ಬಿಪಿಎಲ್ ಪಡಿತರ ಅಕ್ಕಿ 8ಕೆಜಿ ವರೆಗೆ ಹೆಚ್ಚಳ: ಸಿದ್ದು
ಬೆಂಗಳೂರು, ಫೆಬ್ರವರಿ 8: ಬಿಪಿಎಲ್ ಪಡಿತರ ಚೀಟಿ ಹೊಂದಿರುವವರಿಗೆ ಸಿಹಿಸುದ್ದಿ, ಬಿಪಿಎಲ್ ಕಾರ್ಡ್ ದಾರರಿಗೆ ನೀಡುತ್ತಿರುವ ಅಕ್ಕಿಯ ಪ್ರಮಾಣವನ್ನು ಯೂನಿಟ್ ಗೆ 8 ಕೆಜಿವರೆಗೆ ಏರಿಕೆ ಮಾಡುವುದಾಗಿ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಅಕ್ಕಿ ಪ್ರಮಾಣ ಯೂನಿಟ್ ಗೆ 8 ಕೆ.ಜಿ. ವರೆಗೆ ಏರಿಕೆಯಾಗುವುದು ಏಪ್ರಿಲ್ ನಿಂದಲೇ ಜಾರಿಯಾಗಲಿದೆ. ಆಧಾರ್ ಲಿಂಕ್ ಇಲ್ಲದ ಬಿಪಿಎಲ್ ಕಾರ್ಡ್ ದಾರರಿಗೆ ಎರಡು ತಿಂಗಳವರೆಗೆ ಪಡಿತರ ಧಾನ್ಯ ವಿತರಣೆ ಯಾಗಲಿದೆ. ಗ್ಯಾಸ್ ಸಂಪರ್ಕ ಇದ್ದವರಿಗೂ ಸೀಮೆಎಣ್ಣೆ ನೀಡಲು ನಿರ್ಧಾರಿಸಲಾಗಿದೆ. ಕ್ಷೀರಭಾಗ್ಯದಲ್ಲಿ ಶಾಲಾ ಮಕ್ಕಳಿಗೆ 5 ದಿನವೂ ಹಾಲು ವಿತರಿಸಲು ತೀರ್ಮಾನಿಸಲಾಗಿದೆ ಎಂದು ಬುಧವಾರ ನಡೆದ ಶಾಸಕಾಂಗ ಸಭೆಯಲ್ಲಿ ಮುಖ್ಯಮಂತ್ರಿಗಳು ತಿಳಿಸಿದರು.[ಬಿಪಿಎಲ್ ಕಾರ್ಡಿಗೆ ಹೆಸರು ಕಾಳು, ಮುಕ್ತ ಮಾರುಕಟ್ಟೆಗೆ ಬಿಳಿ ಸೀಮೆಎಣ್ಣೆ]
ಅಲ್ಲದೆ ಬರ ಪರಿಹಾರಕ್ಕೆ ಸಂಬಂಧಿಸಿದಂತೆ ಕಾಮಗಾರಿಗಳ ಬಗ್ಗೆಯೂ ಚರ್ಚೆ ನಡೆಸಿದರು. ಬರಪರಿಹಾರ ಕಾಮಗಾರಿಗಳು ತೃಪ್ತಿದಾಯಕವಾಗಿಲ್ಲ ಹೆಚ್ಚಿನ ಅನುದಾನ ಕೇಂದ್ರದಿಂದ ಒದಗಿ ಬಂದಿದ್ದರೆ ರೈತರು ಮತ್ತು ಜಾನುವಾರುಗಳಿಗೆ ಪರಿಹಾರ ಕಲ್ಪಿಸಬಹುದಾಗಿತ್ತು ಎಂದು ಶಾಸಕರು ತಿಳಿಸಿದರು.[ಬಿಪಿಎಲ್ ಕುಟುಂಬಕ್ಕೆ ಸಬ್ಸಿಡಿ ದರದಲ್ಲಿ ತಾಳೆಎಣ್ಣೆ ವಿತರಣೆ]
ಗಂಗಾ ಕಲ್ಯಾಣ ಯೋಜನೆಯಡಿ ರೈತರಿಗಾಗಿ ಮತ್ತು ಕುಡಿಯುವ ನೀರಿಗಾಗಿ ಕೊರೆಸಲಾದ ಬೋರ್ವೆಲ್ ಗಳಿಗೆ ಈ ವರೆಗೂ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ ಎಂದು ಕೆಲ ಶಾಸಕರು ಅಸಮಾಧಾನ ಹೊರಹಾಕಿದರು. ಇನ್ನು ಬುಧವಾರ ನಡೆದ ಶಾಸಕಾಂಗ ಸಭೆಯಲ್ಲಿ ಶೇ.50 ರಷ್ಟು ಶಾಸಕರು ಗೈರು ಹಾಜರಿರುವುದು ಕಂಡು ಬಂತು.