ಜಾತಿ ಗಣತಿಯಲ್ಲಿ ಸರಿಯಾದ ಮಾಹಿತಿ ಕೊಡಿ
ಬೆಂಗಳೂರು, ಡಿ. 1: ರಾಜ್ಯದಲ್ಲಿ 81 ವರ್ಷಗಳ ನಂತರ ಜಾತಿ ಗಣತಿ ನಡೆಯುತ್ತಿದೆ. ಎಲ್ಲ ಜಾತಿ, ವರ್ಗಗಳ ಜನರು ಗಣತಿ ಸಂದರ್ಭದಲ್ಲಿ ಸೂಕ್ತ ಮಾಹಿತಿ ನೀಡಿ ಸಹಕರಿಸಬೇಕೆಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್. ಆಂಜನೇಯ ಮನವಿ ಮಾಡಿದ್ದಾರೆ.
ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಜಾತಿ ಸಮೀಕ್ಷೆ ಕುರಿತು ಸಾಹಿತಿಗಳು, ಚಿಂತಕರು, ಕಲಾವಿದರೊಂದಿಗೆ ಸೋಮವಾರ ಏರ್ಪಡಿಸಿದ್ದ ಸಮಾಲೋಚನೆ ಸಭೆಯ ನಂತರ ಪತ್ರಕರ್ತರೊಂದಿಗೆ ಸಚಿವರು ಮಾತನಾಡಿದರು. [ಜಾತಿ ಗಣತಿಗೆ ಬರ್ತಾರೆ ಚಿತ್ರ ನಟರು]
ನಿಖರ ಮಾಹಿತಿ ನೀಡಿದರೆ ಹಿಂದುಳಿದ ವರ್ಗಗಳಿಗೆ ಸರ್ಕಾರದ ಸೌಲಭ್ಯ ಒದಗಿಸಲು ಸಾಧ್ಯವಾಗಲಿದೆ. ಆದ್ದರಿಂದ ಎಲ್ಲ ಸಮುದಾಯಗಳ ಜನರು ಮಾಹಿತಿ ಒದಗಿಸಬೇಕು. ಗಣತಿ ಕುರಿತು ಜಾಗೃತಿ ಮೂಡಿಸಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮೂಲಕ ಪ್ರಚಾರಾಂದೋಲನ ಏರ್ಪಡಿಸಲಾಗುವುದು ಎಂದು ತಿಳಿಸಿದರು. [ಜಾತಿ ಸಮೀಕ್ಷೆಗೆ ಸರ್ಕಾರ ಸಮ್ಮತಿ]
ಒಂದು ದಿನದ ಕಾರ್ಯಾಗಾರ: ಶೀಘ್ರ ಜಿಲ್ಲಾ ಉಸ್ತುವಾರಿ ಪ್ರಧಾನ ಕಾರ್ಯದರ್ಶಿಗಳು, ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಮಹಾನಗರ ಪಾಲಿಕೆಗಳ ಆಯುಕ್ತರಿಗೆ ಒಂದು ದಿನದ ಕಾರ್ಯಾಗಾರ ಏರ್ಪಡಿಸಲಾಗುವುದೆಂದು ತಿಳಿಸಿದರು. [ಜಾತಿ ಮೀಸಲಾತಿ ನಿಷೇಧ ಅಸಾಧ್ಯ, ಏಕೆಂದರೆ?]
ಸಮೀಕ್ಷೆ ಕಾರ್ಯಕ್ಕೆ ಶಿಕ್ಷಕರನ್ನು ಬಳಸಿಕೊಳ್ಳುವುದಿಲ್ಲ. ಕಂದಾಯ ಇಲಾಖೆ ಸಿಬ್ಬಂದಿ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ಸೇವೆಯನ್ನು ಬಳಸಿಕೊಳ್ಳಲಾಗುವುದು. ಗಣತಿಗಾಗಿ 1.2 ಲಕ್ಷ ಸಿಬ್ಬಂದಿ ಅಗತ್ಯ. ಈಗಾಗಲೇ 60 ಸಾವಿರ ಜನರನ್ನು ನೇಮಕ ಮಾಡಿಕೊಂಡು ತರಬೇತಿ ನೀಡಲಾಗುತ್ತಿದೆ ಎಂದು ವಿವರಿಸಿದರು. [ಬ್ರಾಹ್ಮಣ, ವೈಶ್ಯರಿಗೂ ಮೀಸಲಾತಿ]
ಸಭೆಯಲ್ಲಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕಾಂತರಾಜ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ, ನಾಡೋಜ ಹಂ.ಪ. ನಾಗರಾಜಯ್ಯ, ಸಂಗೀತ ನಿರ್ದೇಶಕ ಹಂಸಲೇಖಾ, ಸಾಹಿತಿ ಡಾ. ಸಿದ್ದಲಿಂಗಯ್ಯ, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಎಸ್.ವಿ. ರಾಜೇಂದ್ರಸಿಂಗ್ಬಾಬು, ಜಿ.ಕೆ. ಸತ್ಯ, ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ದ್ವಾರಕಾನಾಥ್, ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ಬಿ.ಕೆ. ರವಿ, ದೇವರಾಜ ಅರಸು ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಮಚಂದ್ರಪ್ಪ, ಕನ್ನಡ ಮತ್ತು ಸಂಸ್ಕೃತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕ ಎನ್.ಆರ್. ವಿಶುಕುಮಾರ್ ಇತರರು ಪಾಲ್ಗೊಂಡಿದ್ದರು.