NLSIUನಲ್ಲಿ ಮೀಸಲಾತಿ, ದೆಹಲಿ ಕೋರ್ಟಲ್ಲಿ ಕನ್ನಡಿಗರಿಗೆ ಮುನ್ನಡೆ
ಬೆಂಗಳೂರು/ನವದೆಹಲಿ, ಜುಲೈ 3: ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ(NLSIU)ಯಲ್ಲಿ ನೂತನವಾಗಿ ಜಾರಿಗೆ ತಂದಿರುವ ಸ್ಥಳೀಯರಿಗೆ ಪ್ರಾತಿನಿಧ್ಯ ನೀಡಲು ಕರ್ನಾಟಕ ಸರ್ಕಾರ ವಿಧೇಯಕ ಜಾರಿಗೆ ತಂದಿತ್ತು. ಈ ಕರ್ನಾಟಕ ಡೊಮಿಸೈಲ್ ರಿಸರ್ವೇಷನ್ ಬಿಲ್ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಇಂದು(ಜುಲೈ 03) ವಜಾಗೊಳಿಸಿದೆ.
Recommended Video
ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯಲ್ಲಿ ಸ್ಥಳೀಯರಿಗೆ ಶೇಕಡಾ 25 ರಷ್ಟು ಪ್ರಾತಿನಿಧ್ಯ ಕಲ್ಪಿಸಲು ಕಳೆದ ಫೆಬ್ರವರಿ ತಿಂಗಳಲ್ಲಿ ರಾಜ್ಯ ವಿಧಾನ ಮಂಡಲದ ಉಭಯ ಸದನಗಳಲ್ಲಿ ಅನುಮೋದನೆಗೊಂಡು, ಮೇ ತಿಂಗಳಲ್ಲಿ ರಾಜ್ಯಪಾಲರ ಅಂಗೀಕಾರ ಪಡೆದಿತ್ತು. ಆದರೆ, ಕರ್ನಾಟಕ ಡೊಮಿಸೈಲ್ ರಿಸರ್ವೇಷನ್ ಬಿಲ್ ವಿರುದ್ಧ ಶುಭಮ್ ಕುಮಾರ್ ಝಾ ಎಂಬುವರರು ದಾವೆ ಹೂಡಿದ್ದರು. ಆದರೆ, ದಾವೆ ನ್ಯಾಯಾಲಯದ ಸರಹದ್ದು ಮೀರಿದ್ದಾಗಿದೆ ಎಂದು ಅಭಿಪ್ರಾಯಪಟ್ಟ ದೆಹಲಿ ಉಚ್ಛ ನ್ಯಾಯಾಲಯವು ಅರ್ಜಿದಾರರ ಮನವಿಯನ್ನು ವಜಾಗೊಳಿಸಿದೆ.
ಕರ್ನಾಟಕ ರಾಜ್ಯ ವಿಧಾನ ಮಂಡಲದಲ್ಲಿ ಅನುಮೋದಿತವಾಗಿರುವ ವಿಧೇಯಕವನ್ನು ದೆಹಲಿಯಲ್ಲಿ ಪ್ರಶ್ನಿಸುವುದರ ಔಚಿತ್ಯವನ್ನು ಪ್ರಶ್ನಿಸಿದ ನ್ಯಾಯಾಲಯವು ಭಾರತ ಸಂವಿಧಾನದ ಅನುಚ್ಚೇಧ 226(2) ಅನುಗುಣವಾಗಿ ಭಾರತದ ಪ್ರಜೆ ಯಾವುದೇ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲು ಹಕ್ಕುವುಳ್ಳವರಾಗಿದ್ದಾರೆ ಎಂಬ ಅರ್ಜಿದಾರರ ವಾದವನ್ಹು ಅಂಗೀಕರಿಸಲಿಲ್ಲ. ಅಲ್ಲದೆ, ಇದು ನ್ಯಾಯಾಲಯದ ಸರಹದ್ದು ಮೀರಿದೆ ಎಂದು ಅಭಿಪ್ರಾಯಪಟ್ಟು ಅರ್ಜಿಯನ್ನು ವಜಾಗೊಳಿಸಿದೆ.
ಕರ್ನಾಟಕದ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸುವಲ್ಲಿ ಸಮರ್ಥವಾಗಿ ವಾದ ಮಂಡಿಸಿದ ರಾಜ್ಯದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವಡಗಿ ಹಾಗೂ ದೆಹಲಿಯಲ್ಲಿರುವ ರಾಜ್ಯದ ಕಾನೂನು ತಂಡಕ್ಕೆ ಕಾನೂನು ಮತ್ತು ಸಂಸದೀಯ ಸಚಿವ ಜೆ ಸಿ ಮಾಧುಸ್ವಾಮಿ ಅವರು ಅಭಿನಂದಿಸಿದ್ದಾರೆ.