ಬೆಂಗಳೂರಿನ ಈ ಮುದ್ದಾದ ಮಗುವಿನ ಚಿಕಿತ್ಸೆಗೆ ದಾನ ಮಾಡಿ
ಬೆಂಗಳೂರು, ಜು. 15 : ಬೆಂಗಳೂರಿನ ರಾಜರಾಜೇಶ್ವರಿ ನಗರದ ಲಲಿತ್ ಕ್ಯಾಸಲ್ ಇಂಟರ್ನ್ಯಾಷನಲ್ ಶಾಲೆಯಲ್ಲಿ ಓದುತ್ತಿರುವ 5 ವರ್ಷದ ಚಾರ್ವಿ ಎನ್ ಗೌಡ ಬಲು ಚೂಟಿ ಹುಡುಗಿ, ಕ್ಲಾಸಲ್ಲಿ ಫಸ್ಟ್. ನೋಡಲು ಕೂಡ ಅಷ್ಟೇ ಮುದ್ದುಮುದ್ದಾಗಿದ್ದಾಳೆ. ಆದರೆ, ಅದ್ಯಾರ ದೃಷ್ಟಿ ತಾಕಿತೋ ಏನೊ ರಕ್ತ ಬಸಿಯುವಂಥ ರೋಗವೊಂದು ಪುಟ್ಟ ಹುಡುಗಿಯನ್ನು ಅಮರಿಕೊಂಡುಬಿಟ್ಟಿದೆ.
ರಕ್ತದ ಕಣಗಳನ್ನು ಕಡಿಮೆ ಮಾಡುವಂಥ (Unstable Haemoglobin Disease) ಅಪರೂಪದಲ್ಲಿ ಅಪರೂಪವಾದ ರೋಗದಿಂದ ಚಾರ್ವಿ ಬಳಲುತ್ತಿದ್ದು, ಬೋನ್ ಮ್ಯಾರೋ ಟ್ರಾನ್ಸ್ಪ್ಲಾಂಟ್ ಚಿಕಿತ್ಸೆಯೊಂದೇ ಈಗ ಆಕೆಯನ್ನು ಬದುಕಿಸಿಕೊಳ್ಳಲು ಉಳಿದಿರುವಂಥ ದಾರಿ. ಇದು ಖಂಡಿತ ಸಾಧ್ಯವಿದೆ. ಆದರೆ, ಚಿಕಿತ್ಸೆಗಾಗಿ ಬೇಕಾಗಿರುವುದು 25 ಲಕ್ಷ ರು. ಮೊತ್ತ! [ತುರ್ತಾಗಿ ರಕ್ತಬೇಕೆ?, ವೆಬ್ಸೈಟ್ಗೆ ಭೇಟಿ ಕೊಡಿ]
ಚಾರ್ವಿಯ ತಾಯಿ ರಮ್ಯಾ ನಾರಾಯಣ್ ರಾಜರಾಜೇಶ್ವರಿ ನಗರದಲ್ಲಿ ಲ್ಯಾಬ್ ಟೆಕ್ನೀಷಿಯನ್ ಆಗಿ ಕೆಲಸ ಮಾಡುತ್ತಿದ್ದಾರೆ. ಹಲವಾರು ರೋಗಿಗಳ ರಕ್ತದ ಪರೀಕ್ಷೆಯನ್ನು ಮಾಡಿದ್ದಾರೆ. ಆದರೆ, ತನ್ನ ಮಗಳಿಗೆ ಇಂಥದೊಂದು ಅನಾರೋಗ್ಯ ಅಂಟಿಕೊಳ್ಳುತ್ತದೆಂದು ಅವರು ಕನಸು ಮನಸಿನಲ್ಲೂ ನೆನೆಸಿರಲಿಲ್ಲ. ಈಗ ಅನ್ಯ ಮಾರ್ಗವಿಲ್ಲದೆ ದಾನಿಗಳ ಸಹಾಯಕ್ಕೆ ಅವರು ಹಸ್ತ ಚಾಚಿದ್ದಾರೆ.
ದುರಂತ ಕಥೆ : ಚಾರ್ವಿ ಮೂರು ತಿಂಗಳಿದ್ದಾಗಲೇ ಅನಾರೋಗ್ಯಕ್ಕೆ ತುತ್ತಾಗಿದ್ದಳು. ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಹಲವಾರು ರೀತಿಯಲ್ಲಿ ಪರೀಕ್ಷೆ ಮಾಡಿಸಿದಾಗ ಆಕೆಗೆ Hereditary Spherocytosis ಎಂಬ ರಕ್ತದ ಕಣಗಳನ್ನು ಕುಗ್ಗಿಸುವಂಥ ತೊಂದರೆ ಇದೆ ಎಂದು ತಜ್ಞ ವೈದ್ಯರು ಅಭಿಪ್ರಾಯ ಪಟ್ಟಿದ್ದರು. [ಕೋಲ್ಕತಾದ ಪ್ರತಿಭಾವಂತ ವಿದ್ಯಾರ್ಥಿನಿಯನ್ನು ಕಾಪಾಡಿ]
ಇದರ ಚಿಕಿತ್ಸೆಗಾಗಿ ಲೆಕ್ಕವಿಲ್ಲದಷ್ಟು ರಕ್ತದ ತಪಾಸಣೆ, ಬ್ಲಡ್ ಟ್ರಾನ್ಸ್ಫ್ಯೂಜನ್ (ರಕ್ತ ನೀಡುವಿಕೆ), ಫಾಲಿಕ್ ಆಸಿಡ್ ಟ್ಯಾಬ್ಲೆಟ್ಟುಗಳು ಆಕೆಯ ದೇಹ ಸೇರಿದರೂ ಚಿಕಿತ್ಸೆ ಫಲ ನೀಡಲಿಲ್ಲ. ಬದಲಿಗೆ ಆಕೆಯ ಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತ ಸಾಗಿತು. ಇಲ್ಲಿಯವರೆಗೆ 26 ಬಾರಿ ಬ್ಲಡ್ ಟ್ರಾನ್ಸ್ಫ್ಯೂಜನ್ ಮಾಡಲಾಗಿದೆ ಎಂದರೆ ಎಷ್ಟೊಂದು ಹೊಡೆತಗಳನ್ನು ಸಹಿಸಿಕೊಂಡಿರಬಹುದು ಸದಾ ನಗುತ್ತಿರುವ ಆ ಪುಟ್ಟಮಗು!
ಆಕೆಯ ಸ್ಥಿತಿ ಚಿಂತಾಜನಕವಾದಾಗ ಸೇಂಟ್ ಜಾನ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಹಿಂದಿನ ರೋಗದ ಲಕ್ಷಣಗಳು ಹೊಂದಾಣಿಕೆಯಾಗದಿದ್ದಾಗ ಅನುಮಾನಗೊಂಡ ವೈದ್ಯರು (ಪೀಡಿಯಾಟ್ರಿಕ್ ಹೆಮಟಾಲಾಜಿಸ್ಟ್) ಇನ್ನಷ್ಟು ಉನ್ನತ ಪರೀಕ್ಷೆಗಳನ್ನು ಮಾಡಿಸಬೇಕೆಂದು ಹೇಳಿದ್ದಾರೆ. ಪರೀಕ್ಷೆಯ ನಂತರ ಸಿಡಿಲು ಬಡಿದಂಥ ಸಂಗತಿ ಬಯಲಾಗಿತ್ತು. ಮೊದಲು ಮಾಡಲಾದ ರೋಗಪರೀಕ್ಷೆ ತಪ್ಪಾಗಿತ್ತು.
ಆಕೆಯ ರಕ್ತದಲ್ಲಿನ ಹಿಮೊಗ್ಲೋಬಿನ್ ಪ್ರಮಾಣ ತೀರ ಕುಸಿಯುತ್ತಿದ್ದು, ಜೀವನಪರ್ಯಂತ ರಕ್ತ ನೀಡುತ್ತಲೇ ಇರಬೇಕು. ಆದರೆ, ಇದು ಆಕೆಯನ್ನು ಮತ್ತಷ್ಟು ತೊಂದರೆಗೆ ಸಿಲುಕಿಸುವುದರಿಂದ ಬೋನ್ ಮ್ಯಾರೋ ಟ್ರಾನ್ಸ್ಪ್ಲಾಂಟ್ ಮಾಡಲೇಬೇಕಾಗಿ ಬಂದಿದೆ. ಆಗಸ್ಟ್ ತಿಂಗಳಲ್ಲಿ ನಾರಾಯಣ ಹೆಲ್ತ್ ಮಜುಂದಾರ್ ಷಾ ಮೆಡಿಕಲ್ ಸೆಂಟರ್ ನಲ್ಲಿ ಈ ದುಬಾರಿ ಚಿಕಿತ್ಸೆ ಮಾಡಲು ನಿರ್ಧರಿಸಲಾಗಿದೆ.
ಈ ಚಿಕಿತ್ಸೆಗೆ ತಲಗುವ ವೆಚ್ಚ 25 ಲಕ್ಷ ರು. ಇಷ್ಟೊಂದು ಹಣ ಹೊಂದಿಸಲು ಆರ್ಥಿಕವಾಗಿ ಅಷ್ಟೊಂದು ಸಬಲರಾಗಿಲ್ಲದಿದ್ದರಿಂದ ದಾನಿಗಳು ದಯವಿಟ್ಟು ಮನಬಿಚ್ಚಿ ದಾನ ಮಾಡಬೇಕೆಂದು ಚಾರ್ವಿಯ ತಾಯಿ ರಮ್ಯಾ ಅವರು ಕೋರಿದ್ದಾರೆ. ಚೂಟಿಯಾಗಿರುವ, ಮುದ್ದುಮುದ್ದಾಗಿರುವ ಮಗು ಚಾರ್ವಿ ಮತ್ತೆ ತನ್ನ ಬಾಲ್ಯ, ಬದುಕನ್ನು ಮರಳಿ ಪಡೆಯಬೇಕಿದ್ದರೆ ದಾನಿಗಳು ದಾನ ಮಾಡಬಹುದು. ಅದಕ್ಕೆ ಲಿಂಕ್ ಇಲ್ಲಿದೆ.