಂಟೋನ್ಮೆಂಟ್, ಜೆ.ಸಿ.ನಗರ, ಆರ್ ಟಿ. ನಗರ ಕಡೆಯಿಂದ ಸಂಚರಿಸುವ ವಾಹನಗಳು ವಾಟರ್ ಟ್ಯಾಂಕ್ ಜಂಕ್ಷನ್, ದೇವೇಗೌಡ ರಸ್ತೆ, ಕಾವಲ್ ಭೈರಸಂದ್ರ ರಸ್ತೆ, ನಾಗವಾರ ಜಂಕ್ಷನ್, ಹೆಣ್ಣೂರು ಕ್ರಾಸ್, ಬಂಡಿಕೊಡಿಗೇಹಳ್ಳಿ ಮುಖ್ಯ ರಸ್ತೆ ಬೇಗೂರು ಮೂಲಕ ವಿಮಾನ ನಿಲ್ದಾಣಕ್ಕೆ ಸಂಚರಿಸಲು ಅವಕಾಶ ಮಾಡಿಕೊಡಲಾಗಿದೆ.
ಮಾರ್ಗ 05:
ಏರ್ ಪೋರ್ಟ್ ನಿಂದ ವಿವಿಧ ಕಡೆ ಸಂಚರಿಸುವ ವಾಹನಗಳಿಗೂ ಇದೇ ಮಾರ್ಗವನ್ನು ಬಳಸಲು ಸಂಚಾರ ಪೊಲೀಸರು ಸೂಚಿಸಿದ್ದಾರೆ. ಯಶವಂತಪುರದಿಂದ ಜಯಮಹಲ್ ಕಡೆ ಸಂಚರಿಸುವ ವಾಹನಗಳು ಮತ್ತಿಕೆರೆ, ಬಿಇಎಲ್ ವೃತ್ತ, ಹೆಬ್ಬಾಳ, ವೀರಣ್ಣ ಪಾಳ್ಯ ದಿನ್ನೂರು ಮೇನ್ ರೋಡ್ ಮೂಲಕ ಜಯಮಹಲ್ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ.
ಸಂಚಾರ ನಿಷೇಧಿಸಲಾದ ರಸ್ತೆ:
ಮಧ್ಯಾಹ್ನ 12. 30 ರಿಂದ ಮಧ್ಯಾಹ್ನ 3 ಗಂಟೆ ವರೆಗೆ ಸಂಚಾರ ಬಂದ್ : ಮೈಸೂರು ರಸ್ತೆ, ನೈಸ್ ಬ್ರಿಡ್ಜ್ ಕಡೆಯಿಂದ ಕೆಂಗೇರಿ, ಬೆಂಗಳೂರು ನಗರ ಕಡೆಗೆ. ಉತ್ತರಹಳ್ಳಿ ರಸ್ತೆ ಕಡೆಯಿಂದ ಕೆಂಗೇರಿ, ಮೈಸೂರು ಕಡೆಗೆ ಸಂಚಾರ ನಿಷೇಧಿಸಲಾಗಿದೆ. ನಾಗರಭಾವಿ ಸರ್ಕಲ್ ನಿಂದ ಜ್ಞಾನ ಭಾರತಿ ಅಡ್ಮೀನ್ ಬ್ಲಾಕ್ ಜಂಕ್ಷನ್ ವರೆಗೆ.
ಪರ್ಯಾಯ ಮಾರ್ಗ: ನಾಗರಭಾವಿ ಸರ್ಕಲ್ ನಿಂದ ನಮ್ಮೂರ ತಿಂಡಿ, ಅಂಬೇಡ್ಕರ್ ಕಾಲೇಜ್ ಜಂಕ್ಷನ್. ಹೀಗೆ ಮೋದಿ ಅವರ ಸಾರ್ವಜನಿಕ ಕಾರ್ಯಕ್ರಮಗಳು ನಡೆಯುವ ವೇಳೆ ನಾನಾ ರಸ್ತೆಗಳನ್ನು ಬಂದ್ ಮಾಡಲಾಗಿದೆ. ಇನ್ನೂ ಕೆಲವು ರಸ್ತೆಗಳಲ್ಲಿ ವಾಹನ ಪಾರ್ಕಿಂಗ್ ಕೂಡ ನಿಷೇಧ ಮಾಡಲಾಗಿದೆ.