ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಪ್ಲಾಸ್ಟಿಕ್ ಬಾಟಲಿ ಕ್ರಷರ್ ಯಂತ್ರ
ಬೆಂಗಳೂರು, ನವೆಂಬರ್ 22: ಪ್ಲಾಸ್ಟಿಕ್ ಬಳಕೆ ನಿಷೇಧದ ಕುರಿತು ಧ್ವನಿ ಕೇಳುತ್ತಿರುವ ಬೆನ್ನಲ್ಲೇ ಮೆಜೆಸ್ಟಿಕ್ನಲ್ಲಿ ಪ್ಲಾಸ್ಟಿಕ್ ಬಾಟಲಿ ಕ್ರಷಿಂಗ್ ಮಷಿನ್ ಅಳವಡಿಕೆ ಮಾಡಲು ಕೆಎಸ್ಆರ್ಟಿಸಿ ತೀರ್ಮಾನಿಸಿದೆ.
ಕೆಂಪೇಗೌಡ ಬಸ್ ನಿಲ್ದಾಣ ಸದಾ ಪ್ರಯಾಣಿಕರಿಂದ ಗಿಜಿಗುಡುತ್ತಿದೆ. ನಿತ್ಯ ಈ ಭಾಗದಲ್ಲಿ ಸಂಚರಿಸುವ ಲಕ್ಷಾಂತರ ಪ್ರಯಾಣಿಕರು ಬಳಸಿ ಬಿಸಾಡುವ ಪ್ಲಾಸ್ಟಿಕ್ ಬಾಟಲಿ ಭಾರಿ ಪ್ರಮಾಣದಲ್ಲಿ ಕಸದ ಬುಟ್ಟಿ ಸೇರುತ್ತಿದೆ.
ಏಕ-ಬಳಕೆ ಪ್ಲಾಸ್ಟಿಕ್ ನಿಷೇಧ, ರೈಲಿನಲ್ಲಿ ನೀರಿನ ಬಾಟಲಿ ಹಿಂದಿರುಗಿಸಿ
ಪರಿಸರಕ್ಕೆ ಮಾರಕವಾಗುವ ಈ ಪ್ಲಾಸ್ಟಿಕ್ ಬಾಟಲಿಗಳನ್ನು ಪುನರ್ ಬಳಕೆಗೆ ಅನುಕೂಲವಾಗುವಂತೆ ಮಾಡಲು ಯಂತ್ರ ಅಳವಡಿಸಲಾಗುತ್ತಿದೆ.
ಪ್ರಯಾಣಿಕರಿಗೆ ಅರಿವು
ಪ್ರಯಾಣಿಕರಲ್ಲಿ ಅರಿವು ಮೂಡಿಸುವ ಕೆಲಸವಾಗಬೇಕಿದೆ, ಬಸ್ ನಿಲ್ದಾಣದಲ್ಲಿ ಈ ಯಂತ್ರ ಅಳವಡಿಕೆ ಬಳಿಕ ಯಂತ್ರ ಬಳಕೆ ಕುರಿತು ಪ್ರಯಾಣಿಕರಿಗೆ ಅರಿವು ಮೂಡಿಸಲಾಗುತ್ತದೆ.ನೀರು ಅಥವಾ ತಂಪು ಪಾನೀಯ ಕುಡಿದ ಬಳಿಕ ಖಾಲಿ ಬಾಟಲಿಗಳನ್ನು ಕಸದಬುಟ್ಟಿಗೆ ಹಾಕುವ ಬದಲು ಈ ಯಂತ್ರದೊಳಗೆ ಹಾಕುವಂತೆ ಮನವಿ ಮಾಡಲಾಗುತ್ತಿದೆ.
ದಿನಕ್ಕೆ 2400 ಬಾಟಲಿ ಪುಡಿ
ಸುಮಾರು ಮೂರು ಲಕ್ಷ ವೆಚ್ಚದ ಈ ಯಂತ್ರವು ದಿನಕ್ಕೆ 2400 ಬಾಟಲಿ ಪುಡಿ ಮಾಡಬಹುದು. ಗರಿಷ್ಠ ಎರಡು ಲೀಟರ್ ಸಾಮರ್ಥ್ಯದ ಪ್ಲಾಸ್ಟಿಕ್ ಬಾಟಲಿಗಳನ್ನು ಕೆಲವೇ ಸೆಕೆಂಡುಗಳಲ್ಲಿ ಪುಡಿಮಾಡಲಿದೆ.
ಸಿಎಸ್ಆರ್ ಫಂಡ್ ಬಳಕೆ
ಈ ಯೋಜನೆಗೆ ಸಿಎಸ್ಆರ್ ಫಂಡ್ ಬಳಕೆ ಮಾಡಲಾಗುತ್ತದೆ. ನಿಗಮು ಯಾವುದೇ ಹಣ ವಿನಿಯೋಗಿಸುತ್ತಿಲ್ಲ. ಗ್ರೀನ್ ರೀ ಸೈಕ್ಲೋ ಸಲ್ಯೂಷನ್ ಪ್ರೈವೇಟ್ ಲಿಮಿಟೆಡ್ ಕಂಪನಿಯು ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ ಬಸ್ ನಿಲ್ದಾಣದಲ್ಲಿ ಯಂತ್ರ ಅಳವಡಿಸಲಾಗುತ್ತಿದೆ.
ಜಾಗ ಮತ್ತು ವಿದ್ಯುತ್ ನೀಡಲಿದೆ
ಕೆಎಸ್ಆರ್ಟಿಸಿ ಈ ಕಂಪನಿಗೆ ನಿಲ್ದಾಣದಲ್ಲಿ ಕೇವಲ ಜಾಗ ಮತ್ತು ವಿದ್ಯುತ್ ಮಾತ್ರ ಒದಗಿಸಲಿದೆ. ಪ್ರಾಯೋಗಿಕವಾಗಿ ನಿಲ್ದಾಣದಲ್ಲಿ ಒಂದು ಯಂತ್ರ ಮಾತ್ರ ಅಳವಡಿಸಲು ನಿರ್ಧರಿಸಲಾಗಿದೆ.