ಎಸ್.ಆರ್. ವಿಶ್ವನಾಥ್ ಹತ್ಯೆಗೆ ಸಂಚು: ಪ್ರಮುಖ ಆರೋಪಿ ಗೋಪಾಲಕೃಷ್ಣ ಎಸ್ಕೇಪ್?
ಬೆಂಗಳೂರು, ಡಿ. 03: ಶಾಸಕ ಎಸ್.ಆರ್. ವಿಶ್ವನಾಥ್ ಕೊಲೆಗೆ ಸಂಚು ರೂಪಿಸಿದ ಆರೋಪಕ್ಕೆ ಗುರಿಯಾಗಿರುವ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ. ಕುಳ್ಳ ದೇವರಾಜ್ ಬಂಧನಕ್ಕೆ ಒಳಗಾಗುತ್ತಿದ್ದಂತೆ ವಿಚಾರಣೆಗೆ ಬರುವಂತೆ ನೋಟಿಸ್ ನೀಡಿದ್ದಾರೆ. ಆದರೆ, ಗೋಪಾಲಕೃಷ್ಣ ನಿರೀಕ್ಷಣಾ ಜಾಮೀನು ಮೊರೆ ಹೋಗಿದ್ದು, ವಿಚಾರಣೆಗೆ ಹಾಜರಾಗುವುದು ಅನುಮಾನ ಎಂದು ತಿಳಿದು ಬಂದಿದೆ.
ವಿಚಾರಣೆಗೆ ಹಾಜರಾಗುವಂತೆ ಗೋಪಾಲಕೃಷ್ಣಗೆ ನೋಟಿಸ್ ನೀಡಿದ್ದು, ಬೆಂಗಳೂರು ಗ್ರಾಮಾಂತರ ಎಸ್ಪಿ ವಂಶಿಕೃಷ್ಣ ರಾಜಾನುಕುಂಟೆ ಪೊಲೀಸ್ ಠಾಣೆಗೆ ಆಗಮಿಸಿದ್ದಾರೆ. ಎಸ್ಪಿ ಅವರ ಮೇಲುಸ್ತುವಾರಿಯಲ್ಲಿ ಪ್ರಕರಣವನ್ನು ಪೊಲೀಸ್ ಇನ್ಸ್ಪೆಕ್ಟರ್ ನವೀನ್ ತನಿಖೆ ನಡೆಸುತ್ತಿದ್ದಾರೆ. ಶಾಸಕ ಎಸ್. ಆರ್. ವಿಶ್ವನಾಥ್ ಹೇಳಿಕೆ ಪಡೆದ ಬೆನ್ನಲ್ಲೇ ಪ್ರಕರಣದ ಎರಡನೇ ಆರೋಪಿ ಕುಳ್ಳ ದೇವರಾಜ್ ನನ್ನು ಪೊಲೀಸರು ಬಂಧಿಸಿದ್ದರು. ಇದೀಗ ಮೊದಲನೇ ಆರೋಪಿಯ ವಿಚಾರಣೆಗೆ ಸಿದ್ಧತೆ ನಡೆಸಿದ್ದಾರೆ. ಆದರೆ, ಗೋಪಾಲಕೃಷ್ಣ ಬಂಧನದ ಭೀತಿಯಿಂದ ತಲೆಮರೆಸಿಕೊಂಡಿದ್ದಾರೆ. ಜಾಮೀನು ಕೋರಿ ನ್ಯಾಯಾಲಯದ ಮೊರೆ ಹೋಗಿದ್ದಾರೆ ಎಂದು ಹೇಳಲಾಗಿದೆ.
ವಿಶ್ವನಾಥ್ ಕೊಲೆ ಪ್ರಕರಣದಲ್ಲಿ ಎರಡನೇ ಆರೋಪಿ ಕುಳ್ಳ ದೇವರಾಜ್ ಬಂಧನಕ್ಕೆ ಒಳಗಾಗಿದ್ದಾನೆ. ವಿಚಾರಣೆ ವೇಳೆ ಮಹತ್ವದ ಸಾಕ್ಷಗಳು ಲಭ್ಯವಾಗಿವೆ. ಕುಳ್ಳ ದೇವರಾಜ್ ಕೃತ್ಯಕ್ಕೆ ಬಳಸಿದ್ದ ಎರಡು ಮೊಬೈಲ್ ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಪೊಲೀಸರಿಗೆ ಸಿಕ್ಕಿ ಬೀಳುವ ಸಾಧ್ಯತೆ ಹಿನ್ನೆಲೆಯಲ್ಲಿ ಒಂದು ಮೊಬೈಲ್ ಕುಳ್ಳ ದೇವರಾಜ್ ಬಚ್ಚಿಟ್ಟಿದ್ದ. ಮನೆ ಶೋಧ ನಡೆಸಿದಾಗ ಆ ಮೊಬೈಲ್ ಸಿಕ್ಕಿದೆ. ಎರಡೂ ಮೊಬೈಲ್ ನಲ್ಲಿ ಕೊಲೆ ಸಂಚಿನ ಸಂಭಾಷಣೆಗೆ ಸಂಬಂಧಿಸಿದಂತೆ ಯಾವುದೇ ವಿಡಿಯೋ ಪೊಲೀಸರಿಗೆ ಲಭ್ಯವಾಗಿಲ್ಲ.
ವೃತ್ತಿಪರ ಕ್ರಿಮಿನಲ್:
ಕುಳ್ಳ ದೇವರಾಜ್ ಇತ್ತೀಚೆಗೆ ಶಾಸಕ ಎಸ್. ಆರ್. ವಿಶ್ವನಾಥ್ ಅವರ ಜೊತೆ ಗುರುತಿಸಿಕೊಂಡಿದ್ದ. ಈತನ ವಿರುದ್ಧ ಹಲವಾರು ಅಪರಾಧ ಪ್ರಕರಣಗಳು ದಾಖಲಾಗಿವೆ. 2008 ರಲ್ಲಿ ಅತ್ಯಾಚಾರ ಪ್ರಕರಣದಲ್ಲಿ ಕುಳ್ಳ ದೇವರಾಜ್ ಪೊಲೀಸರ ಅತಿಥಿಯಾಗಿದ್ದ. ಆ ಬಳಿಕ ನಿವೇಶನ ಗಲಾಟೆ ವಿಚಾರದಲ್ಲೂ ಹಲ್ಲೆ ಮಾಡಿ ಈತನ ವಿರುದ್ಧ ಕೊಲೆ ಯತ್ನ ದೂರು ದಾಖಲಾಗಿತ್ತು. ಸಾಲು ಸಾಲು ಅಪರಾಧ ಪ್ರಕರಣಗಳಲ್ಲಿ ಕುಳ್ಳ ದೇವರಾಜ್ ಬಂಧನಕ್ಕೆ ಒಳಗಾಗಿದ್ದ.
ಕೇಂದ್ರ ವಲಯದ ಐಜಿಪಿ ಭೇಟಿ:
ಶಾಸಕ ಎಸ್.ಆರ್. ವಿಶ್ವನಾಥ್ ಕೊಲೆಗೆ ಸಂಚು ರೂಪಿಸಿದ ಪ್ರಕರಣದ ಮಾಹಿತಿ ಪಡೆಯಲು ಕೇಂದ್ರ ವಲಯದ ಐಜಿಪಿ ಚಂದ್ರಶೇಖರ್ ರಾಜಾನುಕುಂಟೆ ಪೊಲೀಸ್ ಠಾಣೆಗೆ ಭೇಟಿ ನೀಡಲಿದ್ದಾರೆ. ಪ್ರಕರಣದ ತನಿಖಾ ಮಾಹಿತಿ ಪಡೆಯಲಿದ್ದಾರೆ. ಈಗಾಗಲೇ ಪ್ರಕರಣಕ್ಕೆ ಸಂಬಂಧಸಿದಂತೆ ನ್ಯಾಯ ಸಮ್ಮತ ತನಿಖೆ ನಡೆಸುವಂತೆ ಪೊಲೀಸರಿಗೆ ಸೂಚಿಸಿದ್ದಾರೆ.
ರಾಜಕೀಯ ದ್ವೇಷ:
ಕಡಬಗೆರೆ ಸೀನನ ಆಪ್ತನಾಗಿರುವ ಗೋಪಾಲಕೃಷ್ಣ ಎರಡು ಬಾರಿ ಯಲಹಂಕ ಕ್ಷೇತ್ರದಲ್ಲಿ ಎಸ್.ಆರ್. ವಿಶ್ವನಾಥ್ ವಿರುದ್ಧ ಸ್ಪರ್ಧಿಸಿ ಸೋಲನುಭವಿಸಿದ್ದರು. ಮೊದಲಿನಿಂದಲೂ ರಾಜಕೀಯ ವೈರಿಗಳಾಗಿರುವ ಎಸ್.ಆರ್. ವಿಶ್ವನಾಥ್ ಮತ್ತು ಗೋಪಾಲಕೃಷ್ಣ ಬಹಿರಂಗ ಅರೋಪ ಮತ್ತು ಪ್ರತ್ಯಾರೋಪಕ್ಕೆ ಇಳಿದಿದ್ದೇ ಅಪರೂಪ. ಆದರೆ 2017 ರಲ್ಲಿ ಯಶವಂತಪುರ ಎಪಿಎಂಸಿ ಯಾರ್ಡ್ ಅಧ್ಯಕ್ಷ ಕಡಬಗೆರೆ ಸೀನ ಅವರ ಮೇಲೆ ಕೋಗಿಲು ಕ್ರಾಸ್ ಬಳಿ ನಡೆದ ದಾಳಿಯಲ್ಲಿ ಎಸ್.ಅರ್. ವಿಶ್ವನಾಥ್ ಅವರ ಮೇಲೆ ಆರೋಪ ಬಂದಿತ್ತು. ಸೀನನ ಆಪ್ತನಾಗಿ ಗುರುತಿಸಿಕೊಂಡಿದ್ದ ಗೋಪಾಲಕೃಷ್ಣ ಇದೀಗ ವಿಶ್ವನಾಥ್ ಕೊಲೆಗೆ ಸಂಚು ರೂಪಿಸಿದ ಪ್ರಕರಣದಲ್ಲಿ ಸಿಲುಕಿಕೊಂಡಿದ್ದಾರೆ.
Recommended Video