ಬಂದ್ ನಿಂದ ಆಗಿರುವ ನಷ್ಟ ತುಂಬಿ ಕೊಡಿ: ಹೈಕೋರ್ಟ್ಗೆ ಅರ್ಜಿ
ಬೆಂಗಳೂರು, ಜನವರಿ 29: ಮೊನ್ನೆ ನಡೆದ ರಾಜ್ಯ ಬಂದ್ಗೆ ವಿರೋಧ ವ್ಯಕ್ತಪಡಿಸಿ, ಬಂದ್ ನಿಂದ ನಷ್ಟವಾಗುತ್ತದೆ, ಮಾನವ ಹಕ್ಕು ಉಲ್ಲಂಘನೆ ಎಂದೆಲ್ಲಾ ಹಲವರು ಸಾಮಾಜಿಕ ಜಲತಾಣಗಳಲ್ಲಿ ತೌಡು ಕುಟ್ಟಿದರು. ಆದರೆ ಯಾರೂ ಬಂದ್ ವಿರುದ್ಧ ನೇರ ಪ್ರತಿಭಟನೆ ದಾಖಲಿಸಲಿಲ್ಲ ಆದರೆ ಇಲ್ಲೊಂದು ಜವಾಬ್ದಾರಿಯುತ ಸಂಘಟನೆ ಬಂದ್ ನಿಂದ ಆಗಿರುವ ನಷ್ಟ ತುಂಬಿಕೊಡುವಂತೆ ಹೈಕೋರ್ಟ್ನಲ್ಲಿ ದಾವೆ ಹೂಡಿದೆ.
ಜನವರಿ 26ರಂದು ನಡೆದ ಕರ್ನಾಟಕ ಬಂದ್ನಿಂದಾಗಿ ರಾಜ್ಯ ಬೊಕ್ಕಸಕ್ಕೆ ಅಪಾರ ನಷ್ಟವಾಗಿದೆ. ಅಷ್ಟೆ ಅಲ್ಲದೆ ಸಾರ್ವಜನಿಕರ, ವಿದ್ಯಾರ್ಥಿಗಳಿಗೆ ತೀರ್ವ ಸಂಕಷ್ಟ ತಂದಿದೆ ಹಾಗಾಗಿ ಬಂದ್ಗೆ ಕರೆ ನೀಡಿದವರಿಂದಲೇ ಬಂದ್ ನಿಂದಾಗಿರುವ ನಷ್ಟವನ್ನು ತುಂಬಿಕೊಡುವಂತೆ ಆದೇಶ ಹೊರಡಿಸುವಂತೆ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಒಂದು ಹೂಡಲಾಗಿದೆ.
ನಗರದ ಶ್ರದ್ಧಾ ಪೋಷಕರ ಸಭೆ ಎಂಬ ಸಂಘಟನೆ ಈ ಪಿಐಎಲ್ ಅನ್ನು ಹೂಡಿದ್ದು, ಇಂದು ಅದರ ವಿಚಾರಣೆ ನಡೆಸಿದ ವಿಭಾಗೀಯ ಪೀಠವು ವಾಟಾಳ್ ಪಕ್ಷ, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳಿಗೆ ತುರ್ತು ನೊಟೀಸ್ ಜಾರಿ ಮಾಡಿದೆ.
ಬಂದ್ ಬಗ್ಗೆ ತೀರ್ವ ಅಸಮಾಧಾನ ವ್ಯಕ್ತಪಡಿಸಿದ ಹೈಕೋರ್ಟ್ ನಷ್ಟದ ಹೊಣೆ ಯಾರು ಹೊರುತ್ತಾರೆ? ಎಂದು ಖಾರವಾಗಿ ಪ್ರಶ್ನಿಸಿದೆ. ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು 'ಬಂದ್ಗೆ ಕರೆ ನೀಡಿದವರು, ಬೆಂಬಲ ನೀಡಿದವರಿಂದ ಬಂದ್ ನಿಂದಾದ ನಷ್ಟವನ್ನು ತುಂಬುವಂತೆ ಆದೇಶ ಮಾಡಬೇಕು' ಎಂದು ಕೋರಿದ್ದಾರೆ.
ಸರ್ಕಾರದ ಪರ ವಾದಿಸಿದ ವಕೀಲರು ಬಂದ್ ಕರೆ ನೀಡುವುದು ವೈಯಕ್ತಿಕ ಹಕ್ಕು ಎಂದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಿಭಾಗೀಯ ಪೀಠ ಬಂದ್ ಕುರಿತಂತೆ ರಾಜ್ಯ ಸರ್ಕಾರದ ನಿಲುವೇನು ಎಂದು ಪ್ರಶ್ನಿಸಿತು.
ಫೆಬ್ರುವರಿ 4 ರಂದು ನಡೆಸಲು ಉದ್ದೇಶಿಸಿರುವ ಬೆಂಗಳೂರು ಬಂದ್ಗೆ ತಡೆ ನೀಡುವಂತೆ ಪಿಐಎಲ್ ಅರ್ಜಿದಾರರು ಮನವಿ ಮಾಡಿದ್ದು, ಫೆಬ್ರುವರಿ 2ಕ್ಕೆ ವಿಚಾರಣೆ ಮುಂದೂಡಿದೆ.